ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಒಂದೇ ಶಾಲೆಯ 229 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು; 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆ

ಮಹಾರಾಷ್ಟ್ರದಲ್ಲಿ ಬುಧವಾರ ಒಂದೇದಿನ ಬರೋಬ್ಬರಿ 8,807 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 80 ಸಾವಿನ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 21,21,119ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 51,937ಕ್ಕೆ ಏರಿದೆ.

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಒಂದೇ ಶಾಲೆಯ 229 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು;  8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆ
ಪ್ರಾತಿನಿಧಿಕ ಚಿತ್ರ

Updated on: Feb 25, 2021 | 1:09 PM

ಮುಂಬೈ: ಭಾರತದ ಕೆಲವು ರಾಜ್ಯಗಳು ಕೊರೊನಾ 2ನೇ ಅಲೆಗೆ ತತ್ತರಿಸುತ್ತಿವೆ. ಅದರಲ್ಲಿ ಮಹಾರಾಷ್ಟ್ರ ಕೂಡ ಒಂದು. ಕೊರೊನಾ ಭಾರತಕ್ಕೆ ಕಾಲಿಟ್ಟಾಗಿನಿಂದ ಅತಿ ಹೆಚ್ಚು ಪ್ರಕರಣ ಬೆಳಕಿಗೆ ಬರುತ್ತಿರುವುದು ಮಹಾರಾಷ್ಟ್ರದಿಂದಲೇ. ಇದೀಗ ಮತ್ತೆ ಅಲ್ಲಿ ಕೊರೊನಾ 2ನೇ ಅಲೆ ತಾಂಡವವಾಡುತ್ತಿದೆ. ಇದೀಗ ವಾಶಿಮ್​ ಜಿಲ್ಲೆಯಲ್ಲಿ ಒಂದೇ ವಸತಿ ಶಾಲೆಯ 229 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಇಡೀ ಶಾಲೆಯ ಸುತ್ತಲಿನ ಪ್ರದೇಶವನ್ನು ಕಂಟೇನ್​ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಈ ವಸತಿ ಶಾಲೆಯಲ್ಲಿ ಒಟ್ಟು 327 ವಿದ್ಯಾರ್ಥಿಗಳು ಇದ್ದು, ಇವರೆಲ್ಲಿ ಬಹುತೇಕರು ಅಮರಾವತಿ, ಹಿಂಗೋಲಿ, ನಂದೇದ್​, ವಾಶಿಮ್​, ಬುಲ್ಧಾನಾ ಮತ್ತು ಅಕೋಲಾದವರಾಗಿದ್ದಾರೆ.

ಇತ್ತೀಚೆಗೆ ವಾಶಿಮ್​ನ ದೇವಸ್ಥಾನವೊಂದಕ್ಕೆ ಶಿವ್ ಸೇನಾ ಸಚಿವ ಸಂಜಯ್​ ರಾಥೋಡ್​ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಕೊವಿಡ್​ 19 ನಿಯಮಗಳನ್ನೆಲ್ಲ ಉಲ್ಲಂಘಿಸಿ ಗುಂಪುಗೂಡಿದ್ದರು. ಇದೀಗ ಅದೇ ಜಿಲ್ಲೆಯ 229 ವಿದ್ಯಾರ್ಥಿಗಳು ಕೊವಿಡ್​-19 ಸೋಂಕಿಗೆ ಒಳಗಾಗಿದ್ದು ದೊಡ್ಡ ಸುದ್ದಿಯಾಗಿದೆ.ಫೆ.14ರಂದು ಈ ವಿದ್ಯಾರ್ಥಿಗಳೆಲ್ಲ ವಸತಿ ಶಾಲೆಗೆ ಸೇರಿದ್ದರು. ಎಲ್ಲ 327 ವಿದ್ಯಾರ್ಥಿಗಳಿಗೂ ಆರ್​​ಟಿ-ಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಮೊದಲ ಹಂತದಲ್ಲಿ ಸುಮಾರು 21 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು ದೃಢಪಟ್ಟಿತು ಎಂದು ರಿಸೋದ್​ ತಹಸೀಲ್ದಾರ್ ಅಜಿತ್​ ಶೇಲಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬುಧವಾರ ಒಂದೇದಿನ ಬರೋಬ್ಬರಿ 8,807 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 80 ಸಾವಿನ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 21,21,119ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 51,937ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಫೆ.10ರಿಂದಲೂ ಕೊವಿಡ್​ 19 ಸೋಂಕು ಏರಿಕೆಯಾಗುತ್ತಿದೆ. ಫೆ.19ರಿಂದ ಈಚೆಗೆ ಪ್ರತಿದಿನ 6000ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ.

ಮತ್ತೆ ಲಾಕ್​ಡೌನ್
ಇನ್ನು ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೊರೊನಾದ ಎರಡನೇ ಅಲೆ ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ. ಕೊವಿಡ್​-19 ನಿಯಂತ್ರಣಕ್ಕೆ ಸಂಬಂಧಪಟ್ಟ ಎಲ್ಲ ನಿಯಮಗಳನ್ನೂ ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದರು.  ಅಷ್ಟೇ ಅಲ್ಲ, ಇನ್ನು ಒಂದುವಾರದಿಂದ 15 ದಿನಗಳವರೆಗೆ ಪರಿಸ್ಥಿತಿಯನ್ನು ನೋಡಿಕೊಂಡು ಮತ್ತೆ ಲಾಕ್​ಡೌನ್ ಜಾರಿಮಾಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ ಎಂದೂ ತಿಳಿಸಿದ್ದರು.

ಇದನ್ನೂ ಓದಿ: ದೇಶದಲ್ಲಿ ಕೊರೊನಾ 2ನೇ ಅಲೆಯ ಆತಂಕ.. ಮತ್ತೊಮ್ಮೆ ತತ್ತರಿಸಿದ ಮಹಾರಾಷ್ಟ್ರ, ಕೇರಳ

 

Follow Us