ಏನಾಯ್ತು ಅಂತ ನೀನಾದರೂ ಹೇಳಯ್ಯ ರೈನಾ……

ಚೆನೈ ಸುಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಆಧಾರಸ್ತಂಭ ಸುರೇಶ್ ರೈನಾ ಇದ್ದಕ್ಕಿದ್ದಂತೆ ಯುಎಇಯಿಂದ ಭಾರತಕ್ಕೆ ವಾಪಸ್ಸಾಗಿದ್ದು ಕ್ರಿಕೆಟ್ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಸೆಪ್ಟಂಬರ್ 19 ರಿಂದ ಕೊಲ್ಲಿ ರಾಷ್ಟ್ರದಲ್ಲಿ ಆರಂಭವಾಗಲಿರುವ ಐಪಿಎಲ್-13ರ ಆವೃತಿಯಲ್ಲಿ ರೈನಾ ‘ವೈಯಕ್ತಿಕ ಕಾರಣಗಳಿಂದಾಗಿ’ ಪಾಲ್ಗೊಳ್ಳವುದಿಲ್ಲ ಅಂತ ಸಿಎಸ್​ಕೆ ಆಡಳಿತ ಮಂಡಳಿ ಈಗಾಗಲೇ ಖಚಿತಪಡಿಸಿದೆ. ಅದು ಹಾಗಿರಲಿ, ರೈನಾ ಯಾಕೆ ಹಾಗೆ ವಾಪಸ್ಸು ಬಂದರೆನ್ನುವುದು ಮಾತ್ರ ಇನ್ನೂ ನಿಗೂಢವಾಗೇ ಉಳಿದಿದೆ. ಮೊದಲು, ಪಂಜಾಬಿನ ಪಠಾಣಕೋಟ್ ಜೆಲ್ಲೆಯಲ್ಲಿ ವಾಸವಿದ್ದ ಅವರ ಸಂಬಂಧಿಯೊಬ್ಬರನ್ನು ದರೋಡೆಕೋರರು ಆಗಸ್ಟ 19ರ […]

ಏನಾಯ್ತು ಅಂತ ನೀನಾದರೂ ಹೇಳಯ್ಯ ರೈನಾ......
ಸುರೇಶ್​ ರೈನಾ
ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2020 | 3:20 PM

ಚೆನೈ ಸುಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಆಧಾರಸ್ತಂಭ ಸುರೇಶ್ ರೈನಾ ಇದ್ದಕ್ಕಿದ್ದಂತೆ ಯುಎಇಯಿಂದ ಭಾರತಕ್ಕೆ ವಾಪಸ್ಸಾಗಿದ್ದು ಕ್ರಿಕೆಟ್ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಸೆಪ್ಟಂಬರ್ 19 ರಿಂದ ಕೊಲ್ಲಿ ರಾಷ್ಟ್ರದಲ್ಲಿ ಆರಂಭವಾಗಲಿರುವ ಐಪಿಎಲ್-13ರ ಆವೃತಿಯಲ್ಲಿ ರೈನಾ ‘ವೈಯಕ್ತಿಕ ಕಾರಣಗಳಿಂದಾಗಿ’ ಪಾಲ್ಗೊಳ್ಳವುದಿಲ್ಲ ಅಂತ ಸಿಎಸ್​ಕೆ ಆಡಳಿತ ಮಂಡಳಿ ಈಗಾಗಲೇ ಖಚಿತಪಡಿಸಿದೆ.

ಅದು ಹಾಗಿರಲಿ, ರೈನಾ ಯಾಕೆ ಹಾಗೆ ವಾಪಸ್ಸು ಬಂದರೆನ್ನುವುದು ಮಾತ್ರ ಇನ್ನೂ ನಿಗೂಢವಾಗೇ ಉಳಿದಿದೆ.

ಮೊದಲು, ಪಂಜಾಬಿನ ಪಠಾಣಕೋಟ್ ಜೆಲ್ಲೆಯಲ್ಲಿ ವಾಸವಿದ್ದ ಅವರ ಸಂಬಂಧಿಯೊಬ್ಬರನ್ನು ದರೋಡೆಕೋರರು ಆಗಸ್ಟ 19ರ ಮಧ್ಯರಾತ್ರಿ ಕೊಂದು ಅದೇ ಕುಟುಂಬದ ಇತರ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿದ ಸುದ್ದಿ ಕೇಳಿ ರೈನಾ ಭಾರತಕ್ಕೆ ಧಾವಿಸಿದರೆಂದು ವರದಿಯಾಯಿತು.

ಅದಾದ ನಂತರ, ರೈನಾ, ಕೊವಿಡ್ ಸೋಂಕಿನ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದರು ಮತ್ತು ತಮ್ಮ ಅವಶ್ಯಕತೆ ಸಿಎಸ್​ಕೆಗಿಂತ ಕುಟುಂಬಕ್ಕೆ ಜಾಸ್ತಿಯಿದೆ ಅಂತ ಭಾವಿಸಿ ಪತ್ನಿ ಮತ್ತು ಮಕ್ಕಳೊಂದಿಗಿರಲು ಮನೆಗೆ ಹಿಂದಿರುಗಿದರು ಎಂದು ವರದಿಯಾಯಿತು. ಜನ ಅದನ್ನೂ ನಂಬಿದರು. ಅದನ್ನು ಪುಷ್ಟೀಕರಿಸುವ ಹಾಗೆ ರೈನಾ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗಿನ ಚಿತ್ರಗಳನ್ನು ಶೇರ್ ಮಾಡಿದರು.

ಆದರೆ, ಸೋಮವಾರ ಹೊಸ ಸುದ್ದಿಯೊಂದು ಹುಟ್ಟಿಕೊಂಡಿದೆ. ರೈನಾ ಟೀಮ್ ಮ್ಯಾನೇಜ್​ಮೆಂಟ್ ಮೇಲೆ ಕೋಪ ಮಾಡಿಕೊಂಡಿದ್ದಾರಂತೆ. ಸಿಎಸ್​ಕೆ ತಂಡದ ಆಟಗಾರರು ತಂಗಿರುವ ಶಾರ್ಜಾದ ಒಂದು ಹೋಟೆಲ್​ನಲ್ಲಿ ತನಗೆ ಬಾಲ್ಕನಿಯಿರುವ ಸೂಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಅವರು ತೀವ್ರ ಅಸಮಾಧಾನಗೊಂಡು ಈ ಬಾರಿ ಆಡುವುದೇ ಬೇಡವೆಂದು ನಿರ್ಧರಿಸಿ ವಾಪಸ್ಸು ಬಂದರಂತೆ. ಇದು ಸಹ ನಿಜವಿರಬಹುದು, ಯಾಕೆಂದರೆ, ತಂಡದ ಮಾಲೀಕ ಎನ್ ಶ್ರೀನಿವಾಸನ್ ಅವರು, ರೈನಾ ಅವರ ವರ್ತನೆಯನ್ನು ಖಂಡಿಸಿ, ‘ಕೆಲ ಕ್ರಿಕೆಟ್ ಆಟಗಾರರು ದೊಡ್ಡ ಸೆಲಿಬ್ರಿಟಿಗಳಂತೆ, ಮುಂಗೋಪಿ ಬಾಲಿವುಡ್ ನಟರಂತೆ ವರ್ತಿಸಲಾರಂಭಿಸಿದ್ದಾರೆ. ರೈನಾ ವರ್ಷಕ್ಕೆ ರೂ 11 ಕೋಟಿಗಳ ಆದಾಯವನ್ನು ಧಿಕ್ಕರಿಸಿರುವುದು ಅವರಿಗೆ ಮುಂದೆ ಮುಳುವಾಗಲಿದೆ,’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಅದರೆ, ಶ್ರೀನಿವಾಸನ್ ಈಗ ತಾನು ಹಾಗೆ ಹೇಳಲೇ ಇಲ್ಲ ಎಂಬಂತೆ ಆಡುತ್ತಿದ್ದಾರೆ.

‘‘ಸಿಎಸ್​ಕೆ ತಂಡಕ್ಕೆ ಸುರೇಶ್ ರೈನಾ ನೀಡಿರುವ ಕೊಡುಗೆ ಅಪ್ರತಿಮ ಹಾಗೂ ಅದ್ವಿತೀಯವಾದದ್ದು. ಆದರೆ ಜನ ಅವರ ಬಗ್ಗೆ ಏನೆಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ರೈನಾ ಅನುಭವಿಸುತ್ತಿರುವ ಸಂಕಟವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಜನ ಮಾಡಬೇಕು,’’ಎಂದಿದ್ದಾರೆ.

ತಾನು ವಾಪಸ್ಸು ಬಂದ ನಂತರ ಇಷ್ಟೆಲ್ಲ ನಡೆಯುತ್ತಿದ್ದರೂ ರೈನಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮುಗುಮ್ಮಾಗಿದ್ದಾರೆ. ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆಯೂ ರೈನಾಗೆ ಅಸಮಾಧಾನವಿದೆಯಂತೆ. ಯಾವುದು ಸತ್ಯ, ಯಾವುದು ಸುಳ್ಳು ಅಂತ ರೈನಾ ಬಾಯಿಬಿಟ್ಟಾಗ ಮಾತ್ರ ಗೊತ್ತಾಗಲಿದೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us