ಗೋಕರ್ಣ, ಮುರುಡೇಶ್ವರ, ಕಾರವಾರದಲ್ಲಿ ನಿಷೇಧ ನಡುವೆಯೇ ಸಮುದ್ರಕ್ಕಿಳಿದು ಪ್ರವಾಸಿಗರ ಹುಚ್ಚಾಟ

| Updated By: ಗಣಪತಿ ಶರ್ಮ

Updated on: May 27, 2024 | 2:55 PM

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೆಮಲ್ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಕೂಡ ಗಾಳಿ ಬೀಸುವಿಕೆ ಜೋರಾಗಿದೆ. ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಇದರ ಅರಿವಿಲ್ಲದ ಪ್ರವಾಸಿಗರು ಸಮುದ್ರಕ್ಕಿಳಿದು ಹುಚ್ಚಾಟ ಮಾಡುವುದರಿಂದ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಗೋಕರ್ಣ, ಮುರುಡೇಶ್ವರ, ಕಾರವಾರದಲ್ಲಿ ನಿಷೇಧ ನಡುವೆಯೇ ಸಮುದ್ರಕ್ಕಿಳಿದು ಪ್ರವಾಸಿಗರ ಹುಚ್ಚಾಟ
ಗೋಕರ್ಣ, ಮುರುಡೇಶ್ವರ, ಕಾರವಾರದಲ್ಲಿ ನಿಷೇಧ ನಡುವೆಯೇ ಸಮುದ್ರಕ್ಕಿಳಿದು ಪ್ರವಾಸಿಗರ ಹುಚ್ಚಾಟ
Follow us on

ಕಾರವಾರ, ಮೇ 27: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯ (Karnataka Rains) ಅಬ್ಬರ ಜೋರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಮುದ್ರಕ್ಕೆ (Sea) ಇಳಿಯಲು ನಿಷೇಧ ಹೇರಲಾಗಿದೆ. ಆದರೆ ರಜೆಯ ಮೋಜಿಗಾಗಿ ಪ್ರವಾಸಕ್ಕೆ (Tourists) ಬಂದವರು ಅಪಾಯವನ್ನು ಲೆಕ್ಕಿಸದೇ ಸಮುದ್ರತೀರದಲ್ಲಿ ಹುಚ್ಚಾಟಕ್ಕಿಳಿಯುತ್ತಿರುವುದು ಕಂಡುಬರುತ್ತಿದೆ. ಒಂದೆಡೆ ಆಳೆತ್ತರದ ಅಲೆಗಳು, ಮತ್ತೊಂದೆಡೆ ಅಲೆಯ ನಡುವೆಯೇ ಮೋಜು ಮಸ್ತಿಯಲ್ಲಿ ನಿರತರಾಗಿರುವ ಪ್ರವಾಸಿಗರ ದಂಡಿನ ದೃಶ್ಯ ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karwar) ಕಡಲತೀರದಲ್ಲಿ ಸಾಮಾನ್ಯವಾಗಿದೆ.

ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ 35 ರಿಂದ 40 ಕಿಲೋಮೀಟರ್​​ಗೂ ಅಧಿಕ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮೀನುಗಾರರಿಗೆ ಹಾಗೂ ಬರುವ ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ನಿಷೇಧ ಹೇರಿದೆ. ಆದರೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ ನಾಮಫಲಕವಾಗಲೀ, ಸಿಬ್ಬಂದಿ ಗಸ್ತು ವ್ಯವಸ್ಥೆ ಮಾಡದ ಕಾರಣ ಪ್ರವಾಸಿಗರು ಸಮುದ್ರಕ್ಕಿಳಿದು ಮೋಜು ಮಾಸ್ತಿ ಮಾಡುವ ಮೂಲಕ ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳುತಿದ್ದಾರೆ.

ಶಾಲೆಗಳಿಗೆ ರಜೆಯಾದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮುರುಡೇಶ್ವರ, ಕಾರವಾರ ಭಾಗದ ಕಡಲ ತೀರಗಳಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಆದರೆ ಇದೀಗ ಹವಾಮಾನ ಬದಲಾವಣೆಯಾಗಿದೆ. ಪೂರ್ವ ಮುಂಗಾರು ಮಳೆಯ ಅಬ್ಬರಕ್ಕೆ ಕಡಲು ಪ್ರಕ್ಷುಬ್ಧವಾಗಿದೆ. ಹೀಗಿದ್ದರೂ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಸಮುದ್ರಕ್ಕಿಳಿದು ಎಂಜಾಯ್ ಮಾಡುತಿದ್ದು ಅಪಯಾಕ್ಕೆ ಆಹ್ವಾನ ನೀಡಿದೆ.

ಹೀಗಿದ್ದರೂ ಜಿಲ್ಲಾಡಳಿತ ಮಾತ್ರ ಬರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಹಾಗೂ ಸಮುದ್ರಕ್ಕಿಳಿಯದಂತೆ ಕ್ರಮ ಕೈಗೊಳ್ಳದೇ ಸೂಕ್ತ ಸಿಬ್ಬಂದಿ ನಿಯೋಜಿಸದೇ ನಿರಾಸಕ್ತಿ ತೋರಿಸಿದ್ದು ಮಾತ್ರ ಜನರ ಅಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕಾರವಾರ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ! ವಿಡಿಯೋ ನೋಡಿ

ಕಳೆದ ವರ್ಷ 150 ಕ್ಕೂ ಹೆಚ್ಚು ಪ್ರವಾಸಿಗರನ್ನು ಸಮುದ್ರದಲ್ಲಿ ರಕ್ಷಣೆ ಮಾಡಲಾಗಿತ್ತು. ಏಳು ಜನ ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಈ ಭಾರಿ ಐದು ತಿಂಗಳಲ್ಲೇ 40 ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ನಾಲ್ಕು ಸಾವುಗಳಾಗಿವೆ. ಹೀಗಿದ್ದರೂ ಜಿಲ್ಲಾಡಳಿತ ಹಾಗೂ ಬಂದ ಪ್ರವಾಸಿಗರ ನಿರ್ಲಕ್ಷ ಜೀವಕ್ಕೆ ಕುತ್ತು ತರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ