ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಕೆಶಿ ಹೇಳಿಕೆ: ಚಾಮುಂಡೇಶ್ವರಿ ದೇವಿಯೇ ನಿರ್ಧರಿಸ್ತಾಳೆ ಎಂದ ಕುಮಾರಸ್ವಾಮಿ

| Updated By: ಗಣಪತಿ ಶರ್ಮ

Updated on: Oct 24, 2023 | 9:03 PM

ರಾಮನಗರ ಜಿಲ್ಲೆಯಾದ ನಂತರ ಯಾವ ರೀತಿ ಅಭಿವೃದ್ಧಿಯಾಗಿದೆ ಗೊತ್ತಿದೆ. ನಾನು ಹೆಸರು ಮಾಡಿಕೊಳ್ಳಲು ರಾಮನಗರ ಜಿಲ್ಲೆ ಮಾಡಿಲ್ಲ. ರಾಮನಗರ ಮಣ್ಣಿನ ಶಕ್ತಿ ಹಾಳು ಮಾಡಬೇಕೆನ್ನುವುದು ಈ ವ್ಯಕ್ತಿಗಳ ಹುನ್ನಾರ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿಕೊಂಡು ಆಸ್ತಿ ಮೌಲ್ಯ ಹೆಚ್ಚಿಸಬೇಕೆಂಬ ಹುನ್ನಾರ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಕೆಶಿ ಹೇಳಿಕೆ: ಚಾಮುಂಡೇಶ್ವರಿ ದೇವಿಯೇ ನಿರ್ಧರಿಸ್ತಾಳೆ ಎಂದ ಕುಮಾರಸ್ವಾಮಿ
ಹಂಗರನಹಳ್ಳಿಯಲ್ಲಿರುವ ವಿದ್ಯಾ ಚೌಡೇಶ್ವರಿ ಸನ್ನಿಧಿಯಲ್ಲಿ ಹೆಚ್​ಡಿ ಕುಮಾರಸ್ವಾಮಿ
Follow us on

ತುಮಕೂರು, ಅಕ್ಟೋಬರ್ 24: ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ವಿಲೀನಗೊಳಿಸುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆಗೆ ಮತ್ತೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಏನುಮಾಡಬೇಕೆಂದು ರಾಮನಗರ ಚಾಮುಂಡೇಶ್ವರಿ ದೇವಿಯೇ ನಿರ್ಧರಿಸುತ್ತಾಳೆ ಎಂದು ಹೇಳಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಂಗರನಹಳ್ಳಿಯಲ್ಲಿರುವ ವಿದ್ಯಾ ಚೌಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.

ರಾಮನಗರ ಜಿಲ್ಲೆಯಾದ ನಂತರ ಯಾವ ರೀತಿ ಅಭಿವೃದ್ಧಿಯಾಗಿದೆ ಗೊತ್ತಿದೆ. ನಾನು ಹೆಸರು ಮಾಡಿಕೊಳ್ಳಲು ರಾಮನಗರ ಜಿಲ್ಲೆ ಮಾಡಿಲ್ಲ. ರಾಮನಗರ ಮಣ್ಣಿನ ಶಕ್ತಿ ಹಾಳು ಮಾಡಬೇಕೆನ್ನುವುದು ಈ ವ್ಯಕ್ತಿಗಳ ಹುನ್ನಾರ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿಕೊಂಡು ಆಸ್ತಿ ಮೌಲ್ಯ ಹೆಚ್ಚಿಸಬೇಕೆಂಬ ಹುನ್ನಾರ. ಕನಕಪುರದ ಕಲ್ಲನ್ನು ದೇಶ ವಿದೇಶಗಳಿಗೆ ಸಾಗಿಸಿ ನುಂಗಿ ನೀರು ಕುಡಿದದ್ದಾಯ್ತು. ಅಲ್ಲಿನ ಭೂಮಿ ಬೆಲೆ ಏರಿಸುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ದನ್ನೂ ಓದಿ: ಆಸ್ತಿ ಮೌಲ್ಯ ಹೆಚ್ಚಿಸಿ ಖಜಾನೆ ವೃದ್ಧಿಸುವ ಹುನ್ನಾರ: ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ಕಿಡಿ

ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಶಿಲಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಡಿಕೆ ಶಿವಕುಮಾರ್, ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ. ಅವರು ಯಾರೋ ಹೆಸರು ಮಾಡಿಕೊಳ್ಳುವುದಕ್ಕೆ ರಾಮನಗರ ಜಿಲ್ಲೆ ಮಾಡಿದ್ದಾರೆ. ನಮ್ಮನ್ನು ರಾಮನಗರ ಜಿಲ್ಲೆ ಅಂತಾ ಮೂಲೆಗೆ ತಳ್ಳಬೇಡಿ. ಕನಕಪುರದವರು ಬೆಂಗಳೂರು ಜಿಲ್ಲೆಯವರು ಎಂದು ಹೇಳಿದ್ದರು. ಇದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ಇಷ್ಟೇ ಅಲ್ಲದೆ, ಕನಕಪುರ ಬೆಂಗಳೂರು ಜಿಲ್ಲೆಗೆ ಸೇರುತ್ತೆ. ಇಲ್ಲಿನ ಭೂಮಿ ಅಡಿ ಲೆಕ್ಕದಲ್ಲಿ ವ್ಯವಹಾರ ಆಗಲಿದೆ, ಭೂಮಿ ಮಾರಬೇಡಿ. ನಾನೇನು ಮಾಡಬೇಕು ಅದನ್ನು ಮಾಡೇ ಮಾಡುತ್ತೇನೆ ಎಂದೂ ಡಿಕೆ ಶಿವಕುಮಾರ್ ಹೇಳಿದ್ದರು.

ಇದನ್ನೂ ಓದಿ: ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ: ಡಿಕೆ ಶಿವಕುಮಾರ್​​​

ಇದಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ