ವಿಜಯಪುರ: ಅಂತ್ಯಸಂಸ್ಕಾರಕ್ಕೆಂದು ತುಸು ಜಾಗ ನೀಡಿದ್ದರೆ ಇಡೀ ಆಸ್ತಿಯನ್ನೇ ಕಬಳಿಸಿದ ವಕ್ಫ್!

ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ಹಿಂದೂ ಕುಟುಂಬವೊಂದು ಅಂತ್ಯಕ್ರಿಯೆಗೆ ಭೂಮಿ ನೀಡಿದ್ದನ್ನೇ ಮುಂದಿಟ್ಟುಕೊಂಡು ಅವರ ಇಡೀ ಆಸ್ತಿಯನ್ನೇ ವಕ್ಫ್ ಆಸ್ತಿ ಎಂದು ದಾಖಲಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಕ್ಫ್ ಬೋರ್ಡ್ ನಮೂದನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

ವಿಜಯಪುರ: ಅಂತ್ಯಸಂಸ್ಕಾರಕ್ಕೆಂದು ತುಸು ಜಾಗ ನೀಡಿದ್ದರೆ ಇಡೀ ಆಸ್ತಿಯನ್ನೇ ಕಬಳಿಸಿದ ವಕ್ಫ್!
ವಿಜಯಪುರದಲ್ಲಿ ರೈತರ ಪ್ರತಿಭಟನೆ
Edited By:

Updated on: Oct 30, 2024 | 12:37 PM

ವಿಜಯಪುರ, ಅಕ್ಟೋಬರ್ 30: ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್, ರೈತರ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖದಿಂದ ಸುದ್ದಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ರಹಸ್ಯವಾಗಿಯೇ ವಕ್ಫ್ ಹೆಸರಿನಲ್ಲಿ ಆಸ್ತಿ ಕಬಳಿಕೆ ನಡೆಯುತ್ತಿದೆಯಾ ಎಂಬ ಅನುಮಾನ ಇದೀಗ ಬಲವಾಗಿದೆ. ಇದಕ್ಕೆ ಬಲವಾದ ಪುರಾವೆಯೂ ದೊರೆತಿದೆ. ಅಂತ್ಯಸಂಸ್ಕಾರಕ್ಕೆಂದು ಮುಸ್ಲಿಂ ಕುಟುಂದವರಿಗೆ ತುಸು ಜಾಗ ನೀಡಿದ್ದ ಹಿಂದೂ ಕುಟುಂಬವೊಂದರ ಇಡೀ ಆಸ್ತಿಯನ್ನೇ ವಕ್ಫ್​​ಗೆ ಸೇರಿದ್ದು ಎಂದು ದಾಖಲೆಗಳಲ್ಲಿ ಉಲ್ಲೇಖಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

2019 ರಲ್ಲೇ ರೈತನ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದಿಸಿರುವುದು ಗೊತ್ತಾಗಿದೆ. ವಕ್ಫ್ ವಿವಾದದ ಬಳಿಕ ಪಹಣಿ ಪತ್ರ ಚೆಕ್ ಮಾಡಿದಾಗ ವಿಚಾರ ಬೆಳಕಿಗೆ ಬಂದಿದ್ದು, ರೈತನಿಗೆ ಆಘಾತವಾಗಿದೆ.

ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದ ಸರ್ವೆ ನಂಬರ್ 271 ರ 13 ಎಕರೆ 8 ಗುಂಟೆ ಜಾಗಕ್ಕೆ ವಕ್ಪ್ ಬೋರ್ಡ್ ಎಂದು ನಮೂದಿಸಲಾಗಿದೆ.

ಮಾನವೀಯತೆ ಮೆರೆದಿದ್ದೇ ಮುಳುವಾಯ್ತೇ?

ಹೊನ್ನುಟಗಿ ಗ್ರಾಮದ ಸುರೇಶ್ ತೆರದಾಳ್ ಹಾಗೂ ಕುಟುಂಬಸ್ಥರಿಗೆ ಸೇರಿದ ಜಮೀನು ಸದ್ಯ ವಿವಾದಕ್ಕೀಡಾಗಿದೆ. ಈ ಕುಟುಂಬದವರು ಮುಸ್ಲಿಂ ಸಮುದಾಯದ ಜನರಿಗೆ ಅಂತ್ಯಸಂಸ್ಕಾರಕ್ಕೆಂದು ತಮ್ಮ ಜಮೀನಿನಲ್ಲಿ ತುಸು ಜಾಗ ನೀಡಿದ್ದರು. ಆದರೆ, ಯಾವುದೇ ದಾಖಲೆಯಲ್ಲಿ ನಮೂದು ಮಾಡದೆ ಬಳಕೆಯ ಉದ್ದೇಶಕ್ಕೆ ಮಾತ್ರ ಭೂಮಿ ನೀಡಿದ್ದರು. ಆದರೆ, ಬಳಕೆಗೆ ನೀಡಿದ್ದ ಜಾಗವನ್ನೇ ವಕ್ಫ್ ಆಸ್ತಿ ಎಂದು ನಮೂದಿಸಿದ್ದಲ್ಲದೆ, ಸುರೇಶ್ ತೆರದಾಳ್ ಅವರಿಗೆ ಸೇರಿದ ಇಡೀ 13.8 ಎಕರೆಯನ್ನೂ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ.

ರೈತರಿಗೆ ನೀಡಿದ್ದ ನೋಟೀಸ್​ಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ವಕ್ಫ್ ಬೋರ್ಡ್​ ಎಂದು ನಮೂದು ಮಾಡಿದ್ದನ್ನು ರದ್ದು ಮಾಡುತ್ತೇವೆ ಎಂದು ಸರ್ಕಾರದವರು ಹೇಳುತ್ತಿದ್ದಾರೆ. ಅದೇ ರೀತಿ ನಮ್ಮ ಜಮೀನನ ಪಹಣಿಯಲ್ಲಿ ‘ವಕ್ಫ್ ಬೋರ್ಡ್’ ಎಂದು ನಮೂದು ಮಾಡಿರುವುದನ್ನು ತೆರವು ಮಾಡಬೇಕೆಂದು ತೆರೆದಾಳ ಕುಟುಂಬದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಕ್ಫ್ ಮಂಡಳಿ ನೋಟಿಸ್: ಕರ್ನಾಟಕ ರೈತರ ಅಹವಾಲು ಆಲಿಸಲು ಜಂಟಿ ಸಂಸದೀಯ ಸಮಿತಿಗೆ ತೇಜಸ್ವಿ ಸೂರ್ಯ ಪತ್ರ

ಏತನ್ಮಧ್ಯೆ, ಹಲವು ಮಂದಿ ರೈತರ ಪಹಣಿಯಲ್ಲಿ ನಮೂದಾಗಿದ್ದ ‘ಕರ್ನಾಟಕ ವಕ್ಫ್​​ ಬೋರ್ಡ್​’ ಪದವನ್ನು ರಾತ್ರೋ ರಾತ್ರಿ ಕಂದಾಯ‌ ಇಲಾಖೆಯ ಅಧಿಕಾರಿಗಳು ತೆರವು ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲ ವಿಜಯಪುರ ರೈತರ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ಮತ್ತೊಂದೆಡೆ, ವಿಜಯಪುರ ಜಿಲ್ಲೆಯ ರೈತರ ಅಹವಾಲು ಆಲಿಸುವಂತೆ ವಕ್ಫ್ ಕಾಯ್ದೆ ಸಂಬಂಧ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಗೆ ಪತ್ರ ಬರೆದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us