ಮಗುವಾಗಿದ್ದಾಗ ಅಪಹರಣ, ತನ್ನ ಪ್ರಕರಣದ ಆರೋಪಿಗಳಿಗೆ 17 ವರ್ಷಗಳ ಬಳಿಕ ಶಿಕ್ಷೆ ಕೊಡಿಸಿದ ವಕೀಲ

ಬರೋಬ್ಬರಿ 17 ವರ್ಷಗಳ ಬಳಿಕ ತನ್ನ ಪ್ರಕರಣದ ಆರೋಪಿಗಳಿಗೆ ವಕೀಲರೊಬ್ಬರು ಜೀವಾವಧಿ ಶಿಕ್ಷೆ ಕೊಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 7 ವರ್ಷದವನಾಗಿದ್ದಾಗ ಅಪಹೃತನಾಗಿದ್ದ ಹರ್ಷ್​ ಗಾರ್ಗ್​ ಎಂಬುವವರು ಈಗ ವಕೀಲರಾಗಿದ್ದು, ತನ್ನ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ.

ಮಗುವಾಗಿದ್ದಾಗ ಅಪಹರಣ, ತನ್ನ ಪ್ರಕರಣದ ಆರೋಪಿಗಳಿಗೆ 17 ವರ್ಷಗಳ ಬಳಿಕ ಶಿಕ್ಷೆ ಕೊಡಿಸಿದ ವಕೀಲ
ವಕೀಲ ಹರ್ಷ್​ ಗಾರ್ಗ್​
Image Credit source: India Today

Updated on: Sep 23, 2024 | 8:17 AM

ಇದು ಬರೋಬ್ಬರಿ 17 ವರ್ಷಗಳ ಹಿಂದಿನ ಪ್ರಕರಣ, ಉತ್ತರ ಪ್ರದೇಶದ ಆಗ್ರಾದಲ್ಲಿ 2007, ಫೆಬ್ರವರಿಯಲ್ಲಿ ನಡೆದ ಘಟನೆ ಇದು, ಹರ್ಷ್​ ಗಾರ್ಗ್​ಗೆ ಆಗಿನ್ನು 7 ವರ್ಷ ವಯಸ್ಸು. ಆಗ ಅವರನ್ನು ಅಪಹರಿಸಲಾಗಿತ್ತು, ಹರ್ಷ್​ ಗಾರ್ಗ್​ ತನ್ನ ತಂದೆ ರವಿ ಗಾರ್ಗ್​ ಜತೆಗೆ ಮೆಡಿಕಲ್ ಸ್ಟೋರ್​ನಲ್ಲಿ ಕುಳಿತಿದ್ದರು, ಆ ದಿನ ಸಂಜೆ 7 ಗಂಟೆ ಸುಮಾರಿಗೆ ರಾಜಸ್ಥಾನ ನೋಂದಣಿ ಇರುವ ಕಾರು ಅವರ ಬಳಿಗೆ ಬಂದು ನಿಂತಿತ್ತು.

ಕಾರು ನಿಲ್ಲಿಸಿ ಗುಡ್ಡನ್ ಕಚ್ಚಿ ತನ್ನ ಸಹಚರರೊಂದಿಗೆ ಕೆಳಗಿಳಿದು ಹರ್ಷ್​ಗೆ ತಂದೆ ಹಣೆಗೆ ಗನ್ ಇಟ್ಟು ಹರ್ಷ್​ನನ್ನು ಅಪಹರಿಸಿದ್ದರು, ಆಗ ಹರ್ಷ್​ ತಂದೆಗೆ ಗುಂಡು ಹಾರಿಸಲಾಗಿತ್ತು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ಒಂದೊಮ್ಮೆ ಹರ್ಷ್​ನನ್ನು ಸುರಕ್ಷಿತವಾಗಿ ಕಳುಹಿಸಬೇಕೆಂದರೆ 55 ಲಕ್ಷ ರೂ. ಹಣ ಕೊಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು.

ಮಾರ್ಚ್​ 6, 2007ರಂದು ಆರೋಪಿಗಳಾದ ಭೀಮ್ ಸಿಂಗ್ ಹಾಗೂ ರಾಮ್ ಪ್ರಕಾಶ್ ಹರ್ಷ್​ನನ್ನು ಬೇರೆಡೆಗೆ ಕರೆದೊಯ್ಯುತ್ತಿದ್ದಾಗ ಹರ್ಷ್​ ಅವರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆರೋಪಿಗಳಿಬ್ಬರು ಆತನನ್ನು ಹಿಂಬಾಲಿಸಿದ್ದರು, ಆದರೆ ಪೊಲೀಸರನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದರು.

ನಂತರ ಪೊಲೀಸರು ಗುಡ್ಡನ್ ಕಚ್ಚಿ, ರಾಜಕುಮಾರ್, ಫತೇ ಸಿಂಗ್, ಅಮರ್ ಸಿಂಗ್, ಬಲ್ವೀರ್, ರಾಜೇಶ್ ಶರ್ಮಾ, ಭೀಮ್ ಸಿಂಗ್ ಮತ್ತು ರಾಮ್ ಪ್ರಕಾಶ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಮತ್ತಷ್ಟು ಓದಿ: ಇದು ಡಿಜಿಟಲ್ ಇಂಡಿಯಾ ಕಣ್ರೀ; ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುತ್ತಾರೆ ಬೆಂಗಳೂರಿನ ಈ ಆಟೋ ಚಾಲಕ

2014ರಲ್ಲಿ ವಿಚಾರಣೆ 2018ರವರೆಗೂ ನಡೆಯಿತು, ಹರ್ಷ್​ ಅವರ ತಂದೆ ಕೂಡ ವಕೀಲರಾಗಿದ್ದಾರೆ. ಹರ್ಷ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದರು ಮತ್ತು ವಿಚಾರಣೆಯ ಸಮಯದಲ್ಲಿ ಅವರು ಸ್ವತಃ ವಕೀಲರಾಗಲು ನಿರ್ಧರಿಸಿದರು.
ಪದವಿಯ ನಂತರ, ಹರ್ಷ್ 2022 ರಲ್ಲಿ ಆಗ್ರಾ ಕಾಲೇಜಿನಿಂದ ಎಲ್‌ಎಲ್‌ಬಿಯನ್ನು ಪೂರ್ಣಗೊಳಿಸಿದರು ಮತ್ತು ಮುಂದಿನ ವರ್ಷ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡರು.

ಹರ್ಷ್ ಅವರು ಪ್ರಾಸಿಕ್ಯೂಷನ್ ತಂಡವನ್ನು ಸೇರಿಕೊಂಡರು ಮತ್ತು ಜೂನ್ 2024 ರಲ್ಲಿ ಕೇಳಿದ ಅಂತಿಮ ವಾದಗಳನ್ನು ಸ್ವತಃ ಮಂಡಿಸಿದರು. ಸೆಪ್ಟೆಂಬರ್ 17 ರಂದು ವಿಶೇಷ ನ್ಯಾಯಾಧೀಶ ನ್ಯಾಯಾಲಯವು ಅಪಹರಣ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

14 ಆರೋಪಿಗಳ ಪೈಕಿ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅವರಲ್ಲಿ ನಾಲ್ವರು- ದಲೇಲ್ ಸಿಂಗ್, ಲಖನ್ ಸಿಂಗ್, ರಾಜೇಂದ್ರ ಮತ್ತು ರಮೇಶ್- ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಬಚ್ಚು ಮತ್ತು ನಿರಂಜನ್ ಎಂದು ಗುರುತಿಸಲಾಗಿದ್ದು, ವಿಚಾರಣೆ ವೇಳೆ ಮೃತಪಟ್ಟಿದ್ದಾರೆ.

ಹರ್ಷ ಈಗ ಯುಪಿ ಪ್ರಾಂತೀಯ ನಾಗರಿಕ ಸೇವಾ ನ್ಯಾಯಾಂಗ ಪರೀಕ್ಷೆಗೆ (ಪಿಸಿಎಸ್-ಜೆ) ತಯಾರಿ ನಡೆಸುತ್ತಿದ್ದಾರೆ, ಇದು ಕಾನೂನು ಪದವೀಧರರಿಗೆ ಅಧೀನ ನ್ಯಾಯಾಂಗ ಸದಸ್ಯರಾಗಿ ನೇಮಕಗೊಳ್ಳಲು ಪ್ರವೇಶ ಮಟ್ಟದ ಪರೀಕ್ಷೆಯಾಗಿದೆ.
ಅಂತಿಮ ವಾದದ ನಂತರ, ನ್ಯಾಯಾಲಯವು ಆರೋಪಿಗಳಾದ ಗುಡ್ಡನ್ ಕಚ್ಚಿ, ರಾಜೇಶ್ ಶರ್ಮಾ, ರಾಜ್‌ಕುಮಾರ್, ಫತೇ ಸಿಂಗ್ ಅಲಿಯಾಸ್ ಚಿಗ್ಗಾ, ಅಮರ್ ಸಿಂಗ್, ಬಲ್ವೀರ್, ರಾಮ್‌ಪ್ರಕಾಶ್ ಮತ್ತು ಭಿಕಮ್ ಅಲಿಯಾಸ್ ಭಿಕಾರಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ