2001ರ ಹಳೆ ಕೇಸ್​ ಭೇದಿಸಿದ ವಿಜಯಪುರ ಪೊಲೀಸ್​: 21 ವರ್ಷಗಳ ಬಳಿಕ ಆರೋಪಿ ಅರೆಸ್ಟ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jul 29, 2024 | 11:10 PM

2001 ರಲ್ಲಿ ಖೋಟಾ ನೋಟು ಚಲಾವಣೆ ಸಂಗ್ರಹ ಆರೋಪದ ಮೇಲೆ ನೆರೆಯ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಮೂಲದ ರಾಜೂ ಉರ್ಫ್ ಬಸವರಾಜ ನಾಯಕ ಎಂಬಾತನನ್ನು ಪೊಲೀಸರು ಅರೆಸ್ಟ್​ ಮಾಡಿದ್ದರು. ಬಳಿಕ ತಪ್ಪಿಸಿಕೊಂಡಿದ್ದು ಇದೀಗ 21 ವರ್ಷದ ಬಳಿಕ ಮತ್ತೆ ಅರೆಸ್ಟ್ ಮಾಡಲಾಗಿದೆ.

2001ರ ಹಳೆ ಕೇಸ್​ ಭೇದಿಸಿದ ವಿಜಯಪುರ ಪೊಲೀಸ್​: 21 ವರ್ಷಗಳ ಬಳಿಕ ಆರೋಪಿ ಅರೆಸ್ಟ್​
2001ರ ಹಳೆ ಕೇಸ್​ ಭೇದಿಸಿದ ವಿಜಯಪುರ ಪೊಲೀಸ್​: 21 ವರ್ಷಗಳ ಬಳಿಕ ಆರೋಪಿ ಅರೆಸ್ಟ್​
Follow us on

ವಿಜಯಪುರ, ಜುಲೈ 29: ಕಾನೂನು ಬಾಹೀರ ಚಟುವಟಿಕೆ ಮಾಡುವವರು ಚಾಪೆಯ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆಂಬ ಮಾತಿದೆ. ಇಷ್ಟರ ಮಧ್ಯೆ ಅದೆಷ್ಟೋ ಕದೀಮರು ಖಾಕಿ ಕಣ್ಣಿಗೆ ಮಣ್ಣೆರೆಚಿ ಪಾರಾಗಿ ಹೋಗಿರುತ್ತಾರೆ. ಆದರೆ ಒಂದಲ್ಲಾ ಒಂದು ದಿನ ಖಾಕಿ ಬೆಲೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇಂತಹ ಒಂದು ಪ್ರಕರಣಕ್ಕೆ ಸಾಕ್ಷಿಯಾಗಿದೆ ವಿಜಯಪುರದಲ್ಲಿ (Vijayapura) ನಡೆದ ಒಂದು ಪ್ರಕರಣ. ಕಳೆದ 21 ವರ್ಷಗಳ ಹಿಂದಿನ ಪ್ರಕರಣದಲ್ಲಿ ಶಿಕ್ಷೆಯಾಗಿದ್ದರೂ ಪರಾರಿಯಾಗಿ ತಲೆ ಮರೆಸಿಕೊಂಡ ವ್ಯಕ್ತಿಯನ್ನು ಇದೀಗ ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ಧಾರೆ.

ಈ ಪ್ರಕರಣದ ಮೇಲೆ ಕಣ್ಣಿಟ್ಟಿದ್ದ ಗಾಂಧಿಚೌಕ್ ಪೊಲೀಸರು 21 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ರಾಜೂ ಉರ್ಫ್ ಬಸವರಾಜ ನಾಯಕನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಲ್ಲಿ ಜಮೀನೊಂದಲ್ಲಿ ತನ್ನ ಹೆಸರು ವಿಳಾಸ ಬದಲಾವಣೆ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದ. ಈ ವಿಚಾರ ಪತ್ತೆ ಮಾಡಿದ ಗಾಂಧಿಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಹಾಗೂ ಇತರೆ ಸಿಬ್ಬಂದಿ ಅಪರಾಧಿ ರಾಜೂ ಉರ್ಪ್ ಬಸವರಾಜ ನಾಯಕನನ್ನು ಬಂಧಿಸಿ ಕರೆ ತಂದಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ. ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಕಾರ್ಯಕ್ಕೆ ಎಸ್ಪಿ ಋಷಿಕೇಶ ಸೋನೆವಣೆ ಹಾಗೂ ಇತರೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಪ್ರಕರಣ ಹಿನ್ನೆಲೆ

2001 ರಲ್ಲಿ ಖೋಟಾ ನೋಟು ಚಲಾವಣೆ ಸಂಗ್ರಹ ಆರೋಪದ ಮೇಲೆ ನೆರೆಯ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಮೂಲದ ರಾಜೂ ಉರ್ಫ್ ಬಸವರಾಜ ನಾಯಕ ಎಂಬಾತನನ್ನು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರ ತನಿಖಾ ವರದಿಯನ್ನು ವಿಜಯಪುರದ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದನ್ನೂ ಓದಿ: ಮಾಜಿ ಸಚಿವರ ಬ್ಯಾಂಕ್​ ಎಂದುಕೊಂಡು ಹಣ ಇಟ್ಟವರಿಗೆ ಪಂಗನಾಮ; ಠೇವಣಿದಾರರಿಗೆ ನ್ಯಾಯ ಒದಗಿಸಲು ಸಕ್ಷಮ ಪ್ರಾಧಿಕಾರ ರಚನೆ

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಖೋಟ ಆನೋಟು ಚಲಾವಣೆ ಹಾಗೂ ಸಂಗ್ರಹದ ಆರೋಪ ಸಾಬೀತಾದ ಕಾರಣ ಆರೋಪಿಯಾಗಿದ್ದ ರಾಜೂ ಉರ್ಫ್ ಬಸವರಾಜ ನಾಯಕಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಶಿಕ್ಷೆ ಜಾರಿ ಮಾಡಿದ್ದರು. ವಿಜಯಪುರದ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿದ ರಾಜೂ ಉರ್ಫ್ ಬಸವರಾಜ ಹೈಕೋರ್ಟ್​ನಲ್ಲಿ ಮೇಲ್ಮಣವಿ ಸಲ್ಲಿಸಿದ್ದರು.

ಇದನ್ನೂ ಓದಿ: ಬಿ.ಡಿ ಜತ್ತಿ ಕಾಲೇಜ್ ಆಫ್ ಎಜುಕೇಶನ್​ನಲ್ಲಿ ಭಾರೀ ಗೋಲ್ಮಾಲ್; ಬಿಎಡ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು

ಹೈಕೋರ್ಟ್ ಸಹ ವಿಜಯಪುರದ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು. ಬಳಿಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಅಲ್ಲಿಯ ವಿಚಾರಣೆಯಲ್ಲೂ ರಾಜೂ ಉರ್ಫ್ ಬಸವರಾಜ ನಾಯಕಗೆ ಹಿನ್ನಡೆಯಾಗಿತ್ತು.

ಯಾವಾಗ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ತನ್ನ ವ್ಯತಿರಿಕ್ತವಾಗಿ ಬಂದ ಕಾರಣ ರಾಜೂ ಉರ್ಫ್ ಬಸವರಾಜ ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿ ಬಿಟ್ಟಿದ್ದ. ಕುಟುಂಬ ಸದಸ್ಯರೊಂದಿಗೆ, ಗ್ರಾಮದ ಜನರೊಂದಿಗೆ ಸ್ನೇಹಿತರೊಂದಿಗೆ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿ ಬಿಟ್ಟಿದ್ದ. ಇದೀಗ ಆತನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.