ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಏಕಶಿಲಾ ಯೇಸು ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಡಿ. 25 ರಂದು ಕಾಂಗ್ರೆಸ್ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸ್ವಂತ ಹಣದಿಂದ ಜಮೀನು ಖರೀದಿಸಿ ಡಿಕೆಶಿ ಟ್ರಸ್ಟ್ಗೆ ನೀಡಿದ್ದಾರೆ. ಆದ್ರೆ ಇಲ್ಲಿ ಪ್ರತಿಮೆ ನಿರ್ಮಾಣವಾದ್ರೆ, ಮತಾಂತರ ನಡೆಯುತ್ತೆ ಎಂಬ ಭಾವನೆಯಿಂದ ಬಿಜೆಪಿ ನಾಯಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೊಟ್ಟ ಭರವಸೆ ಈಡೇರಿಸುವುದು ನನ್ನ ಕರ್ತವ್ಯ:
ಯೇಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ನಾನು ಎರಡೂವರೆ ವರ್ಷದ ಹಿಂದೆಯೇ ಪ್ಲ್ಯಾನ್ ಮಾಡಿದ್ದೆ. ಅಲ್ಲಿನ ಜನರಿಗೆ ಕೊಟ್ಟ ಭರವಸೆ ಈಡೇರಿಸುವುದು ನನ್ನ ಕರ್ತವ್ಯ ಎಂದು ಬಿಜೆಪಿ ನಾಯಕರ ಆರೋಪ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕೇವಲ ಯೇಸು ಪ್ರತಿಮೆಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಹಿಂದೂ ದೇಗುಲ ನಿರ್ಮಾಣಕ್ಕೂ ಸಹಾಯ ಮಾಡಿದ್ದೇನೆ. ಅಲ್ಲದೆ, ಪ್ರತಿಮೆ ನಿರ್ಮಾಣ ಮಾಡ್ತಿರುವ ಜಾಗ ಗೋಮಾಳದ್ದು. ಆದ್ರೂ ಆ ಜಾಗಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಬೆಂಗಳೂರಿನಲ್ಲಿ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಜೈಲಿನಲ್ಲಿದ್ದ ಕಾರಣ ಹಣ ನೀಡಲು ಆಗಿರಲಿಲ್ಲ: ಯೇಸುಕ್ರಿಸ್ತನ ಪ್ರತಿಮೆಯನ್ನು ಸೇವಾಮನೋಭಾವದಿಂದ ಮಾಡುತ್ತಿದ್ದೇನೆ. ನನಗೆ ಯಾವುದೇ ರೀತಿಯ ಪ್ರಚಾರದ ಅವಶ್ಯಕತೆಯಿಲ್ಲ. ಈ ಹಿಂದೆಯೇ ನಾನು ಅವರಿಗೆ ಹಣ ನೀಡಬೇಕಾಗಿತ್ತು. ಆದ್ರೆ, ಜೈಲಿನಲ್ಲಿದ್ದ ಕಾರಣ ಹಣವನ್ನು ನೀಡುವುದಕ್ಕೆ ಆಗಿರಲಿಲ್ಲ. ಅದಕ್ಕೆ ಯಾವುದೇ ಪ್ರತಿಫಲ ಬಯಸದೆ ಭೂಮಿ ನೀಡಿದ್ದೇವೆ ಎಂದರು.
ತಹಶೀಲ್ದಾರ್ ವರ್ಗಾವಣೆ:
ಕನಕಪುರದ ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿ ಸರ್ಕಾರಕ್ಕೆ ವರದಿ ನೀಡುವ ಮುನ್ನವೇ ತಹಶೀಲ್ದಾರ್ ಎತ್ತಂಗಡಿಯಾಗಿದ್ದಾರೆ. ಕನಕಪುರ ತಹಶೀಲ್ದಾರ್ ಆನಂದಯ್ಯ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಆನಂದಯ್ಯ ಸ್ಥಾನಕ್ಕೆ ಚಾಮರಾಜನಗರ ಜಿಲ್ಲೆ ಯಳಂದೂರು ತಹಶೀಲ್ದಾರ್ ವರ್ಷಾರನ್ನು ಕನಕಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಯೇಸು ಪ್ರತಿಮೆ ವಿವಾದ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಕಂದಾಯ ಸಚಿವ ಆರ್.ಅಶೋಕ್ ಸೂಚಿಸಿದ್ದರು.
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸೂಚನೆ ಮೇರೆಗೆ ಡಿಸೆಂಬರ್ 28ರಂದು ಕಪಾಲ ಬೆಟ್ಟಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಎಸಿ ದಾಕ್ಷಾಯಿಣಿ ಜೊತೆ ತಹಶೀಲ್ದಾರ್ ಆನಂದಯ್ಯ ಸೇರಿದಂತೆ ಅಧಿಕಾರಿಗಳ ತಂಡ ಕಪಾಲ ಬೆಟ್ಟಕ್ಕೆ ಭೇಟಿ ನೀಡಿತ್ತು. ಪ್ರಕರಣದ ವರದಿ ಸಲ್ಲಿಕೆ ಜವಾಬ್ದಾರಿ ತಹಶೀಲ್ದಾರ್ ಆನಂದಯ್ಯ ಮೇಲಿತ್ತು ಎನ್ನಲಾಗಿದೆ. ಇದೀಗ ರಾಜ್ಯ ಸರ್ಕಾರ ಆನಂದಯ್ಯರನ್ನ ವರ್ಗಾವಣೆ ಮಾಡಿ ಆದೇಶ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.