ಭಾರತೀಯರ ಸುರಕ್ಷತೆ ಕುರಿತು ಸಚಿವರಿಂದ ಇರಾನ್ ಜೊತೆ 3 ಬಾರಿ ಮಾತುಕತೆ; ವಿದೇಶಾಂಗ ಸಚಿವಾಲಯ ಮಾಹಿತಿ
ಇರಾನ್- ಇಸ್ರೇಲ್, ಅಮೆರಿಕದ ನಡುವಿನ ಯುದ್ಧ ಇಂದು 13ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷಿತ ವಾಪಸಾತಿಗೆ ಭಾರತ ಸರ್ಕಾರ ಅನುಕೂಲ ಕಲ್ಪಿಸುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸುಮಾರು 9,000 ಭಾರತೀಯ ಪ್ರಜೆಗಳು ಇರಾನ್ನಲ್ಲಿಯೇ ಉಳಿದಿದ್ದಾರೆ. ಈ ಗುಂಪಿನಲ್ಲಿ ವಿದ್ಯಾರ್ಥಿಗಳು, ನಾವಿಕರು, ಉದ್ಯಮಿಗಳು ಮತ್ತು ಯಾತ್ರಿಕರು ಸೇರಿದ್ದಾರೆ. ಈ ಹಿಂದೆ ನೀಡಲಾದ ಸಲಹೆಗಳು ಹಲವಾರು ಭಾರತೀಯರು ಇರಾನ್ನಿಂದ ಹೊರಟು ಸುರಕ್ಷಿತವಾಗಿ ಮನೆಗೆ ಮರಳಲು ಸಹಾಯ ಮಾಡಿದೆ.

ನವದೆಹಲಿ, ಮಾರ್ಚ್ 12: ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆ, ಇಂಧನ ಭದ್ರತೆ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಇರಾನಿನ ವಿದೇಶಾಂಗ ಸಚಿವರೊಂದಿಗೆ ಮೂರು ಕರೆಗಳನ್ನು ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನಿನ ಸಚಿವರು ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ಹೋಗುವ ಹಡಗುಗಳ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಭಾರತದ ಧ್ವಜ ಹೊತ್ತ ತೈಲ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಅನುಮತಿ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಈ ವಿಷಯದ ಬಗ್ಗೆ ಹೆಚ್ಚಿನ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ಹೇಳಿದರು. “ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಇರಾನ್ ದೇಶದ ವಿದೇಶಾಂಗ ಸಚಿವರು ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹಡಗುಗಳ ಸುರಕ್ಷತೆ ಮತ್ತು ಭಾರತದ ಇಂಧನ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಅದನ್ನು ಮೀರಿ, ನಾನು ಏನೂ ಹೇಳುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ
ಯುದ್ಧಪೀಡಿತ ಪ್ರದೇಶದಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕುರಿತು ಮಾತನಾಡಿದ ರಣಧೀರ್ ಜೈಸ್ವಾಲ್, ಮನೆಗೆ ಮರಳಲು ಬಯಸುವ ಜನರಿಗೆ ವಿದೇಶಾಂಗ ಸಚಿವಾಲಯ ಸಹಾಯ ಮಾಡುತ್ತಿದೆ. ಇರಾನ್ನಿಂದ ಹಲವಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇರಾನ್ನಲ್ಲಿ ಸುಮಾರು 9,000 ಭಾರತೀಯ ಪ್ರಜೆಗಳಿದ್ದಾರೆ. ಈ 9,000 ಭಾರತೀಯ ಪ್ರಜೆಗಳಲ್ಲಿ ವಿದ್ಯಾರ್ಥಿಗಳು, ನಾವಿಕರು, ವ್ಯಾಪಾರಸ್ಥರು, ವೃತ್ತಿಪರರು ಮತ್ತು ಕೆಲವು ಯಾತ್ರಿಕರು ಸೇರಿದ್ದಾರೆ. ಹಲವಾರು ಭಾರತೀಯ ಪ್ರಜೆಗಳು, ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳು ಆ ದೇಶವನ್ನು ತೊರೆದು ಮನೆಗೆ ತಲುಪಿದ್ದಾರೆ. ಟೆಹ್ರಾನ್ನಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳು ಮತ್ತು ಯಾತ್ರಿಕರು ಸೇರಿದಂತೆ ಹಲವಾರು ಭಾರತೀಯ ಪ್ರಜೆಗಳನ್ನು ನಾವು ದೇಶದ ಇತರ ಸುರಕ್ಷಿತ ಸ್ಥಳಗಳು ಮತ್ತು ನಗರಗಳಿಗೆ ಸ್ಥಳಾಂತರಿಸಿದ್ದೇವೆ. ಅಜೆರ್ಬೈಜಾನ್ ಮತ್ತು ಅರ್ಮೇನಿಯಾಗೆ ಪ್ರಯಾಣಿಸಲು ಮತ್ತು ಅಲ್ಲಿಂದ ಮನೆಗೆ ಮರಳಲು ವಾಣಿಜ್ಯ ವಿಮಾನಗಳನ್ನು ತೆರಳಲು ಬಯಸುವ ಭಾರತೀಯ ಪ್ರಜೆಗಳಿಗೆ ನಾವು ಸಹಾಯ ಮಾಡುತ್ತಿದ್ದೇವೆ. ನಾವು ಅವರಿಗೆ ವೀಸಾಗಳ ವ್ಯವಸ್ಥೆ ಮಾಡುತ್ತಿದ್ದೇವೆ. ಭೂ ಗಡಿ ದಾಟುವಿಕೆಯಲ್ಲೂ ನಾವು ಅವರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
#WATCH | Delhi | MEA spokesperson Randhir Jaiswal says, “External Affairs Minister Dr S Jaishankar and Foreign Minister of Iran have had three conversations in the recent days. The last one discussed issues pertaining to the safety of shipping and India’s energy security. Beyond… pic.twitter.com/xkwCJ1nq1U
— ANI (@ANI) March 12, 2026
“ಇರಾನ್ನಿಂದ ಭೂ ಗಡಿಗಳ ಮೂಲಕ ಹೊರಹೋಗಲು ಬಯಸುವ ಎಲ್ಲಾ ಭಾರತೀಯ ಪ್ರಜೆಗಳಿಗೆ ನಾನು ಸಲಹೆ ನೀಡುವುದೇನೆಂದರೆ ಅವರು ನಮ್ಮ ರಾಯಭಾರ ಕಚೇರಿ ನೀಡಿರುವ ಸಲಹೆಯನ್ನು ಪಾಲಿಸಬೇಕು” ಎಂದು ಅವರು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Thu, 12 March 26
