
ಬೆಂಗಳೂರು: ರಾಜ್ಯದ ಅತಿ ದೊಡ್ಡ ನಗರ, ರಾಜಧಾನಿ, ಬೆಂಗಳೂರು ನಗರ. ಇಂತಹ ಸಿಲಿಕಾನ್ ಸಿಟಿಯಲ್ಲೇ ಅವ್ಯವಸ್ಥೆ ಎದ್ದು ಕಾಣುತ್ತಿದೆ. ನಗರದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚುತ್ತಿದೆ. ಹೀಗಾಗಿ ಸೋಂಕಿತರನ್ನ ಕರೆದೊಯ್ಯಲು ಆ್ಯಂಬುಲೆನ್ಸ್ಗಳಿಲ್ಲ.
ಆಸ್ಪತ್ರೆ ವಾಹನಗಳ ಕೊರತೆ ಉಂಟಾಗಿದೆ. ಕೆಲವೊಮ್ಮೆ ಆ್ಯಂಬುಲೆನ್ಸ್ಗೆ ಕಾಲ್ ಮಾಡಿ ಐದಾರು ಗಂಟೆ ಆದ ಮೇಲೆ ವಾಹನ ಮನೆ ಬಳಿ ಬರ್ತಿದೆ. ಹೀಗಾಗಿ ಸೋಂಕಿತರು ಸ್ವಂತ ವಾಹನದಲ್ಲೇ ಆಸ್ಪತ್ರೆಗೆ ತೆರಳ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊವಿಡ್ ಟೆಸ್ಟ್ ವರದಿ ಬಂದ ತಕ್ಷಣ ಬಿಬಿಎಂಪಿ ಸಿಬ್ಬಂದಿ ಸೋಂಕಿತರಿಗೆ ಕರೆಮಾಡಿ ಮಾಹಿತಿ ನೀಡ್ತಾರೆ. ಕೊರೊನಾ ದೃಢವಾಗ್ತಿದ್ದಂತೆ ಸೋಂಕಿತರು ಆಸ್ಪತ್ರೆಗೆ ಅವರೇ ಹೋಗುತ್ತಿದ್ದಾರೆ. ಮನೆ ಬಳಿ ಆ್ಯಂಬುಲೆನ್ಸ್ ಬಂದ್ರೆ ಜನರು ಬೇರೆ ರೀತಿ ನೋಡ್ತಾರೆ.
ಅಲ್ಲದೆ ಮತ್ತೆ ಕೆಲವರು ನಾಲ್ಕೈದು ಗಂಟೆ ಕಾದರೂ ಆ್ಯಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಆತಂಕದಿಂದ ತಮ್ಮ ವಾಹನಗಳಲ್ಲಿಯೇ ಆಸ್ಪತ್ರೆಗೆ ತೆರಳ್ತಿದ್ದಾರೆ. ಸೋಂಕಿತರು ಹೀಗೆ ಆಸ್ಪತ್ರೆಗೆ ಹೋಗುತ್ತಿರುವುದರಿಂದ ಆತಂಕ ಶುರುವಾಗಿದೆ. ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ ರಸ್ತೆಗಳಲ್ಲಿ ಸೋಂಕಿತರು ವಾಹನ ಓಡಿಸಿಕೊಂಡು ಬರ್ತಿದ್ದಾರೆ. ರಾಜಧಾನಿಯಲ್ಲೇ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.