AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನೂನಿಗೆ ವಿರುದ್ದವಾಗಿ, ಹಿಮ್ಮುಖವಾಗಿ 61 ಕಿಮೀ ದೂರ ಕಾರ್ ಚಾಲನೆ ಮಾಡಿ ಸಾಧನೆ! ಯಾಕೆ ಈ ದಿಢೀರ್​ ಸಾಹಸ? ಇಲ್ಲಿದೆ ವಿಶೇಷ

Reverse Gear Car Driving: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿ ಮನಗೂಳಿ ಪಟ್ಟಣದ ಮಲ್ಲನಗೌಡ ಪಾಟೀಲ್ ವಿಶ್ವ ಶಾಂತಿಗಾಗಿ ನಮ್ಮ ಹಿಂದಿನ ಪದ್ದತಿಗಳ ಉಳಿವಿಕೆಗಾಗಿ ಹಿಮ್ಮುಖವಾಗಿ ಕಾರು ಚಲಾಯಿಸಿದ್ದಾರೆ.

ಕಾನೂನಿಗೆ ವಿರುದ್ದವಾಗಿ, ಹಿಮ್ಮುಖವಾಗಿ 61 ಕಿಮೀ ದೂರ ಕಾರ್ ಚಾಲನೆ ಮಾಡಿ ಸಾಧನೆ! ಯಾಕೆ ಈ ದಿಢೀರ್​ ಸಾಹಸ? ಇಲ್ಲಿದೆ ವಿಶೇಷ
ಹಿಮ್ಮುಖವಾಗಿ 61 ಕಿಮೀ ದೂರ ಕಾರ್ ಚಾಲನೆ ಮಾಡಿ ಸಾಧನೆ!
ಸಾಧು ಶ್ರೀನಾಥ್​
|

Updated on:May 19, 2023 | 5:50 PM

Share

ಸಾಧನೆ ಮಾಡುವ ಛಲವೊಂದಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು. ಇನ್ನು ಕೆಲವರು ಸಮಾಜದ ಒಳಿತಿಗಾಗಿ ಏನಾದರೂ ಸಾಹಸ ಮಾಡುತ್ತಲೇ ಇರುತ್ತಾರೆ. ಇದೇ ಸಾಲಿಗೆ ಸೇರುತ್ತಾರೆ ವಿಜಯಪುರ ಜಿಲ್ಲೆಯ ಈ ವ್ಯಕ್ತಿ. ವಿಶ್ವ ಶಾಂತಿಗಾಗಿ, ನಮ್ಮ ನೆಲದ ಪದ್ದತಿಗಳ ಉಳಿವಿಗಾಗಿ ಇವರು ಮಾಡಿದ ಸಾಧನೆ ವಿಶೇಷವಾಗಿದೆ. ಈ ಸಾಧನೆಗಾಗಿ ಅವರು ಯಾವುದೇ ಪೂರ್ವ ತಯಾರಿಯನ್ನೂ ತರಬೇತಿಯನ್ನೂ ಮಾಡಿಕೊಂಡಿಲ್ಲಾ. ಮನಸ್ಸಿಗೆ ಬಂದ ಕೂಡಲೇ ವಿಶೇಷ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಮಾಡಿದ ವಿಶೇಷತೆಯಾದರೂ ಏನು ಎಂದು ತಿಳಿದುಕೊಂಡು ಬರೋಣಾ ಬನ್ನಿ. 61 ಕಿಲೋಮೀಟರ್ ಅಂತರವನ್ನು ಹಿಮ್ಮುಖವಾಗಿ ಕಾರ್ ಚಾಲನೆ ಮಾಡಿ ಸಾಧನೆ.. ಇದನ್ನಾಗಿ ಪೂರ್ವ ತಯಾರಿಯಿಲ್ಲಾ ತರಬೇತಿಯಿಲ್ಲಾ… ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ವ್ಯಕ್ತಿಯಿಂದ ಹಿಮ್ಮುಖ ಕಾರ್ ಚಾಲನೆ… ರಸ್ತೆಯಲ್ಲಿ ಹಿಮ್ಮುಖವಾಗಿ ವಾಹನ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆ ಪ್ರಕಾರ ತಪ್ಪು. ಆದರೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಮಲ್ಲನಗೌಡ ಪಾಟೀಲ್ ಕಾನೂನು ವಿರುದ್ದವಾಗಿ ಹಿಮ್ಮುಖವಾಗಿ ಕಾರು ಚಾಲನೆ ಮಾಡಿದ್ದು ಯಾವುದೇ ಸ್ವಕಾರ್ಯಕ್ಕಾಗಿ ಸ್ವಸಾಧನೆಗಾಗಿ ಅಲ್ಲಾ. ವಿಶ್ವಶಾಂತಿ ಹಾಗೂ ನಮ್ಮ ಹಿಂದಿನ ಪದ್ದತಿಗಳನ್ನು ನಮ್ಮ ಯುವ ಜನತೆ ಪಾಲನೆ ಮಾಡಬೇಕೆಂಬ ಮಹಾದಾಸೆಯಿಂದ ಹೀಗೆ ಕಾರು ಚಾಲನೆ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿ ಮನಗೂಳಿ ಪಟ್ಟಣದ ಮಲ್ಲನಗೌಡ ಪಾಟೀಲ್ ವಿಶ್ವ ಶಾಂತಿಗಾಗಿ ನಮ್ಮ ಹಿಂದಿನ ಪದ್ದತಿಗಳ ಉಳಿವಿಕೆಗಾಗಿ ಹಿಮ್ಮುಖವಾಗಿ ಕಾರು ಚಲಾಯಿಸಿದ್ದಾರೆ. ಮನಗೂಳಿ ಪಟ್ಟಣದಿಂದ ಬಸವನಬಾಗೇವಾಡಿಯ ಬಸವೇಶ್ವರ ದೇಗುಲ ದರ್ಶನ, ಬಳಿಕ ಇಂಗಳೇಶ್ವರ, ಮಸಬನಾಳ, ಉಕ್ಕಲಿ ಗ್ರಾಮದ ಮಾರ್ಗವಾಗಿ ಮರಳಿ ಮನಗೂಳಿ ಪಟ್ಟಣದವರೆಗೆ ಒಟ್ಟು 61 ಕಿಲೋ ಮೀಟರ್ ಪ್ರಯಣವನ್ನು ಹಿಮ್ಮುಖವಾಗಿ ಚಾಲನೆ ಮಾಡುವ ಮೂಲಕ ಮಾಡಿದ್ದಾರೆ.

ಆಧ್ಯಾತ್ಮಿಕ ಜೀವಿ ಮಲ್ಲನಗೌಡ ಪಾಟೀಲ್ ತಮ್ಮ ಕಾರಿನಲ್ಲಿ ಶಿವನ, ತಮ್ಮ ತಾಯಿ ಹಾಗೂ ಮನಗೂಳಿ ಮಹಾಂತ ಶ್ರೀಗಳ ಭಾವಚಿತ್ರಗಳನ್ನಿಟ್ಟುಕೊಂಡು ಹಿಮ್ಮುಖವಾಗಿ ಕಾರು ಚಲಾಯಿಸಿದ್ದಾರೆ. ಹಿಮ್ಮುಖವಾಗಿ ಕಾರು ಚಲಾಯಿಸುವಾಗ ಪ್ರತಿ ಗಂಟೆಗೆ 20 ಕಿಲೋ ಮೀಟರ್ ವೇಗಕ್ಕಿಂತಲೂ ಆಧಿಕ ವೇಗದಲ್ಲಿ ಕಾರ್ ನ್ನು ಚಲಾಯಿಸಿದ್ದಾರೆ. ಈ ಹಿಂದೆ ಜನರು ತತ್ವ ಸಿದ್ಧಾಂತಗಳು, ಸಂಸ್ಕೃತಿ ಮೌಲ್ಯಾಧಾರಿತ ಜೀವನ ನಡೆಸುತ್ತಿದ್ದರು. ಆದರೀಗ ಅವೆಲ್ಲವೂ ನಶಿಸಿ ಹೋಗುತ್ತಿವೆ. ಅದೇ ರೀತಿ ಕಾರು ಹಿಮ್ಮುಖವಾಗಿ ಚಲಿಸುವ ಮೂಲಕ ಹಿಂದಿನ ಜೀವನಕ್ಕೆ ಹೋಗುವ ಸಂಕಲ್ಪ ಇದರಲ್ಲಿ ಅಡಗಿದೆ ಎಂಬುದು ಮಲ್ಲನಗೌಡ ಅವರ ಮಾತಾಗಿದೆ.

ವಿಜಯಪುರ ಜಿಲ್ಲೆಯ ಜನರ ಮಟ್ಟಿಗೆ ಮಲ್ಲನಗೌಡ ಪಾಟೀಲ್ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದು ಸಾಧನೆಯಾಗಿದೆ. ಯಾವುದೇ ತರಬೇತಿ ಇಲ್ಲದೇ ಇವರು ಕಾರು ಚಲಾಯಿಸಿದ್ದಾರೆ. ಮುಮ್ಮಖವಾಗಿ ವಾಹನ ಚಾಲನೆ ಮಾಡುವುದೇ ಇಂದಿನ ಟ್ರಾಫಿಕ್ ಯುಗದಲ್ಲಿ ಕಷ್ಟದ ಕೆಲಸ. ಅಂಥದ್ದರಲ್ಲಿ ಇಕ್ಕಟ್ಟಾದ ರಸ್ತೆ, ಟ್ರಾಫಿಕ್ ಜಾಮ್, ಇತರೆ ವಾಹನಗಳ ಭರಾಟೆ ಇವೆಲ್ಲವುದರ ಮಧ್ಯೆ ಮಲ್ಲನಗೌಡ ಪಾಟೀಲ್ ಹಿಮ್ಮುಖವಾಗಿ ಕಾರು ಚಲಾಯಿಸಿದ್ದು ಎಲ್ಲರಲ್ಲೂ ಅಚ್ಚರಿ ತಂದಿದೆ.

ದಾರಿಯಲ್ಲಿ ಇತರೆ ವಾಹನ ಸವಾರರು ಇವರ್ಯಾಕೆ ಕಾರನ್ನು ರಿವರ್ಸ್ ನಲ್ಲಿ ಓಡಿಸುತ್ತಿದ್ದಾರೆ ಎಂದು ಆಶ್ಚರ್ಯವನ್ನೂ ಪಟ್ಟಿದ್ದಾರೆ. ವಿಶ್ವಶಾಂತಿ, ಹಳೆಯ ಪದ್ದತಿ ಆಚರಣೆ ಹಾಗೂ ಸೂಫಿ ಶರಣರು ಬಯಸಿದ ನಾಡು ಮರಳಿ ಪ್ರತಿಷ್ಠಾಪನೆ ಆಗಲಿ ಅಂತ ಕಾರು ಹಿಮ್ಮುಖವಾಗಿ ಚಲಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇವರರು ಹಿಮ್ಮುಖವಾಗಿ ಕಾರು ಚಲಾಯಿಸಿರೋದರ ಬಗ್ಗೆ ಸ್ಥಳೀಯರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಮಲ್ಲನಗೌಡ ಪಾಟೀಲ್ ಹಿಮ್ಮುಖವಾಗಿ ಕಾರ್ ಚಾಲನೆ ಮಾಡಿದ್ದು ಎಷ್ಟರ ಮಟ್ಟಿದೆ ವಿಶ್ವಶಾಂತಿ ಹಾಗೂ ನಮ್ಮ ಹಿಂದಿನ ಪದ್ದತಿಗಳನ್ನು ಯುವ ಜನತೆ ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತಾರೆ ಎಂಬುದು ಮಾತ್ರ ಗೊತ್ತಿಲ್ಲಾ. ಆದರೆ ಯಾವುದೇ ತರಬೇತಿ ತಯಾರಿ ಇಲ್ಲದೇ ಮಲ್ಲನಗೌಡ ಹಿಮ್ಮುಖವಾಗಿ ಕಾರು ಚಾಲನೆ ಮಾಡುವ ಮೂಲಕ ಮಾಡಿರೋ ಸಾಧನೆಗೆ ಜಿಲ್ಲೆಯ ಜನರು ಮೆಚ್ಚಿದ್ದಾರೆ

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ

Published On - 5:49 pm, Fri, 19 May 23