Dasara Mahotsav 2024: ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ತೂಗಿದ್ದು ಎಷ್ಟು ಗೊತ್ತಾ? ಬರೋಬ್ಬರಿ 5,560 ಕೇಜಿ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2024 | 11:42 AM

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಅನೆಗಳ ತಾಲೀಮು ನಾಳೆಯಿಂದ ಶುರುವಾಗಲಿದೆ ಮತ್ತು ನಗರದ ಪ್ರದಕ್ಷಿಣೆಯೂ ನಡೆಯುತ್ತದೆ ಎಂದು ಡಾ ಪ್ರಭುಗೌಡ ಹೇಳುತ್ತಾರೆ. ಮೈಸೂರು ನಿವಾಸಿಗಳು ಮತ್ತು ಬೇರೆ ಕಡೆಗಳಿಂದ ಬರುವ ಪ್ರವಾಸಿಗರು ನಗರದಲ್ಲಿ ಆನೆಗಳ ಗಾಂಭೀರ್ಯದ ನಡಿಗೆಯನ್ನು ನಾಳೆಯಿಂದ ನೋಡಬಹುದು.

ಮೈಸೂರು: ಪ್ರತಿ ಮೈಸೂರು ಮಹೋತ್ಸವ ಸಂದರ್ಭದಲ್ಲಿ ಇದು ವಾಡಿಕೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ತೂಕವನ್ನು ಅವು ಅರಮನೆಗೆ ಆಗಮಿಸಿದ ದಿನ ಇಲ್ಲವೇ ಮರುದಿನ ಪರಿಶೀಲಿಸಲಾಗುತ್ತದೆ. ಅದು ಶಿಷ್ಟಾಚಾರವೂ ಹೌದು. ಈಗಾಗಲೇ ಮೈಸೂರಿಗೆ ಆಗಮಿಸಿರುವ ಮೊದಲ ಬ್ಯಾಚ್ ನ 9 ಆನೆಗಳ ತೂಕ ಚೆಕ್ ಮಾಡಿ ದಾಖಲಿಸಿಕೊಳ್ಳಲಾಯಿತು. ಆನೆಗಳ ತೂಕ ಮತ್ತು ಅವುಗಳ ಆರೋಗ್ಯ ಸ್ಥಿತಿಯ ಬಗ್ಗೆ ನಮ್ಮ ಮೈಸೂರು ವರದಿಗಾರ ಅರಣ್ಯಾಧಿಕಾರಿ ಡಾ ಪ್ರಭುಗೌಡ ಜೊತೆ ಮಾತಾಡಿದ್ದಾರೆ. ಅವರು ಹೇಳುವ ಪ್ರಕಾರ ಟೀಮ್ ಲೀಡರ್ ಅಭಿಮನ್ಯುವಿನ ತೂಕ ಬರೋಬ್ಬರಿ 5,560 ಕಿಲೋ ಗ್ರಾಂ. ಅವನ ನಂತರದ ಸ್ಥಾನ 5,150ಕೆಜಿ ತೂಗುವ ಧನಂಜಯನದ್ದು. ಹಾಗೆಯೇ, ವರಲಕ್ಷ್ಮಿಯ ತೂಕ 3,495ಕೆಜಿ, ಏಕಲವ್ಯ 4,730 ಕೆಜಿ, ರೋಹಿತ್ 3,640 ಕೆಜಿ, ಲಕ್ಷ್ಮಿ 2,480 ಕೆಜಿ ತೂಗುತ್ತಾರೆ. ಅರಣ್ಯಾಧಿಕಾರಿ ಹೇಳುವ ಹಾಗೆ ಆನೆಗಳ ಸಾಮರ್ಥ್ಯ ಮತ್ತು ಶಕ್ತಿಯನ್ನು ಅರಿಯಲು ತೂಕ ಮಾಪನ ಮಾಡಿಸಲಾಗುತ್ತದೆ. ಆನೆಗಳ ಗಾತ್ರ ಮತ್ತು ತೂಕದ ಸೂತ್ರವನ್ನು ಅನುಸರಿಸಿ ಆಹಾರ ಕ್ರಮ ರೂಪಿಸಲಾಗುತ್ತದೆ ಎಂದು ಪ್ರಭುಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅರ್ಜುನನ ಸ್ಥಾನ ತುಂಬಲಿದ್ದಾನೆ ಏಕಲವ್ಯ, ಕಬ್ಬು-ಭತ್ತ ಕದ್ದು ತಿನ್ನಲು ಬಂದವ ಈಗ ದಸರಾ ಫೇವರೇಟ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.