ಕರಾಚಿ: ಶಾರ್ಜಾದಿಂದ ಲಕ್ನೋಗೆ ಬರುತ್ತಿದ್ದ ಇಂಡಿಗೋ ಸಂಸ್ಥೆಗೆ ಸೇರಿದ 6E1412 ಸಂಖ್ಯೆಯ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣ ಎಚ್ಚೆತ್ತ ಸಿಬ್ಬಂದಿ ಕರಾಚಿಯಲ್ಲಿ ವಿಮಾನವನ್ನು ತುರ್ತಾಗಿ ಇಳಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಎದೆನೋವಿಗೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಿಬ್ಬಂದಿ, ನಮ್ಮ ಎಲ್ಲಾ ಪ್ರಯತ್ನದ ನಂತರವೂ ಆ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. ಭಾರತಕ್ಕೆ ಹೊರಟಿದ್ದ ವಿಮಾನ ಈ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಎರಡು ಗಂಟೆ ಕಾಲ ಉಳಿಯಬೇಕಾಗಿ ಬಂದು, ನಂತರ ಮತ್ತೆ ಭಾರತದತ್ತ ಬಂದಿದೆ.
ದುಬೈನ ಶಾರ್ಜಾದಿಂದ ಹೊರಟಿದ್ದ ಇಂಡಿಗೋ ವಿಮಾನ ಇಂದು ಮುಂಜಾನೆ ಹೊತ್ತಿಗೆ ಪಾಕಿಸ್ತಾನ ತಲುಪಿತ್ತು. ಆ ವೇಳೆಯಲ್ಲಿ ಪ್ರಯಾಣಿಕರೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತು. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡ ಪೈಲಟ್ ಮತ್ತು ವಿಮಾನ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು, ವಿಮಾನ ತುರ್ತು ಭೂಸ್ಪರ್ಶಕ್ಕಾಗಿ ಪಾಕಿಸ್ತಾನ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮತಿ ಕೋರಿದ್ದಾರೆ. ಒಪ್ಪಿಗೆ ಸಿಕ್ಕ ಕೂಡಲೇ ಕರಾಚಿಯಲ್ಲಿ ಲ್ಯಾಂಡ್ ಮಾಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಕರಾಚಿ ಏರ್ಪೋರ್ಟ್ ವೈದ್ಯಕೀಯ ತಂಡ ಪ್ರಯಾಣಿಕಿಗೆ ಚಿಕಿತ್ಸೆ ನೀಡಲು ಮುಂದಾದರೂ, ಅಷ್ಟರಲ್ಲಾಗಲೇ ಜೀವ ಹೋಗಿತ್ತು ಎನ್ನಲಾಗಿದೆ. ಪ್ರಯಾಣಿಕನ ಸಾವಿಗೆ ಇಂಡಿಗೋ ಏರ್ಲೈನ್ ಸಂತಾಪ ವ್ಯಕ್ತಪಡಿಸಿದೆ.
ಇತ್ತೀಚೆಗೆ ಕೋಲ್ಕತ್ತದಿಂದ ಅಜೆರ್ಬೈಜಾನ್ ರಾಜಧಾನಿ ಬಾಕುಗೆ ಹೊರಟಿದ್ದ ಏರ್ ಆ್ಯಂಬುಲೆನ್ಸ್ವೊಂದು ತಾಂತ್ರಿಕ ದೋಷದಿಂದ ಇಸ್ಲಮಾಬಾದ್ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
ಇದನ್ನೂ ಓದಿ: ಹಾಸನದಲ್ಲಿ ಹಾರಲಿವೆ ಲೋಹದ ಹಕ್ಕಿಗಳು: ವಿಮಾನ ನಿಲ್ದಾಣ ಕಾಮಗಾರಿಗೆ ಸ್ಥಳ ಪರಿಶೀಲನೆ
Published On - 12:36 pm, Tue, 2 March 21