ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತು ಎತ್ತಿದರೆ ವಿಧಾನ ಸೌಧಕ್ಕೆ ಚಪ್ಪಡಿ ಆಗುತ್ತೇನೆ ಅಂತಾರೆ! ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ದೂರದೃಷ್ಟಿಯಿಂದ ಇಂತಹ ವ್ಯಕ್ತಿ ಹುಟ್ಟಬಹುದು ಅಂತಾನೇ ವಿಧಾನ ಸೌಧಕ್ಕೆ ಒಂದು ಬಾಗಿಲು ಇಡುವ ಬದಲು ನಾಲ್ಕು ಬಾಗಿಲು ಇಟ್ಟಿದ್ದಾರೆ. ಒಂದು ಬಾಗಿಲು ಇರಿಸಿದರೆ ಇವರು ಬೇರೆ ಚಪ್ಪಡಿ ತಂದು ಹಾಕಬಹುದು ಅಂತಾ ನಾಲ್ಕು ಬಾಗಿಲು ಮಾಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ನಾಯಕ ಶಿವಕುಮಾರ್ ಗೆ ಈಗ ಯಾವುದೇ ದಿಕ್ಕು ಇಲ್ಲ. ಚುನಾವಣೆ ಮುಗಿದ ಬಳಿಕ ಅವರಿಗೆ ದೇವರೇ ದಿಕ್ಕು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ನಮ್ಮಲ್ಲಿ ಯಡಿಯೂರಪ್ಪ ಒಬ್ಬರೇ ರಾಜಾ ಹುಲಿ
ಉಪಚುನಾವಣೆ ಬಳಿಕ ಬಿಜೆಪಿಯಲ್ಲಿ ಆಂತರಿಕ ಕಲಹ ಜಾಸ್ತಿಯಾಗುತ್ತದೆ ಅಂತಾ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಅಶೋಕ್, ನಮ್ಮಲ್ಲಿ ಯಡಿಯೂರಪ್ಪ ಒಬ್ಬರೇ ರಾಜಾ ಹುಲಿ. ನಮ್ಮಲ್ಲಿ ಬೇರೆ ಯಾವುದೇ ಹುಲಿಗಳು ಇಲ್ಲ. ಕಾಂಗ್ರೆಸ್ ನಲ್ಲಿ ಸುಮಾರು ಜನ ನಾನೇ ಹುಲಿ ಹುಲಿ ಅಂತಾ ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.