ಪೆಟ್ರೋಲ್, ಎಲ್ಪಿಜಿ ಕೊರತೆ ಇಲ್ಲ: ಸಂಸತ್ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ
No shortage of Petrol, diesel, LPG in India, says minister Hardeep Singh Puri: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಭಾರತದಲ್ಲಿ ಇಂಧನ ಕೊರತೆ ಉದ್ಭವವಾಗುವ ಆತಂಕ ಇದೆ. ಆದರೆ, ಯಾವುದೇ ಚಿಂತೆಪಡಬೇಕಾದ ಸಂದರ್ಭ ಇಲ್ಲ ಎಂದು ಸರ್ಕಾರ ಪುನರುಚ್ಚರಿಸಿದೆ. ಸಂಸತ್ನಲ್ಲಿ ಮಾತನಾಡಿದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶದಲ್ಲಿ ಎಲ್ಪಿಜಿ, ಪೆಟ್ರೋಲ್ ಇತ್ಯಾದಿ ಇಂಧನ ದಾಸ್ತಾನು ಸಾಕಷ್ಟಿದೆ ಎಂದಿದ್ದಾರೆ.

ನವದೆಹಲಿ, ಮಾರ್ಚ್ 12: ದೇಶದಲ್ಲಿ ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ ಅಥವಾ ಎಲ್ಪಿಜಿ ಲಭ್ಯತೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಇಂಧನ ಲಭ್ಯತೆ ಸಾಕಷ್ಟಿದೆ. ಇಂಧನ ಸರಬರಾಜು ಸರಪಳಿ ಸರಾಗವಾಗಿ ಇದೆ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಂಸತ್ನಲ್ಲಿ ಗುರುವಾರ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri), ಭಾರತದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದ್ದು ಯಾವುದೇ ರೀತಿಯಲ್ಲಿ ಆತಂಕಪಡಬೇಕಾದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.
ಪೆಟ್ರೋಲ್ ಆಗಲೀ, ಡೀಸಲ್ ಆಗಲೀ, ಸೀಮೆ ಎಣ್ಣೆಯಾಗಲೀ, ಎಲ್ಪಿಜಿಯಾಗಲೀ ಕೊರತೆ ಎದುರಿಸುತ್ತಿಲ್ಲ. ಅವುಗಳ ಲಭ್ಯತೆ ಬಹಳ ಖಚಿತ ಇದೆ. ಅವುಗಳ ಪೂರೈಕೆ ವ್ಯವಸ್ಥೆಯೂ ಸರಾಗವಾಗಿ ನಡೆಯುತ್ತಿದೆ. ದೇಶದ ಒಟ್ಟಾರೆ ಇಂಧನ ಪರಿಸ್ಥಿತಿ ಉತ್ತಮವಾಗಿದೆ. ಬಳಕೆಗೆ ಬೇಕಾಗುವಷ್ಟು ದಾಸ್ತಾನು ಇದೆ ಎಂದು ಪೆಟ್ರೋಲಿಯಂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ದಾಟಿ ಮುಂಬೈ ಬಂದರು ತಲುಪಿದ ಭಾರತದ ಮೊದಲ ತೈಲ ಟ್ಯಾಂಕರ್
ದೇಶದಲ್ಲಿ ಈಗ ಎಲ್ಪಿಜಿ ಲಭ್ಯತೆಯೇ ದೊಡ್ಡ ಚಿಂತೆಯ ವಿಷಯವಾಗಿದೆ. ಈ ವಿಚಾರದ ಬಗ್ಗೆ ಹರ್ದೀಪ್ ಸಿಂಗ್ ಪುರಿ ಆಶಾದಾಯಕವಾಗಿ ಮಾತನಾಡಿದ್ದಾರೆ. ದೇಶೀಯ ಎಲ್ಪಿಜಿ ಪೂರೈಕೆ ಪೂರ್ಣ ಸಂರಕ್ಷಿತವಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಇಂಧನ ಮಾರುಕಟ್ಟೆಗಳ ವ್ಯತ್ಯಯಗಳ ಪರಿಣಾಮಗಳು ಎಲ್ಪಿಜಿ ಪೂರೈಕೆ ಮೇಲೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಭಾರತದ 60ರಷ್ಟು ಎಲ್ಪಿಜಿ ಪೂರೈಕೆಯನ್ನು ಗಲ್ಫ್ ದೇಶಗಳಿಂದ ಪಡೆಯಲಾಗುತ್ತಿದೆ. ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ ತಡೆಯುಂಟಾಗಿರುವುದರಿಂದ ಗಲ್ಫ್ನಿಂದ ಎಲ್ಪಿಜಿ ಪೂರೈಕೆ ಸ್ಥಗಿತಗೊಂಡಿದೆ. ಇದನ್ನು ಸರಿದೂಗಿಸಲು ಭಾರತ ಸರ್ಕಾರ ಬೇರೆ ಬೇರೆ ಪ್ರದೇಶಗಳಿಂದ ತೈಲ, ಅನಿಲಗಳ ಪೂರೈಕೆ ಪಡೆಯುತ್ತಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ
ಇದೇ ವೇಳೆ, ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಸಾಗಿಸಬೇಕಾಗಿರುವ ತೈಲ ಹಡಗುಗಳಿಗೆ ಇರಾನ್ನ ಅನುಮತಿ ಸಿಕ್ಕಿದೆ. ಎರಡು ಹಡಗುಗಳು ಭಾರತದತ್ತ ಹೊರಟಿವೆ ಎನ್ನುವಂತಹ ಸುದ್ದಿ ಬಂದಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ನ ಸಚಿವರೊಂದಿಗೆ ಎಸ್ ಜೈಶಂಕರ್ ಮಾತುಕತೆಗಳನ್ನು ನಡೆಸಿದ್ದಾರೆ. ಈಗಲೇ ಆ ಸಂಬಂಧ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
