
ಯಾದಗಿರಿ, ಜನವರಿ 16: ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಿ ಕ್ಯಾನ್ಸರ್ ರೋಗಿಗೆ ಬಾಸುಂಡೆ ಬರುವ ರೀತಿ ಪೊಲೀಸರು ಹೊಡೆದ ಪರಿಣಾಮ ಆತನ ಕಾಲು ಮುರಿದಿರುವ ಆರೋಪ ಯಾದಗಿರಿಯಲ್ಲಿ ಕೇಳಿಬಂದಿದೆ. ಕೆಂಭಾವಿ ನಿವಾಸಿ ಮೆಹಬೂಬ್ ಎಂಬರಿಗೆ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ಘಟನೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರ ಏಟಿನಿಂದ ಗಾಯಗೊಂಡಿರುವ ಮಹೆಬೂಬ್ನ ಕಲಬುರಗಿಯ ಜಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಮೆಹಬೂಬ್ ಮತ್ತು ಉತ್ತರ ಪ್ರದೇಶ ಮೂಲದ ಸಾಹಿಲ್ ಎಂಬಾತ ಸೇರಿ ಜಾತ್ರೆಗಳಲ್ಲಿ ಆಟಿಕೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ಆಗಸ್ಟ್ ವೇಳೆಗೆ ಆಟೋದಿಂದ ಬಿದ್ದು ಸಾಹಿಲ್ ಮೃತಪಟ್ಟಿದ್ದ. ಕಳೆದ ಐದು ತಿಂಗಳ ಹಿಂದೆ ನಡೆದಿರೋ ಅಪಘಾತದ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ಮೆಹಬೂಬ್ನ ವಿಚಾರಣೆಗೆಂದು ಪೊಲೀಸರು ಕರೆದಿದ್ದರು. ಆದರೆ ಪೊಲೀಸರ ಕೈಗೆ ಸಿಗದೆ ಮೆಹಬೂಬ್ ಓಡಾಡಿಕೊಂಡಿದ್ದ ಎನ್ನಲಾಗಿದೆ. ಕೊನೆಗೂ ಕೈಗೆ ಸಿಕ್ಕ ಆತನನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು, ವಿಚಾರಣೆ ನೆಪದಲ್ಲಿ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಬಾಲಕಿ ಕಣ್ಣೆದುರೇ ತಂದೆಯ ಕೊಲೆ ಪ್ರಕರಣ; ನಿಗೂಢ ಕೊಲೆಯ ಸುಳಿವು ನೀಡಿದ್ದ ಕಾರು! ಕೊನೆಗೂ ಬಲೆಗೆ ಬಿದ್ದ ಹಂತಕರು
ಇನ್ನು ಪೊಲೀಸರು ನೀಡಿದ ಹೊಡೆತದ ಏಟಿಗೆ ಮೆಹಬೂಬ್ ಕಾಲುಗಳು ಮತ್ತು ಹಿಮಭಾಗದಲ್ಲಿ ಬಾಸುಂಡೆಗಳು ಮೂಡಿವೆ. ಈಗಾಗಲೇ ಮೆಹಬೂಬ್ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಯಾಗಿದ್ದು, ಪೊಲೀಸರು ನಡೆಸುವ ಕ್ರೌರ್ಯಕ್ಕೆ ಆತನ ಕಾಲು ಮೂಳೆ ಮುರಿದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ನಡೆಸಿರುವ ಹಲ್ಲೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.