ಭಿವಾನಿಯಲ್ಲಿ ಮುಸ್ಲಿಂ ಯುವಕರ ಹತ್ಯೆ; ಅಶೋಕ್ ಗೆಹ್ಲೋಟ್ ವಿರುದ್ಧ ಓವೈಸಿ ಟೀಕಾ ಪ್ರಹಾರ

ಜುನೈದ್ ಮತ್ತು ನಾಸಿರ್‌ಗೆ ಸಂಬಂಧಿಸಿದ ನಾಪತ್ತೆ ದೂರಿನ ಕುರಿತು ರಾಜಸ್ಥಾನ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದರೆ, ಅವರು (ಅಪಹರಣಕಾರರು) ರಾಜಸ್ಥಾನದ ಗಡಿಯನ್ನು ದಾಟಲು ಸಾಧ್ಯವಾಗುತ್ತಿರಲಿಲ್ಲ, ಎಂದು ಒವೈಸಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಭಿವಾನಿಯಲ್ಲಿ ಮುಸ್ಲಿಂ ಯುವಕರ ಹತ್ಯೆ;  ಅಶೋಕ್ ಗೆಹ್ಲೋಟ್ ವಿರುದ್ಧ ಓವೈಸಿ ಟೀಕಾ ಪ್ರಹಾರ
ಅಸಾದುದ್ದೀನ್ ಓವೈಸಿ

Updated on: Feb 21, 2023 | 7:11 PM

ರಾಜಸ್ಥಾನದ(Rajasthan) ಭರತ್‌ಪುರದಿಂದ ಅಪಹರಿಸಲಾಗಿದೆ ಎಂದು ಹೇಳಲಾದ ನಾಸಿರ್ ಮತ್ತು ಜುನೈದ್ ಎಂಬವರ ಮೃತದೇಹ ಭಿವಾನಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಮಂಗಳವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.”ಬ್ರೇಕಿಂಗ್: ಅಶೋಕ್ ಗೆಹ್ಲೋಟ್, ಜುನೈದ್ ಮತ್ತು ನಾಸಿರ್ ಅವರ ಕುಟುಂಬವನ್ನು ಭೇಟಿ ಮಾಡಿದ ವಿಶೇಷ ಫೋಟೊ ಎಂದು ಖಾಲಿ ಚಿತ್ರವನ್ನು ಓವೈಸಿ ಟ್ಲೀಟ್ ಮಾಡಿದ್ದಾರೆ.

ಆರೋಪಿಗಳು ರಾಜ್ಯದಿಂದ ಪರಾರಿಯಾಗಲು ಅವಕಾಶ ಮಾಡಿಕೊಟ್ಟು, ಇಬ್ಬರು ವ್ಯಕ್ತಿಗಳ ಕುಟುಂಬದವರು ಸಲ್ಲಿಸಿದ ನಾಪತ್ತೆ ದೂರಿನ ಕುರಿತು ರಾಜಸ್ಥಾನ ಸರ್ಕಾರವು ಕ್ರಮ ಕೈಗೊಳ್ಳಲು ವಿಳಂಬ ಮಾಡಿದೆ ಎಂದು ಓವೈಸಿ ಆರೋಪಿಸಿದ್ದರು. ಜುನೈದ್ ಮತ್ತು ನಾಸಿರ್‌ಗೆ ಸಂಬಂಧಿಸಿದ ನಾಪತ್ತೆ ದೂರಿನ ಕುರಿತು ರಾಜಸ್ಥಾನ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದರೆ, ಅವರು (ಅಪಹರಣಕಾರರು) ರಾಜಸ್ಥಾನದ ಗಡಿಯನ್ನು ದಾಟಲು ಸಾಧ್ಯವಾಗುತ್ತಿರಲಿಲ್ಲ, ಎಂದು ಒವೈಸಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.


ನಾಸಿರ್ ಮತ್ತು ಜುನೈದ್​​ನ್ನು ಕಳೆದ ಬುಧವಾರ ರಾಜಸ್ಥಾನದ ಭರತ್‌ಪುರದಿಂದ ಅಪಹರಿಸಲಾಗಿತ್ತು. ಮರುದಿನ ಬೆಳಿಗ್ಗೆ ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ಕಾರಿನಲ್ಲಿ ಅವರ ಶವಗಳು ಪತ್ತೆಯಾಗಿವೆ. ಮೃತರ ಕುಟುಂಬಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ, ಅಪಹರಣಕಾರರು ವಿಶ್ವ ಹಿಂದೂ ಪರಿಷತ್‌ನ ಯುವ ಘಟಕವಾದ ಬಜರಂಗದಳದವರು ಎಂದು ಹೇಳಿದ್ದಾರೆ.

ಇದನ್ನೂ ಓದಿ: 26/11 ಮುಂಬೈ ದಾಳಿಯ ಉಗ್ರರು ನಿಮ್ಮ ದೇಶದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ; ಪಾಕ್ ವೇದಿಕೆಯಲ್ಲಿ ಜಾವೇದ್ ಅಖ್ತರ್ ಖಡಕ್ ಮಾತು

ನುಹ್ ಜಿಲ್ಲೆಯ ಬಂಧಿತ ಆರೋಪಿ ರಿಂಕು ಸೈನಿ ಅವರ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದ್ದು ಏನೆಂದರೆ  ಹತ್ಯೆಯ ಹಿಂದಿನ ಕಾರಣ  ಗೋರಕ್ಷಣೆ ಆಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ, ನಾಸಿರ್ ಮತ್ತು ಜುನೈದ್ ಅವರ ಕುಟುಂಬಗಳು ನ್ಯಾಯಕ್ಕಾಗಿ ಒತ್ತಾಯಿಸಿ ಭರತ್‌ಪುರದಲ್ಲಿ ಧರಣಿ ಪ್ರತಿಭಟನೆ ನಡೆಸಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತರನ್ನು ಹೊರತುಪಡಿಸಿ ಎಂಟು ಮಂದಿಯನ್ನು ರಾಜಸ್ಥಾನ ಪೊಲೀಸರು ಮಂಗಳವಾರ ಗುರುತಿಸಿದ್ದಾರೆ. ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಮಾತನಾಡಿ, ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿರುವ ಇತರ ಜನರ ಮೇಲೆ ಅನುಮಾನವಿದೆ. ಉಳಿದ ಎಂಟು ಆರೋಪಿಗಳನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ