ಕಾಂಗ್ರೆಸ್ ತೊರೆದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ ಎನ್​ಸಿಪಿ ಪಕ್ಷಕ್ಕೆ ಸೇರ್ಪಡೆ

Kerala Assembly Elections 2021: ಕಾಂಗ್ರೆಸ್ ಪಕ್ಷ ತೊರೆದು ಎನ್​ಸಿಪಿ ಪಕ್ಷ ಸೇರಿರುವ ಪಿ.ಸಿ ಚಾಕೊ ಎಲ್​​ಡಿಎಫ್​ನ ಅಂಗವಾಗಿ ಕೆಲಸ ಮಾಡಲಿದ್ದೇನೆ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಜತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ತೊರೆದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ ಎನ್​ಸಿಪಿ ಪಕ್ಷಕ್ಕೆ ಸೇರ್ಪಡೆ
ಸುದ್ದಿಗೋಷ್ಠಿಯಲ್ಲಿ ಪಿ.ಸಿ. ಚಾಕೊ- ಸೀತಾರಾಂ ಯೆಚೂರಿ
ರಶ್ಮಿ ಕಲ್ಲಕಟ್ಟ

Updated on: Mar 16, 2021 | 7:27 PM

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ ಎನ್​ಸಿಪಿಗೆ ಸೇರಿದ್ದಾರೆ. ಕಾಂಗ್ರೆಸ್ ನಂತೆಯೇ ಇರುವ ಎನ್​ಸಿಪಿ ಪಕ್ಷಕ್ಕೆ ನಾನು ಸೇರುತ್ತೇನೆ. ಬಿಜೆಪಿ, ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಲು ನನಗೆ ಇಷ್ಟವಿಲ್ಲ ಎಂದು ಚಾಕೊ ಹೇಳಿದ್ದಾರೆ.  ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಳು ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷವೆಂಬುದು ಇಲ್ಲ. ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ ಅವರ ನೇತೃತ್ವದಲ್ಲಿರುವ ಗುಂಪುಗಳಷ್ಟೇ ಅಲ್ಲಿರುವುದು ಎಂದು ಚಾಕೊ ಹೇಳಿದ್ದರು. ಕೆ.ಕರಣಾಕರನ್ ಅವರ ಕಾಲದಲ್ಲಿಯೂ ಗುಂಪುಗಳಿದ್ದರೂ ಈಗಿನಂತೆ ಇರಲಿಲ್ಲ ಎಂದಿದ್ದಾರೆ ಚಾಕೊ.

ಗುಂಪು ಆಧರಿಸಿ ಸೀಟು ಹಂಚಿಕೆ ವಿಷಯದಲ್ಲಿ ತನಗೆ ಅಸಮಾಧಾನವಿದೆ ಎಂದು ಬಹಿರಂಗವಾಗಿಯೇ ಪಿ.ಸಿ.ಚಾಕೊ ಹೇಳಿಕೊಂಡಿದ್ದರು. ಮಾರ್ಚ್  10ರಂದು ಕಾಂಗ್ರೆಸ್  ಪಕ್ಷಕ್ಕೆ ರಾಜೀನಾಮೆ ಕೊಟ್ಟ ನಂತರ ಮಾತನಾಡಿದ್ದ ಅವರು, ಕೇರಳದಲ್ಲಿ ನಿರ್ಣಾಯಕವಾದ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಜನರು ಬಯಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನೇತಾರರ ನಡುವೆ ಗುಂಪುಗಾರಿಕೆ ನಡೆಯುತ್ತಿದೆ. ಈ ಗುಂಪುಗಾರಿಕೆ ನಿಲ್ಲಬೇಕು ಎಂದು ನಾನು ಹೈಕಮಾಂಡ್ ಜತೆ ವಾಗ್ವಾದ ಮಾಡಿದ್ದೇನೆ. ಆದರೆ ಹೈಕಮಾಂಡ್ ಕೂಡಾ ಈ ಎರಡು ಗುಂಪುಗಳು ಮುಂದಿರಿಸಿದ ಪ್ರಸ್ತಾವಗಳನ್ನೇ ಸ್ವೀಕರಿಸಿದೆ ಎಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಉಲ್ಲೇಖಿಸದೆಯೇ  ಆರೋಪಿಸಿದ್ದರು.

ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಮತ್ತು ಅವರಿಗೆ ಬೆಂಬಲ ನೀಡುವ ಗುಂಪಿನ ನಾಯಕರ ಇಷ್ಟಾನುಸಾರ ಸೀಟು ಹಂಚಿಕೆ ನಡೆದಿದೆ. ಈ ಎರಡೂ ಗುಂಪುಗಳನ್ನು ಜತೆಯಾಗಿ ಕರೆದೊಯ್ಯುವ ಕೆಲಸವನ್ನಷ್ಟೇ ಕೆಪಿಸಿಸಿ ಮತ್ತು ಹೈಕಮಾಂಡ್  ಮಾಡುತ್ತಿರುವುದು. ರಾಷ್ಟ್ರೀಯ ಮಟ್ಟದಲ್ಲಿಯೂ ಕಾಂಗ್ರೆಸ್ ಬೆಳೆಯುವುದಿಲ್ಲ ಎಂದು ಪಿ.ಸಿ.ಚಾಕೊ  ಹೇಳಿದ್ದಾರೆ.  74ರ ಹರೆಯದ ಚಾಕೊ ಕೇರಳದ ತ್ರಿಶ್ಶೂರ್ ಚುನಾವಣಾ ಕ್ಷೇತ್ರದ ಮಾಜಿ ಸಂಸದರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಇವರು ಕಾರ್ಯ ನಿರ್ವಹಿಸಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಹೊಡೆತ
ಚಾಕೊ ಅವರು ಪಕ್ಷ ತೊರೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಿದೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯೇ ಕೇರಳದಲ್ಲಿ ಸ್ಟಾರ್ ಪ್ರಚಾರಕರಾಗಿರುವಾಗ ಕಾಂಗ್ರೆಸ್ ಪಕ್ಷದಲ್ಲಿನ ಹಿರಿಯ ನಾಯಕ ಹೊರನಡೆದಿರುವುದು ಪಕ್ಷಕ್ಕೆ ಮುಜುಗರವುಂಟು ಮಾಡಿದೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ನಾಯಕರ ಪೈಕಿ ಚಾಕೊ ಕೂಡಾ ಒಬ್ಬರಾಗಿದ್ದಾರೆ.

ಯೆಚೂರಿ ಜತೆ ಸುದ್ದಿಗೋಷ್ಠಿ
ಕಾಂಗ್ರೆಸ್ ಪಕ್ಷ ತೊರೆದು ಎನ್​ಸಿಪಿ ಪಕ್ಷ ಸೇರಿರುವ ಚಾಕೊ ಎಲ್​​ಡಿಎಫ್​ನ ಅಂಗವಾಗಿ ಕೆಲಸ ಮಾಡಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಜತೆ ಮಾತುಕತೆ ನಡೆಸಿದ ನಂತರ ಇಬ್ಬರೂ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮಂಗಳವಾರ ಎನ್​ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರತ್ ಪವಾರ್ ಜತೆ ಮಾತುಕತೆ ನಡೆಸಿದ್ದ ಚಾಕೊ ಸಂಜೆ ಯೆಚೂರಿ ಅವರನ್ನು ಭೇಟಿ ಮಾಡಿದ್ದರು.

ಚೆಂಙನ್ನೂರ್​ನಲ್ಲಿ ಬಿಜೆಪಿ ಮತ್ತು ಸಿಪಿಎಂ ಡೀಲ್ ಮಾಡಿಕೊಂಡಿದೆ ಎಂದು ಆರ್ ಎಸ್ಎಸ್ ನಾಯಕ ಆರ್. ಬಾಲಶಂಕರ್ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಯೆಚೂರಿ ಅವರಲ್ಲಿ ಕೇಳಿದಾಗ,ಬಿಜೆಪಿ ಜತೆ ಯಾರು ಡೀಲ್ ಮಾಡುತ್ತಿದ್ದಾರೆ , ಯಾರು ಬಿಜೆಪಿಗೆ ಹೋಗುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಗೆ ಸೇರಿದ ಕಾಂಗ್ರೆಸ್ ನಾಯಕರನ ಬಗ್ಗೆ ಎಣಿಕೆ ಮಾಡಿ ನೋಡಿ. ಇಲ್ಲಿ ಏನು ನಡೆಯುತ್ತಿದೆ ಎಂಬುದು ಜನರಿಗೆ ತಿಳಿದಿದೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್ ಪಕ್ಷ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ಪಕ್ಷ ತೊರೆದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us