
ಕಲಬುರಗಿ:ವೈಯಕ್ತಿಕ ವಿಚಾರಗಳಿಗಾಗಿ ಯೂನಿವರ್ಸಿಟಿಯ ಪ್ರಾಧ್ಯಾಪಕರಿಬ್ಬರು ಕಿತ್ತಾಡಿ ಕೊಂಡಿರುವ ಘಟನೆ ಗುಲ್ಬರ್ಗ ವಿವಿಯಲ್ಲಿ ನಡೆದಿದೆ. ಗುಲ್ಬರ್ಗ ವಿವಿಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಜಿ.ಎಂ ವಿದ್ಯಾಸಾಗರ್ ಅವರ ಮೇಲೆ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಎಸ್.ಪಿ ಮೇಲಕ್ಕೇರಿ ಅವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜೀವ ಬೆದರಿಕೆ, ಹಲ್ಲೆ:CCTVಯಲ್ಲಿ ಸೆರೆ
ಪ್ರೊಫೆಸರ್ ಎಸ್.ಪಿ ಮೇಲಕೇರಿ ಅವರ ಸಹೋದರ ಪುತ್ರ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಫಿಲ್ ಮಾಡುತ್ತಿದ್ದು, ಆತನ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮುಂಜಾನೆ ಪ್ರೊಫೆಸರ್ ವಿದ್ಯಾಸಾಗರ್ ಅವರ ಕೊಠಡಿಗೆ ಬಂದು, ಎಸ್.ಪಿ ಮೇಲಕೇರಿ ಅವರು ಮನಬಂದಂತೆ ಹಲ್ಲೆ ಮಾಡಿದ್ದಾರೆಂದು, ಡಾಕ್ಟರ್ ವಿದ್ಯಾಸಾಗರ್ ಅವರು ಕಲಬುರ್ಗಿ ನಗರದ ಗುಲ್ಬರ್ಗ ವಿ.ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಮೇಲಿನ ಹಲ್ಲೆಗೆ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಆಗಿರುವ ಡಾಕ್ಟರ್ ಪ್ರತಿಮಾ ಮಠ ಅವರು ಸಹ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಲ್ಲೆ ಮಾಡುವುದರ ಜೊತೆಗೆ ಜೀವ ಬೆದರಿಕೆ ಹಾಕಿರೋದಾಗಿ ಡಾ.ವಿದ್ಯಾಸಾಗರ ಆರೋಪ ಮಾಡಿದ್ದಾರೆ. ಹಲ್ಲೆಯ ದೃಶ್ಯಾವಳಿಗಳು CCTV ಯಲ್ಲಿ ಸೆರೆಯಾಗಿದ್ದು,ದೂರಿನನ್ವಯ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
Published On - 10:22 am, Wed, 19 August 20