ಇಂದು ASI ಆಗಬೇಕಿದ್ದ ಹೆಡ್ ಕಾನ್ಸ್​​ಟೇಬಲ್​ ಅಪಘಾತದಲ್ಲಿ ಸಾವು, ಈಡೇರಲಿಲ್ಲ ಅವರ 25 ವರ್ಷದ ಕನಸು

ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಂದು ASI ಆಗಿ ಬಡ್ತಿ ಪಡೆಯಬೇಕಾಗಿದ್ದ ಹೆಡ್ ಕಾನ್ಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿರೇಗೌಜ ಗ್ರಾಮದ ಬಳಿ ನಡೆದಿದೆ.

ಇಂದು ASI ಆಗಬೇಕಿದ್ದ ಹೆಡ್ ಕಾನ್ಸ್​​ಟೇಬಲ್​ ಅಪಘಾತದಲ್ಲಿ ಸಾವು, ಈಡೇರಲಿಲ್ಲ ಅವರ 25 ವರ್ಷದ ಕನಸು
Updated By: ಸಾಧು ಶ್ರೀನಾಥ್​

Updated on: Dec 03, 2020 | 11:45 AM

ಚಿಕ್ಕಮಗಳೂರು: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಂದು ASI ಆಗಿ ಬಡ್ತಿ ಪಡೆಯಬೇಕಾಗಿದ್ದ ಹೆಡ್ ಕಾನ್ಸ್​​ಟೇಬಲ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿರೇಗೌಜ ಗ್ರಾಮದ ಬಳಿ ನಡೆದಿದೆ. 50 ವರ್ಷದ ಸಿದ್ದರಾಮಪ್ಪ ಮೃತ ದುರ್ದೈವಿ.

ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ಚಿಕ್ಕಮಗಳೂರು ನಗರದಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಕರ್ತವ್ಯ ಮುಗಿಸಿ ಚಿಕ್ಕಮಗಳೂರು ನಗರಕ್ಕೆ ಬೈಕ್​ನಲ್ಲಿ ಹಿಂದಿರುಗುವಾಗ ತಾಲೂಕಿನ ಹಿರೇಗೌಜ ಬಳಿ ಸಿದ್ದರಾಮಪ್ಪನವರಿಗೆ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ASI ಸಮವಸ್ತ್ರ ಕೂಡ ಸಿದ್ದ ಮಾಡಿಕೊಂಡಿದ್ದರು:
ಈ ಪರಿಣಾಮ ರಸ್ತೆಯಲ್ಲೇ ಹೆಡ್ ಕಾನ್ಸ್​​ಟೇಬಲ್ ಮೃತಪಟ್ಟಿದ್ದಾರೆ. ಮೂಲತಃ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ನಿವಾಸಿಯಾದ ಸಿದ್ದರಾಮಪ್ಪ 25 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಇಂದು ಎಎಸ್ಐ ಆಗಿ ಬಡ್ತಿ ಪಡೆಯಬೇಕಿತ್ತು. ಪ್ರಮೋಷನ್ ಸಿಕ್ಕ ಖುಷಿಯಲ್ಲಿ ಎಎಸ್ಐ ಸಮವಸ್ತ್ರ ಕೂಡ ಸಿದ್ದ ಮಾಡಿಕೊಂಡಿದ್ದರು.

ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಎಎಸ್ಐ ಆಗಬೇಕಿದ್ದ ಸಿಬ್ಬಂದಿಯನ್ನ ಕಳೆದುಕೊಂಡ ಇಲಾಖೆ ಸಿಬ್ಬಂದಿ ಮರುಗಿದ್ದಾರೆ. ಸುದೀರ್ಘ 25 ವರ್ಷ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದು ಎಎಸ್ಐ ಆಗಿ ಬಡ್ತಿ ಹೊಂದಬೇಕು, ಕೆಲಸ ಮಾಡಬೇಕು ಅನ್ನೋ ಸಿದ್ದರಾಮಪ್ಪ ಕನಸು ಕೊನೆಗೂ ನನಸಾಗದಿರುವುದು ನಿಜಕ್ಕೂ ದುರಂತವೇ ಸರಿ.