ಗಡ್​ಚಿರೋಲಿಯಲ್ಲಿ ಎನ್​ಕೌಂಟರ್​​; 26 ನಕ್ಸಲರ ಹತ್ಯೆ, ನಾಲ್ವರು ಪೊಲೀಸ್​ ಸಿಬ್ಬಂದಿಗೆ ಗಾಯ

ಮರ್ಡಿಂಟೋಲಾ ಅರಣ್ಯಪ್ರದೇಶದ ಕೊರ್ಚಿ ಎಂಬಲ್ಲಿ ಎಸ್​ಪಿ ಸೌಮ್ಯಾ ಮುಂಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.  ಈ ಘಟನೆಯಲ್ಲಿ ನಾಲ್ವರು ಪೊಲೀಸ್​ ಅಧಿಕಾರಿಗಳೂ ಕೂಡ ಗಾಯಗೊಂಡಿದ್ದಾರೆ.

ಗಡ್​ಚಿರೋಲಿಯಲ್ಲಿ ಎನ್​ಕೌಂಟರ್​​; 26 ನಕ್ಸಲರ ಹತ್ಯೆ, ನಾಲ್ವರು ಪೊಲೀಸ್​ ಸಿಬ್ಬಂದಿಗೆ ಗಾಯ
ಸಾಂದರ್ಭಿಕ ಚಿತ್ರ
Edited By:

Updated on: Nov 14, 2021 | 1:04 PM

ಮುಂಬೈ: ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ನಿನ್ನೆ ನಡೆದ ಎನ್​​ಕೌಂಟರ್​​ನಲ್ಲಿ ನಕ್ಸಲ್​ ಪ್ರಮುಖ ನಾಯಕ ಮಿಲಿಂದ್​ ಮಿಲಿಂದ್ ತೇಲ್ತುಂಬ್ಡೆ ಸೇರಿ ಒಟ್ಟು 26 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ ಎಂದು ರಾಜ್ಯ ಗೃಹ ಸಚಿವ ದಿಲೀಪ್​ ವಾಲ್ಸೆ ಪಾಟೀಲ್​ ಇಂದು ತಿಳಿಸಿದ್ದಾರೆ. ಅದರಲ್ಲೂ ಈ ಮಿಲಿಂದ್ ತೇಲ್ತುಂಬೆ ಭೀಮಾ ಕೊರೆಗಾಂವ್​ ಪ್ರಕರಣದಲ್ಲೂ ಆರೋಪಿಯಾಗಿದ್ದ.  ಎನ್​ಕೌಂಟರ್​​ನಲ್ಲಿ ಸತ್ತ 26 ನಕ್ಸಲರಲ್ಲಿ 20 ಪುರುಷರು ಮತ್ತು 6 ಮಹಿಳೆಯರು ಸೇರಿದ್ದಾರೆ ಎಂದು ಗಡ್​ಚಿರೋಲಿ ಪೊಲೀಸರು ತಿಳಿಸಿದ್ದಾರೆ.  

ಇದೀಗ ಮೃತಪಟ್ಟ ನಕ್ಸಲರಲ್ಲಿ ಪ್ರಮುಖ ಮುಖಂಡರೇ ಸೇರಿದ್ದಾರೆ. ಅದರಲ್ಲಿ ಮಹೇಶ್​ ಶಿವಾಜಿ ರೌಜಿ ಗೋಟಾ ಎಂಬುವನ ತಲೆಗೆ 16 ಲಕ್ಷ ಬಹುಮಾನ ಕಟ್ಟಲಾಗಿತ್ತು. ಹಾಗೇ, ಭಗತ್​ಸಿಂಗ್​, ಪ್ರದೀಪ್​, ತಿಲಕ್​ ಮಂಕುರ್​ ಜಾಡೆ ಎಂಬುವರನ್ನು ಹುಡುಕಲು ಸಹಾಯ ಮಾಡಿದವರಿಗೆ 6 ಲಕ್ಷ ಬಹುಮಾನ ಇತ್ತು. ಇನ್ನು ಲೋಕೇಶ್​ ಮಂಗು ಪೋದ್ಯಮ್​ ಎಂಬುವನ ತಲೆಗೆ 20 ಲಕ್ಷ ರೂ. ಮತ್ತು ಸನ್ನು ಕೊವಾಚಿ ಎಂಬುವನ ಪತ್ತೆಗೆ 8 ಲಕ್ಷ ರೂ.ಬಹುಮಾನ ಘೋಷಣೆಯಾಗಿತ್ತು. ಈಗ ಇವರೆಲ್ಲರೂ ಎನ್​ಕೌಂಟರ್​​ನಲ್ಲಿ ಸತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಲೇ ಇದೆ. ಇನ್ನಷ್ಟು ನಕ್ಸಲರು ಅಡಗಿರುವ ಸಾಧ್ಯತೆ ಇದೆ. ಈಗಾಗಲೇ ಮೃತಪಟ್ಟವರ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ, ಇನ್ನೂ ಕೆಲವರ ಗುರುತು ಸಿಕ್ಕಿಲ್ಲ.

ಇಂದು ಮುಂಜಾನೆ ಮರ್ಡಿಂಟೋಲಾ ಅರಣ್ಯಪ್ರದೇಶದ ಕೊರ್ಚಿ ಎಂಬಲ್ಲಿ ಎಸ್​ಪಿ ಸೌಮ್ಯಾ ಮುಂಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.  ಈ ಘಟನೆಯಲ್ಲಿ ನಾಲ್ವರು ಪೊಲೀಸ್​ ಅಧಿಕಾರಿಗಳೂ ಕೂಡ ಗಾಯಗೊಂಡಿದ್ದಾರೆ. ಅವರನ್ನು ನಾಗ್ಪುರ ಆಸ್ಪತ್ರೆಗೆ, ಹೆಲಿಕಾಪ್ಟರ್​ ಮೂಲಕ ಸಾಗಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ಇದನ್ನೂ ಓದಿ: Viral Video: ವಧು ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿಯಾಗೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ವೈರಲ್