ಗೋಕರ್ಣ: ಅಸ್ಥಿ ನಿಕ್ಷೇಪಣಾ ಕೆರೆ ಜಾಗ ಒತ್ತುವರಿ ವಿವಾದ ಕೊನೆಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ

ಕಾರವಾರ: ಒತ್ತುವರಿ ಜಾಗ ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಬಾಯಿಗೆಬಂದಂತೆ ಬೈದು, ಭದ್ರತೆಗೆ ತೆರಳಿದ ಪೊಲೀಸರು ಮತ್ತು ವರದಿಗಾರರಿಗೂ ಆವಾಜ್ ಹಾಕಿ ಕೊನೆಯಲ್ಲಿ ಕ್ಷಮಾಪಣೆ ಕೇಳಿ ಒತ್ತುವರಿ ತೆರವಿಗೆ ಅವಕಾಶ ಮಾಡಿಕೊಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ನಡೆದಿದೆ. ಘಟನೆಯ ವಿವರ : ಗೋಕರ್ಣದ ತಾಮ್ರಗೌರಿ ದೇವಾಲಯದ ಎದುರಿನಲ್ಲಿರುವ ತಾಮ್ರಪರ್ಣಿ ( ಅಸ್ಥಿ ನಿಕ್ಷೇಪಣಾ ಕೆರೆ)ಕೆರೆಯ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ಸ್ಥಳೀಯರಾದ ಪ್ರದೀಪ ಗಣಿಯನ್ ಎಂಬುವರು ತಾಲೂಕು ಮಟ್ಟದ ಅಧಿಕಾರಿಗಳಿಗೆ […]

ಗೋಕರ್ಣ: ಅಸ್ಥಿ ನಿಕ್ಷೇಪಣಾ ಕೆರೆ ಜಾಗ ಒತ್ತುವರಿ ವಿವಾದ ಕೊನೆಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Nov 12, 2020 | 12:46 PM

ಕಾರವಾರ: ಒತ್ತುವರಿ ಜಾಗ ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಬಾಯಿಗೆಬಂದಂತೆ ಬೈದು, ಭದ್ರತೆಗೆ ತೆರಳಿದ ಪೊಲೀಸರು ಮತ್ತು ವರದಿಗಾರರಿಗೂ ಆವಾಜ್ ಹಾಕಿ ಕೊನೆಯಲ್ಲಿ ಕ್ಷಮಾಪಣೆ ಕೇಳಿ ಒತ್ತುವರಿ ತೆರವಿಗೆ ಅವಕಾಶ ಮಾಡಿಕೊಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ನಡೆದಿದೆ.

ಘಟನೆಯ ವಿವರ :
ಗೋಕರ್ಣದ ತಾಮ್ರಗೌರಿ ದೇವಾಲಯದ ಎದುರಿನಲ್ಲಿರುವ ತಾಮ್ರಪರ್ಣಿ ( ಅಸ್ಥಿ ನಿಕ್ಷೇಪಣಾ ಕೆರೆ)ಕೆರೆಯ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ಸ್ಥಳೀಯರಾದ ಪ್ರದೀಪ ಗಣಿಯನ್ ಎಂಬುವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ರು. ನಂತರ ಕುಮಟಾ ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕರು ಸರ್ವೆ ನಡೆಸಿ ತಹಶೀಲ್ದಾರರಿಗೆ ಒತ್ತುವರಿಯಾಗಿರುವ ಬಗ್ಗೆ ವರದಿ ನೀಡಿದ್ದರು. ಆದರೆ ಕುಮಟಾ  ತಹಶೀಲ್ದಾರ್ ಮಾತ್ರ ಒತ್ತುವರಿಯಾಗಿಲ್ಲ ಎಂದು ದೂರುದಾರರಿಗೆ ತಿಳಿಸಿದ್ದರು. ನಂತರ ಮತ್ತೆ ದೂರುದಾರ ಪ್ರದೀಪ್ ಗಣಿಯನ್ ಲೋಕಾಯುಕ್ತಕ್ಕೆ ಪುನಃ ದೂರು ಸಲ್ಲಿಸಿ ಇಲ್ಲಿನ ಪರಿಸ್ಥಿಯನ್ನು ವಿವರಿಸಿದ್ದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಜಾಗ ಒತ್ತುವರಿ ಬಗ್ಗೆ ಸರ್ವೆಮಾಡಿ ವರದಿ ನೀಡುವಂತೆ ಮತ್ತೆ ಜಿಲ್ಲಾ ಭೂಮಾಪನ ಇಲಾಖೆ ನಿರ್ದೇಶಕರಿಗೆ ಆದೇಶಿಸಿದ್ರು. ಅದರಂತೆ ಜಿಲ್ಲಾ ಭೂ ಮಾಪನ ನಿರ್ದೇಶಕರು ಒತ್ತುವರಿ ಸಾಬೀತಾಗಿರುವ ಬಗ್ಗೆ ಲೋಕಾಯುಕ್ತಕ್ಕೆ ವರದಿ ನೀಡಿದ್ರು. ಲೋಕಾಯುಕ್ತ ಸೂಚನೆ ಪ್ರಕಾರ ಕುಮಟಾ ತಹಶೀಲ್ದಾರ್ ಮೇಘರಾಜ ನಾಯ್ಕ ನೇತೃತ್ವದ ಅಧಿಕಾರಿಗಳ ತಂಡ ಒತ್ತುವರಿ ಜಾಗವನ್ನು ತೆರವುಗೊಳಿಸಲು ಬಂದಿದ್ದ ಸಂದರ್ಭದಲ್ಲಿ ಒತ್ತುವರಿ ಮಾಡಿದ್ದ ಸ್ಥಳೀಯರಾದ ರಾಮಚಂದ್ರ ನಿರ್ವಾಣೇಶ್ವರ ಮತ್ತು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರಲ್ಲದೇ ಎರಡು ಗಂಟೆಗೂ ಹೆಚ್ಚು ಕಾಲ ರಂಪಾಟ ನಡೆಸಿ ಕೊನೆಯಲ್ಲಿ ತೆರವಿಗೆ ಒಪ್ಪಿಗೆ ನೀಡಿದರು. ನಂತರ ಅಧಿಕಾರಿಗಳು ಕೆರೆಯ ಜಾಗದಲ್ಲಿ ಕಟ್ಟಿದ ಕಟ್ಟೆಯನ್ನು ಒಡೆದು ತೆರವು ಮಾಡಿದ್ರು.

ಕೊನೆಯಲ್ಲಿ ಕ್ಷಮೆ :
ಒತ್ತರುವರಿ ಜಾಗವನ್ನು ತೆಗೆಯಲು ಒಪ್ಪಿಗೆ ನೀಡಿ ಮಾತನಾಡಿದ ಖಾಸಗಿ ಜಾಗದ ಮಾಲೀಕ ರಾಮಚಂದ್ರ ನಿರ್ವಾಣೇಶ್ವರ ನಮ್ಮ ಮನೆಯವರು ನೊಂದ ಮನಸ್ಸಿನಿಂದ ಆವೇಶದಲ್ಲಿ ಕೆಲವು ಮಾತನಾಡಿರಬಹುದು. ಇದರಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ . ಯಾರ ಮೇಲೂ ದ್ವೇಷದಿಂದ ಆಡಿದ ಮಾತಲ್ಲ ಎಂದು ಕ್ಷಮೆಯಾಚಿಸಿದ್ರು.

ಉಳಿದ ಕಡೆಯೂ ತೆರವು ಕಾರ್ಯಕ್ಕೆ ಒತ್ತಾಯ :
ಗೋಕರ್ಣ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಅತಿಕ್ರಮಣ ಕಟ್ಟಡಗಳು ಬಹಳಷ್ಟಿದ್ದು , ಇದರಂತೆ ತ್ವರಿತವಾಗಿ ತೆರವು ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂತು. ಅಸ್ಥಿ ನಿಕ್ಷೇಪಣೆಗೆ ಬರುವ ಪುರಾತನ ಪಷ್ಕರಣಿಯ ಜಾಗ ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿತ್ತು. ಅದರಂತೆ ಸದ್ಯ ಒತ್ತುವರಿ ತೆರವಾಗಿದೆ. ಆ ಜಾಗ ಮತ್ತೆ ಒತ್ತುವರಿಯಾಗದಂತೆ ಅಸ್ಥಿ ನಿಕ್ಷೇಪಣೆ ಮಾಡಲು ಮುಕ್ತವಾಗಿರಬೇಕು ಮತ್ತು ಗೋಕರ್ಣದ ಉಳಿದ ಭಾಗದಲ್ಲೂ ಇರುವ ಹಲವು ಒತ್ತುವರಿ ಜಾಗವನ್ನ ತೆರವು ಮಾಡಬೇಕೆಂದು ಒತ್ತಾಯಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us