ರಾಜ್ಯದ ಹಲವೆಡೆ ಭಾರಿ ಮಳೆ; ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರ ರಕ್ಷಣೆ

ಕೊರಟಗೆರೆ ತಾಲೂಕಿನ ತುಂಬಾಡಿ ಹೊಸಕೆರೆ ಕೋಡಿ ನೀರಿನಲ್ಲಿ ಇಬ್ಬರು ಬಾಲಕಿಯರು ಕೊಚ್ಚಿ ಹೋಗುತ್ತಿದ್ದರು. ತುಂಬಾಡಿ ಸೇತುವೆ ದಾಟುವ ವೇಳೆ ಬಾಲಕಿಯರು ನೀರಿನಲ್ಲಿ ಬಿದ್ದಿದ್ದರು.

ರಾಜ್ಯದ ಹಲವೆಡೆ ಭಾರಿ ಮಳೆ; ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರ ರಕ್ಷಣೆ
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಲಾಗಿದೆ
Edited By:

Updated on: Nov 18, 2021 | 10:10 AM

ತುಮಕೂರು: ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಅವಾಂತರ ಸೃಷ್ಟಿಯಾಗಿದೆ. ತುಮಕೂರು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಇಬ್ಬರು ಬಾಲಕಿಯರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಸದ್ಯ ಇಬ್ಬರು ಬಾಲಕಿಯರನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ಕೊರಟಗೆರೆ ತಾಲೂಕಿನ ತುಂಬಾಡಿ ಹೊಸಕೆರೆ ಕೋಡಿ ನೀರಿನಲ್ಲಿ ಇಬ್ಬರು ಬಾಲಕಿಯರು ಕೊಚ್ಚಿ ಹೋಗುತ್ತಿದ್ದರು. ತುಂಬಾಡಿ ಸೇತುವೆ ದಾಟುವ ವೇಳೆ ಬಾಲಕಿಯರು ನೀರಿನಲ್ಲಿ ಬಿದ್ದಿದ್ದರು. ಬಾಲಕಿಯರನ್ನು ರಕ್ಷಿಸಲು ಹೋಗಿದ್ದ ಬಾಲಕನೂ ನೀರಿನಲ್ಲಿ ಬಿದ್ದಿದ್ದ. ಸ್ಥಳೀಯರು ತಕ್ಷಣ ಮೂವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ

ತುಮಕೂರು ಜಿಲ್ಲೆಯಾದ್ಯಂತ ನದಿ, ಕೆರೆ, ಕುಂಟೆಗಳು ಉಕ್ಕಿ ಹರಿಯುತ್ತಿವೆ. ಅಪಾಯ ಮಟ್ಟ ಮೀರಿ ನದಿಗಳು ಹರಿಯುತ್ತಿವೆ. ಈ ವೇಳೆ ತುಂಬಾಡಿ ಹೊಸಕೆರೆ ಕೋಡಿ ನೀರಿನಲ್ಲಿ ಬಾಲಕಿಯರು ಕೊಚ್ಚಿ ಹೋಗುತ್ತಿದ್ದರು. ಯುವಕರ ಸಮಯ ಪ್ರಜ್ಞೆಯಿಂದ ಬಾಲಕಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾವಣಗೆರೆಯಲ್ಲಿ ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆ ಸಂಪೂರ್ಣ ನೆಲಸಮವಾಗಿದೆ. ಹರಿಹರ ತಾಲೂಕಿನ ಸುತ್ತಮುತ್ತಲಿನ ಗ್ರಾಮದಲ್ಲಿ ಭತ್ತ ನೆಲಸಮವಾಗಿದೆ. ಕೊಯ್ಲಿಗೆ ಬಂದ ಭತ್ತದ ಬೆಳೆ ನಿರಂತರ ಮಳೆಗೆ ಸಿಕ್ಕಿ ಈಗ ಮಣ್ಣು ಪಾಲಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ನಷ್ಟ ಅನುಭವಿಸುತ್ತಿರುವ ರೈತರು, ಮಳೆಯಿಂದ ಹಾನಿಯಾದರು ಅಧಿಕಾರಿಗಳು ವೀಕ್ಷಣೆಗೆ ಬಂದಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಹಲವು ವರ್ಷಗಳಿಂದ ಈ ರೀತಿ ಆಗಿರಲಿಲ್ಲ. ಆದರೆ ಈ ಬಾರಿ ಕಡ್ಲೆಗುಂದಿ ಗ್ರಾಮದಲ್ಲೇ ಸುಮಾರು 500 ಎಕರೆ ಭತ್ತದ ಬೆಳೆ ನೆಲಸಮವಾಗಿದೆ. ರೈತರು ಸರ್ಕಾರದ ಪರ ಇದ್ದಾರೆ, ಆದರೆ ಸರ್ಕಾರ ರೈತರ ಪರವಿಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಸಿದ ಮನೆಯ ಮೇಲ್ಚಾವಣಿ
ಮೈಸೂರಿನಲ್ಲಿ ಮಳೆಗೆ ಮನೆಯ ಮೇಲ್ಚಾವಣಿ ಕುಸಿದಿದೆ. ಅಗ್ರಹಾರದ ಉತ್ತರಾದಿ ಮಠದ 4ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಮನೆಯ ಮೇಲ್ಚಾವಣಿ ಕುಸಿದು ವೃದ್ಧರೊಬ್ಬರು ಮಣ್ಣಿನಡಿ ಸಿಲುಕಿದ್ದರು. ಅಗ್ನಿಶಾಮಕ ಸಿಬ್ಬಂದಿಯಿಂದ ವೃದ್ಧ ರಾಮನಾಥ್ ಎಂಬುವವರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಅಸ್ವಸ್ಥ ವೃದ್ಧನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

3 ಅಂಗಡಿ ಕುಸಿತ
ನಿರಂತರ ಮಳೆಗೆ ಮೈಸೂರು ನಗರದ ಅಶೋಕ ರಸ್ತೆಯಲ್ಲಿ 3 ಅಂಗಡಿ ಕುಸಿದಿವೆ. ಸರಿಯಾದ ನಿರ್ವಹಣೆ ಇಲ್ಲದೆ ಇತರೆ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತ ತಲುಪಿವೆ. ಅಂಗಡಿಗಳು ರಾತ್ರಿ ಕುಸಿದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮಳಿಗೆ ಕುಸಿದಿರುವ ಕಟ್ಟಡದಲ್ಲಿ 10 ಕ್ಕೂ ಹೆಚ್ಚು ಅಂಗಡಿಗಳಿವೆ. ಆ ಅಂಗಡಿಗಳು ಕುಸಿಯುವ ಹಂತ ತಲುಪಿವೆ.


ಇದನ್ನೂ ಓದಿ

Health Tips: ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಇಲ್ಲಿವೆ ಸರಳ ಸಲಹೆಗಳು

Interview: ಭಾರತೀಯ ಭಾಷೆಗಳ ಸುಲಲಿತ ಕಲಿಕೆಗೆ ತಂತ್ರಜ್ಞಾನ, ಪಠ್ಯದ ಬೆಂಬಲ ಬೇಕು: ಚಮೂ ಕೃಷ್ಣಶಾಸ್ತ್ರಿ

Published On - 8:57 am, Thu, 18 November 21

Follow Us