AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News: ವಿಜಯಪುರ ನಗರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದು, ಭೂಕಂಪ

ಕಂಪನದ ತೀವ್ರತೆಯು ರಿಕ್ಟರ್​ ಮಾಪಕದಲ್ಲಿ 2.5ರಷ್ಟು ದಾಖಲಾಗಿದೆ.

Breaking News: ವಿಜಯಪುರ ನಗರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದು, ಭೂಕಂಪ
ಭೂಕಂಪ (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 02, 2022 | 1:37 PM

Share

ವಿಜಯಪುರ: ನಗರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿಯು ಕಂಪಿಸಿದೆ (Earthquake). ಕಂಪನದ ತೀವ್ರತೆಯು ರಿಕ್ಟರ್​ ಮಾಪಕದಲ್ಲಿ 2.5ರಷ್ಟು ದಾಖಲಾಗಿದೆ. ವಿಜಯಪುರ  (Vijayapura) ಬಳಿಯ ಅಲಿಯಾಬಾದ್​​​​ ಭೂಕಂಪನದ ಕೇಂದ್ರವಾಗಿತ್ತು. ವಿಜಯಪುರ ನಗರದಲ್ಲಿ ಶುಕ್ರವಾರ ನಸುಕಿನಲ್ಲಿಯೂ ಮೂರು ಬಾರಿ ಲಘು ಭೂಕಂಪನವಾಗಿತ್ತು. ಶುಕ್ರವಾರ ಮುಂಜಾನೆ 3.45, 3.46 ಹಾಗೂ 5.56ಕ್ಕೆ ಭೂಕಂಪನ ದಾಖಲಾಗಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 2.0, 1.9 ಮತ್ತು 3.2 ಎಂದು ದಾಖಲಾಗಿತ್ತು. ಜನರು ನಿದ್ದೆಯಲ್ಲಿದ್ದ ಕಾರಣ ಹೆಚ್ಚಿನವರಿಗೆ ಭೂಕಂಪನದ ಅನುಭವ ಅಷ್ಟಾಗಿ ಆಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯಪುರದಲ್ಲಿ ಪದೇಪದೆ ಭೂಕಂಪನದ ಅನುಭವ ಜನರಿಗೆ ಆಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಪದೇಪದೆ ಭೂಕಂಪನ ಸಂಭವಿಸುತ್ತಿರುವ ವಿಚಾರವು ಈ ಹಿಂದೆ ವಿಧಾನ ಪರಿಷತ್​ನಲ್ಲಿಯೂ ಪ್ರಸ್ತಾಪವಾಗಿತ್ತು. ‘ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು’ ಎಂದು ಸದಸ್ಯರಾದ ಸುನೀಲಗೌಡ ಪಾಟೀಲ ಒತ್ತಾಯಿಸಿದ್ದರು. ‘ಜಿಲ್ಲೆಯಲ್ಲಿ ಈವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನದ ಭೀತಿಯಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಗಣಿ ಭೂವಿಜ್ಞಾನ ಇಲಾಖೆ ಸ್ಪಷ್ಟ ತಾಂತ್ರಿಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆಯಿಸಿ ಭೂಕಂಪನಕ್ಕೆ ಕಾರಣ ಕುರಿತು ಅಧ್ಯಯನ ನಡೆಸಬೇಕು. ಈ ಮೂಲಕ ಜನರಲ್ಲಿರುವ ಭಯವನ್ನು ಹೊಗಲಾಡಿಸಬೇಕು’ ಎಂದು ಅವರು ಒತ್ತಾಯಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಕಂದಾಯ ಸಚಿವ ಆರ್‌.ಅಶೋಕ, ‘ವಿಜಯಪುರ ಜಿಲ್ಲೆಯಲ್ಲಿ 2021 ಮತ್ತು 2022ರಲ್ಲಿ ಭೂಕಂಪನ ಉಂಟಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಸಂಸ್ಥೆಗಳ ವೈಜ್ಞಾನಿಕ ಅಧಿಕಾರಿಗಳ ತಂಡ ಜಿಲ್ಲೆಯ ಭೂಕಂಪನ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಭೂಕಂಪಗಳ ಬಗ್ಗೆ ಅರಿವು ಮೂಡಿಸಿದೆ. ಮುಂದಿನ ದಿನಗಳಲ್ಲಿ ಭೂಕಂಪನ ಕುರಿತಂತೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು’ ಎಂದು ಹೇಳಿದ್ದರು.

Published On - 1:23 pm, Sun, 2 October 22