ಮದುವೆಗಾಗಿ ತವರಿಗೆ ಬಂದ ಕುಟುಂಬ: ಮಹಿಳೆ ಕೊರೊನಾಗೆ ಬಲಿ, ಉಳಿದವರಿಗೆ ಕ್ವಾರಂಟೈನ್​

ಕೋಲಾರ: ಅದು ರಾಷ್ಟ್ರ ರಾಜಧಾನಿಯಲ್ಲಿ ಸಂತೋಷವಾಗಿದ್ದ ಕುಟುಂಬ, ತವರು ಮನೆಯಲ್ಲಿನ ಮದುವೆ ಸಂಭ್ರಮಕ್ಕೆಂದು ಕುಟುಂಬ ಸಮೇತರಾಗಿ ಬಂದವರ ಮನೆಯಲ್ಲೀಗ ಸ್ಮಶಾನ ಮೌನ. ಇಡೀ ಕುಟುಂಬಕ್ಕೆ ಕುಟುಂಬವೇ ದಿಗ್ಭಂಧನಕ್ಕೆ ಒಳಗಾಗಿ, ಸಾವಿನ ನೋಬಿದ್ದರೂ ಕಣ್ಣೀರು ಹಾಕಲಾಗದ ಪರಿಸ್ಥಿತಿ, ಸತ್ತವರ ಮುಖವನ್ನು ಕೊನೆಯ ಬಾರಿಗೂ ನೋಡಲಾಗದ ಸ್ಥಿತಿ ತಂದೊಡ್ಡಿದೆ ಈ ಪಾಪಿ ಕೊರೊನಾ. ಮದುವೆಗೆ ಬಂದವರನ್ನ ಸ್ಮಶಾನಕ್ಕೆ ಕಳಿಸಿದ ಕೊರೊನಾ ಕೊರೊನಾ ಅದೆಷ್ಟು ಕ್ರೂರಿ ಅನ್ನೋದಕ್ಕೆ ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಸೋಂಕಿನಿಂದ ಮೃತಪಟ್ಟ ಆ ಮಹಿಳೆಯನ್ನ ಆಕೆಯ […]

ಮದುವೆಗಾಗಿ ತವರಿಗೆ ಬಂದ ಕುಟುಂಬ: ಮಹಿಳೆ ಕೊರೊನಾಗೆ ಬಲಿ, ಉಳಿದವರಿಗೆ ಕ್ವಾರಂಟೈನ್​
ಸಾಧು ಶ್ರೀನಾಥ್​

Updated on: Jun 29, 2020 | 4:19 PM

ಕೋಲಾರ: ಅದು ರಾಷ್ಟ್ರ ರಾಜಧಾನಿಯಲ್ಲಿ ಸಂತೋಷವಾಗಿದ್ದ ಕುಟುಂಬ, ತವರು ಮನೆಯಲ್ಲಿನ ಮದುವೆ ಸಂಭ್ರಮಕ್ಕೆಂದು ಕುಟುಂಬ ಸಮೇತರಾಗಿ ಬಂದವರ ಮನೆಯಲ್ಲೀಗ ಸ್ಮಶಾನ ಮೌನ. ಇಡೀ ಕುಟುಂಬಕ್ಕೆ ಕುಟುಂಬವೇ ದಿಗ್ಭಂಧನಕ್ಕೆ ಒಳಗಾಗಿ, ಸಾವಿನ ನೋಬಿದ್ದರೂ ಕಣ್ಣೀರು ಹಾಕಲಾಗದ ಪರಿಸ್ಥಿತಿ, ಸತ್ತವರ ಮುಖವನ್ನು ಕೊನೆಯ ಬಾರಿಗೂ ನೋಡಲಾಗದ ಸ್ಥಿತಿ ತಂದೊಡ್ಡಿದೆ ಈ ಪಾಪಿ ಕೊರೊನಾ.

ಮದುವೆಗೆ ಬಂದವರನ್ನ ಸ್ಮಶಾನಕ್ಕೆ ಕಳಿಸಿದ ಕೊರೊನಾ
ಕೊರೊನಾ ಅದೆಷ್ಟು ಕ್ರೂರಿ ಅನ್ನೋದಕ್ಕೆ ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಸೋಂಕಿನಿಂದ ಮೃತಪಟ್ಟ ಆ ಮಹಿಳೆಯನ್ನ ಆಕೆಯ ಪತಿ, ಮಗ, ಕುಟುಂಬಸ್ಥರೂ ನೋಡದ ಸ್ಥಿತಿ, ಕೊನೆಗೆ ಅಂತ್ಯಸಂಸ್ಕಾರಕ್ಕೂ ಬಾರದ ನೋವಿನ ಘಟನೆಯೊಂದು ನಡೆದಿದೆ. ಇಂಥಾದೊಂದು ಮನಕಲಕುವ ಘಟನೆ ನಡೆದಿರೋದು ಕೋಲಾರ ಜಿಲ್ಲೆಯಲ್ಲಿ.

ಕೆಜಿಎಫ್​ ತಾಲೂಕಿನ ತೂಕಲ್ಲು ಗ್ರಾಮದಿಂದ ಹೋಗಿ ದೆಹಲಿಯಲ್ಲಿ ವಾಸವಿದ್ದ ಮಹಿಳೆ ಬಹಳ ವರ್ಷಗಳ ನಂತರ ತಮ್ಮೂರಿನಲ್ಲಿ ತಮ್ಮ ಸಂಬಂಧಿಕರೊಬ್ಬರ ಮದುವೆಗೆಂದು ಜೂನ್​ 14 ರಂದು ತೂಕಲ್ಲು ಗ್ರಾಮಕ್ಕೆ ಬಂದಿದ್ದರು. ಜೂನ್​ 15 ರಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಕೊರೊನಾ​ ಬಂದಿತ್ತು. ಮಹಿಳೆಯನ್ನು ಕೊವಿಡ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಜೂನ್​ 26 ರಂದು ಮೃತಪಟ್ಟಳು.

ಅಷ್ಟೊತ್ತಿಗಾಗಲೇ ಮಹಿಳೆಯ 48 ವರ್ಷದ ಪತಿ, 16 ವರ್ಷದ ಮಗ ಸೇರಿ ಎಲ್ಲರನ್ನೂ ಕ್ವಾರಂಟೈನ್​​ನಲ್ಲಿರಿಸಲಾಗಿತ್ತು. ಈ ವೇಳೆ ಮೃತ ಮಹಿಳೆಯ ಪತಿಗೂ ಕೊವಿಡ್​ ಪಾಸಿಟಿವ್​ ಬಂದಿತ್ತು. ಪರಿಣಾಮ ಮೃತ ಮಹಿಳೆಯ ಅಂತ್ಯಸಂಸ್ಕಾರ ಮಾಡೋದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ತನ್ನ ಹುಟ್ಟೂರಿನ ಜನರು ಊರಿನಲ್ಲಿ ಆಕೆಯ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ವೇಳೆ ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಾರಿಣಿ ಹಾಗೂ ನಗರಸಭೆ ಸಿಬ್ಬಂದಿ ಕೋಲಾರದ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ.

ಮಗನಿಗೆ ಅಮ್ಮನ ಸಾವಿನ ವಿಷಯವೇ ತಿಳಿದಿಲ್ಲ?
ಸೋಂಕಿತ ಮಹಿಳೆ ಮೃತಪಟ್ಟ ವಿಚಾರ ತಿಳಿದು ಪತಿ ಸೇರಿ ಯಾರೊಬ್ಬರಿಗೂ ಮೃತ ಮಹಿಳೆಯ ಕೊನೆಯ ಬಾರಿ ದರ್ಶನಕ್ಕೆ ಅವಕಾಶ ಸಿಗಲಿಲ್ಲ. ಇನ್ನು ಕೊರೊನಾ ದಿಗ್ಬಂಧನದಲ್ಲಿರುವ ಮೃತ ಮಹಿಳೆಯ 16 ವರ್ಷದ ಬಾಲಕನಿಗೆ ತನ್ನ ತಾಯಿ ಮೃತಪಟ್ಟಿರುವ ವಿಷಯವೇ ತಿಳಿದಿಲ್ಲ. ಪ್ರತಿನಿತ್ಯ ಆತನಿಗೆ ಚಿಕಿತ್ಸೆ ನೀಡಲು ಹೋಗುವ ವೈದ್ಯರು ಮತ್ತು ಸಿಬ್ಬಂದಿ ತನ್ನ ತಾಯಿಯನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚುತ್ತಿದ್ದಾನಂತೆ.

ಆದ್ರೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕುಟುಂಬಸ್ಥರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಆ ಬಾಲಕಿನಿಗೆ ಆತನ ತಾಯಿ ಮೃತಪಟ್ಟಿರುವ ವಿಷಯ ತಿಳಿಸಿಲ್ಲ ಎಂದು ಹೇಳಲಾಗುತ್ತಿದೆ. ಕಾರಣ ವಿಷಯ ತಿಳಿದ್ರೆ ಎಲ್ಲಿ ಆತ ಆಘಾತಕ್ಕೊಳಗಾಗುತ್ತಾನೋ ಅನ್ನೋ ಭಯದಲ್ಲಿ ವಿಷಯ ತಿಳಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇಡೀ ಕುಟುಂಬಕ್ಕೆ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಅತ್ತ ತಾಯಿ ಮೃತಪಟ್ಟಿದ್ರೆ, ತಂದೆಗೂ ಕೊರೊನಾ ಪಾಸಿಟೀವ್​ ಬಂದಿದೆ, ಮಗ ಕ್ವಾರಂಟೇನ್​ನಲ್ಲಿದ್ದಾನೆ.

ಸಂತೋಷ ಅರಸಿ ಬಂದವಳು ಸ್ಮಶಾನ ಪಾಲಾದಳು!
ಒಟ್ಟಾರೆ ಬಹಳ ವರ್ಷಗಳ ಮೇಲೆ ತನ್ನ ತವರಿನಲ್ಲಿ ನಡೆಯಲಿದ್ದ ಮದುವೆ ಸಂಭ್ರಮಕ್ಕಾಗಿ ಬಂದಿದ್ದ ಆ ಕುಟುಂಬಕ್ಕೆ ಕೊರೊನಾ ತಂದಿಟ್ಟಿರುವ ಆಘಾತಕ್ಕೆ ಇಡೀ ಕುಟುಂಬ ನಲುಗಿ ಹೋಗಿದೆ. ಕುಟುಂಬದ ಎಲ್ಲರೂ ದಿಕ್ಕಾಪಾಲಾಗಿ ಹೋಗಿದ್ದು ಮನೆಯಲ್ಲಿ ಹಾಗೂ ಎಲ್ಲರ ಹೃದಯದಲ್ಲೂ ಸ್ಮಶಾನ ಮೌನ ಆವರಿಸಿದೆ.

Published On - 4:13 pm, Mon, 29 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us