ಜಂತರ್ ಮಂತರ್ನಲ್ಲಿ ಬಂಗಾಳ ಸಿಎಂ ಮೇಲೆ ದಾಳಿಗೆ ನಡೆದಿತ್ತಾ ಪಿತೂರಿ? ಗರ್ಲ್ಫ್ರೆಂಡ್ಳ ಸೋಷಿಯಲ್ ಮೀಡಿಯಾದಿಂದ ಸಂಚು ಬಯಲು
Terror suspect allegedly plotted disturbances at Jantar Mantar: ಪಶ್ಚಿಮ ಬಂಗಾಳದಲ್ಲಿ ಬಂಧಿತನಾಗಿರುವ ವ್ಯಕ್ತಿಯೊಬ್ಬನ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನೀ ಹ್ಯಾಂಡ್ಲರ್ಗಳ ಅಣತಿಯಂತೆ ನಡೆಯುತ್ತಿದ್ದ ಈ ಶಂಕಿತ ಉಗ್ರನು ಜಂತರ್ ಮಂತರ್ನಲ್ಲಿ ದೊಡ್ಡ ಗಲಭೆ ಸೃಷ್ಟಿಸಲು ಯತ್ನಿಸಿದ್ದನೆನ್ನಲಾಗಿದೆ. ಪೊಲೀಸ್ ವೇಷದಲ್ಲಿ ಜಂತರ್ ಮಂತರ್ ಪ್ರತಿಭಟನೆಗೆ ಹೋಗಿ ಗಲಭೆ ಸೃಷ್ಟಿಸುವ ಸಂಚು ನಡೆದಿತ್ತು.

ಕೋಲ್ಕತಾ, ಆಗಸ್ಟ್ 2: ಪಶ್ಚಿಮ ಬಂಗಾಳದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನೊಬ್ಬ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂದು ಪಶ್ಚಿಮ ಬಂಗಾಳದ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಬಹಿರಂಗಪಡಿಸಿದೆ. ಬಂಧಿತನಾಗಿರುವ ಈ ಶಂಕಿತ ಉಗ್ರನ ಹೆಸರು ಹಮಿಮ್ ಮೊಂಡಲ್ (Hamim Mondal). ಪಶ್ಚಿಮ ಬಂಗಾಳದ ಪೂರಬ ಬರ್ಧಮಾನ್ ಜಿಲ್ಲೆಯಲ್ಲಿ ಎಸ್ಟಿಎಫ್ ಪೊಲೀಸರು ಬಂಧಿಸಿರುವ ಈ ಶಂಕಿತ ಉಗ್ರನು ಪಾಕಿಸ್ತಾನ ಮೂಲದ ‘ಜೈಶ್-ಎ-ಮೊಹಮ್ಮದ್’ (JeM) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವುದು ತಿಳಿದುಬಂದಿದೆ.
ಪೊಲೀಸ್ ಸಮವಸ್ತ್ರದಲ್ಲಿ ಒಳನುಸುಳಲು ಸಂಚು
ಎಸ್ಟಿಎಫ್ ವಿಚಾರಣೆ ವೇಳೆ ತಿಳಿದುಬಂದಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದಲ್ಲಿರುವ ಉಗ್ರರ ಹ್ಯಾಂಡ್ಲರ್ಗಳ ಸೂಚನೆಯಂತೆ, ಹಮಿಮ್ ಮೊಂಡಲ್ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಸಮವಸ್ತ್ರ ಧರಿಸಿ ನುಗ್ಗಿ ಗಲಭೆ ಸೃಷ್ಟಿಸಲು ಯೋಜನೆ ರೂಪಿಸಿದ್ದ ಎಂದು ಎಸ್ಟಿಎಫ್ ಐಜಿ ಗೌರವ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್ಟಿಐ ಅರ್ಜಿ
ಈ ಉಗ್ರ ಸಂಚಿನ ಭಾಗವಾಗಿ ಪ್ರಮುಖ ರಾಜಕೀಯ ವ್ಯಕ್ತಿಗಳು ಹಾಗೂ ಮುಖ್ಯಮಂತ್ರಿಗಳ ಓಡಾಟದ ಮೇಲೂ ನಿಗಾ ಇಡಲು ಆತನಿಗೆ ಸೂಚಿಸಲಾಗಿತ್ತು. ಭದ್ರತೆ ಇಲ್ಲದ ಸ್ಥಳಗಳ ಕುರಿತು ಮಾಹಿತಿ ಕಲೆಹಾಕುವಂತೆ ಹ್ಯಾಂಡ್ಲರ್ಗಳು ಸೂಚಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರೇಮಿಯ ಮೂಲಕ ಹನಿಟ್ರ್ಯಾಪ್ ಜಾಲ
ಹಮಿಮ್ ಮೊಂಡಲ್ನ ಪ್ರೇಯಸಿ ಅರ್ಪಿತಾ ಸರ್ಕಾರ್ ಎಂಬಾಕೆಯನ್ನು ಜಾರ್ಖಂಡ್ನಲ್ಲಿ ಎಸ್ಟಿಎಫ್ ಬಂಧಿಸಿದೆ. ಈ ಜೋಡಿಯು ಪ್ರಮುಖ ರಾಜಕಾರಣಿಗಳ ಮಕ್ಕಳನ್ನು ಹನಿಟ್ರ್ಯಾಪ್ ಮಾಡಿ ಅಪಹರಿಸಲು ಮತ್ತು ಸುಲಿಗೆ ಮಾಡಲು ಸಂಚು ಹೂಡಿತ್ತು. ಅರ್ಪಿತಾಳ ಸಾಮಾಜಿಕ ಜಾಲತಾಣದ ಚಾಟ್ಗಳು ಮತ್ತು ವಾಟ್ಸಾಪ್ ಸಂದೇಶಗಳಿಂದ ಪಾಕಿಸ್ತಾನದ ನಂಟು ಹೊರಬಂದಿದೆ.
ಅಂತರರಾಷ್ಟ್ರೀಯ ಸಿಮ್ ಕಾರ್ಡ್ಗಳ ವಶ
ಉಗ್ರರೊಂದಿಗೆ ಎನ್ಕ್ರಿಪ್ಟ್ ಮಾಡಲಾದ ಸಂದೇಶಗಳ ಮೂಲಕ ಸಂಪರ್ಕ ಸಾಧಿಸಲು ಬ್ರಿಟನ್ (UK) ಮತ್ತು ಮೆಕ್ಸಿಕೋ ದೇಶಗಳಿಗೆ ಸೇರಿದ ಅಂತರರಾಷ್ಟ್ರೀಯ ಸಿಮ್ ಕಾರ್ಡ್ಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ; ಕಾಂಗ್ರೆಸ್ ಎಂಪಿ ಮಾಣಿಕಂ ಟ್ಯಾಗೋರ್
‘ರಾಣಾ’, ‘ಉಜೈರ್’, ‘ಅಬೀದ್ ಜಾಟ್ 333’ ಮತ್ತು ‘ಹಮಾದ್’ ಎಂಬ ಪಾಕಿಸ್ತಾನಿ ಹ್ಯಾಂಡ್ಲರ್ಗಳು ಶಹಜಾದ್ ಭಟ್ಟಿ ಗ್ಯಾಂಗ್ ಮೂಲಕ ಈ ಭಯೋತ್ಪಾದನಾ ಜಾಲ, ಮಾದಕವಸ್ತು ಕಳ್ಳಸಾಗಣೆ ಮತ್ತು ಉಗ್ರರ ನೇಮಕಾತಿಯಲ್ಲಿ ಸಕ್ರಿಯವಾಗಿದ್ದಾರೆ.
ಪ್ರಸ್ತುತ ಬಂಧಿತ ಶಂಕಿತನನ್ನು 14 ದಿನಗಳ ಕಾಲ ಎಸ್ಟಿಎಫ್ ಕಸ್ಟಡಿಗೆ ಪಡೆಯಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳು ಮತ್ತು ಅಂತರರಾಷ್ಟ್ರೀಯ ನಂಟಿನ ಕುರಿತು ತೀವ್ರ ತನಿಖೆ ಮುಂದುವರಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Sun, 2 August 26




