ಉಡುಪಿ: ಯತಿಗಳಿಂದ ಭಕ್ತರಿಗೆ ಮುದ್ರಾಧಾರಣೆ, ತಪ್ತ ಮುದ್ರಾಧಾರಣೆಯ ಮಹತ್ವವೇನು?

ಇಂದು ಸರ್ವೇಕಾದಶಿ. ಹೀಗಾಗಿ ಉಡುಪಿಯ ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ ವೈಷ್ಣವ ಸಂಪ್ರದಾಯದ ಒಂದು ವಿಶಿಷ್ಟ ಆಚರಣೆ ಮಾಡಲಾಯಿತು. ಪ್ರಥಮ ಏಕಾದಶಿಯ ದಿನ ವಾರ್ಷಿಕ ಸಂಸ್ಕಾರವಾಗಿ ಯತಿಗಳಿಂದ ಭಕ್ತರಿಗೆ ದೇಹದ ಮೇಲೆ ಮುದ್ರೆ ಹಾಕಲಾಗುತ್ತದೆ. ನಾವು ದೇವರ ಪಕ್ಷದವರು ಎಂಬುದರ ಸಂಕೇತವಾಗಿ ವೈಷ್ಣವ ಚಿಹ್ನೆಗಳನ್ನು ಮೈಮೇಲೆ ಹಾಕುವ ವಿಶಿಷ್ಟ ಆಚರಣೆ ಆಗಿದೆ.

ಉಡುಪಿ: ಯತಿಗಳಿಂದ ಭಕ್ತರಿಗೆ ಮುದ್ರಾಧಾರಣೆ, ತಪ್ತ ಮುದ್ರಾಧಾರಣೆಯ ಮಹತ್ವವೇನು?
ಉಡುಪಿ: ಯತಿಗಳಿಂದ ಭಕ್ತರಿಗೆ ಮುದ್ರಾಧಾರಣೆ, ತಪ್ತ ಮುದ್ರಾಧಾರಣೆಯ ಮಹತ್ವವೇನು?
Edited By:

Updated on: Jul 17, 2024 | 8:01 PM

ಉಡುಪಿ, ಜುಲೈ 17: ಇಂದು ಸರ್ವೇಕಾದಶಿ. ಮಾಧ್ವ ಸಂಪ್ರದಾಯದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮಠಾಧೀಶರ ಮೂಲಕ ಮುದ್ರಾಧಾರಣೆ (mudhradharana) ಮಾಡಿಕೊಳ್ಳುವ ಸಂಪ್ರದಾಯವಿದೆ. ಮಾಧ್ವ ಮತದ ಮೂಲ ಕೇಂದ್ರವಾಗಿರುವ ಉಡುಪಿಯ ಕೃಷ್ಣಮಠದಲ್ಲಿ (Udupi Sri Krishna Matha) ಇಂದು ಸಾವಿರಾರು ಭಕ್ತರು ಮುದ್ರಾಧಾರಣೆ ಮಾಡಿಸಿಕೊಂಡರು. ಹಾಗಾದರೆ ಈ ತಪ್ತ ಮುದ್ರಾಧಾರಣೆಯ ಮಹತ್ವವೇನು ಎಂದು ತಿಳಿದುಕೊಳ್ಳೋಣ ಬನ್ನಿ.

ದೇಹದ ಮೇಲೆ ಮುದ್ರೆ

ತಪ್ತ ಮುದ್ರಾಧಾರಣೆ ವೈಷ್ಣವ ಸಂಪ್ರದಾಯದ ಒಂದು ವಿಶಿಷ್ಟ ಆಚರಣೆ. ಪ್ರಥಮ ಏಕಾದಶಿಯ ದಿನ ವಾರ್ಷಿಕ ಸಂಸ್ಕಾರವಾಗಿ ದೇಹದ ಮೇಲೆ ಮುದ್ರೆ ಹಾಕಿಸಿಕೊಳ್ಳಲಾಗುತ್ತೆ. ಆಚಾರ್ಯ ಮಧ್ವರ ಕಾಲದಿಂದ ಅಂದರೆ ಎಂಟ್ನೂರು ವರ್ಷಗಳಿಂದ ಈ ಆಚರಣೆ ಚಾಲ್ತಿಯಲ್ಲಿದೆ. ಉಡುಪಿ ಶ್ರೀ ಕೃಷ್ಣಮಠದಲ್ಲಿ ಇಂದು ಸಾವಿರಾರು ಮಂದಿ ಪರ್ಯಾಯ ಮಠಾಧೀಶರಾದ ಪುತ್ತಿಗೆ ಸ್ವಾಮೀಜಿಯಿಂದ ಮುದ್ರಾಧಾರಣೆ ಮಾಡಿಸಿಕೊಂಡರು.

ಇದನ್ನೂ ಓದಿ: ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?

ಕೇವಲ ಯತಿಗಳಿಗೆ ಮಾತ್ರ ಮುದ್ರಾಧಾರಣೆ ಮಾಡುವ ಅಧಿಕಾರವಿದೆ. ಮಾಧ್ವ ಸಂಪ್ರದಾಯದ ಇತರೆ ಮಠಾಧೀಶರು ದೇಶದ ನಾನಾ ಭಾಗಗಳಲ್ಲಿ ಮುದ್ರಾಧಾರಣೆ ಮಾಡಿದರು. ನಾವು ದೇವರ ಪಕ್ಷದವರು ಎಂಬುದರ ಸಂಕೇತವಾಗಿ ವೈಷ್ಣವ ಚಿಹ್ನೆಗಳನ್ನು ಮೈಮೇಲೆ ಧರಿಸುವದು ಈ ಆಚರಣೆಯ ವಿಶೇಷ.

ಭಗವಂತನ ಕುರಿತಾದ ಶೃದ್ಧೆಯನ್ನು ಪ್ರಕಟಿಸುವುದು ಮುದ್ರಾಧಾರಣೆಯ ಮೂಲ ಉದ್ದೇಶ. ಸುದರ್ಶನ ಹೋಮವನ್ನು ನಡೆಸಿ, ಶಂಖ ಮತ್ತು ಚಕ್ರದ ಮುದ್ರೆಯನ್ನು ಅದರ ಶಾಖದಲ್ಲಿರಿಸಲಾಗುತ್ತೆ. ಬಳಿಕ ಆ ಚಿಹ್ನೆಗಳನ್ನು ಮಠಾಧೀಶರ ಮೂಲಕ ಮೈ ಮೇಲೆ ಹಾಕಿಸಿಕೊಳ್ಳಲಾಗುತ್ತೆ. ದೇವತೆಗಳು ಕೂಡ ಇಂದು ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ನಾಗರ ಪಂಚಮಿಯಂದು ಇಲ್ಲಿ ನಡೆಯಲ್ಲ ಪೂಜೆ; ಮುಗ್ಗೇರ ಜನಾಂಗ ಆರಾಧಿಸುವ ಈ ನಾಗಾರಾಧನೆಯಲ್ಲಿದೆ ವಿಶಿಷ್ಟ ಹರಕೆ

ಶ್ರೀ ಮಧ್ವಾಚಾರ್ಯರು ಸ್ವರ್ಗದಲ್ಲಿ ಅವರಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬ ನಂಬಿಕೆಯಿದೆ. ಮುದ್ರಾಧಾರಣೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅನ್ನೋದು ಜನರ ವಿಶ್ವಾಸ. ಮಳೆಗಾಲದಲ್ಲಿ ಬಾಧಿಸುವ ಎಲ್ಲಾ ಬಗೆಯ ಚರ್ಮ ವ್ಯಾದಿಗಳಿಗೆ ಈ ಲೋಹಮುದ್ರೆಯಿಂದ ಪರಿಹಾರ ಕಾಣಬಹುದು ಅನ್ನೋದು ಭಕ್ತರ ಅಭಿಮತ.

ಜನ ಆಧುನಿಕರಾಗುತ್ತಿದ್ದಾರೆ, ಆದರೂ ಮೂಲ ಸಂಪ್ರದಾಯವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ ಅನ್ನೋದಕ್ಕೆ ಮಾಧ್ವ ಸಂಪ್ರದಾಯದ ಈ ವಿಶಿಷ್ಟ ಆಚರಣೆಯೇ ಸಾಕ್ಷಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us