Kisan Long March: 5ನೇ ದಿನಕ್ಕೆ ಕಾಲಿಟ್ಟ ರೈತರ ಪಾದಯಾತ್ರೆ; ಕೃಷಿಕರ, ಬುಡಕಟ್ಟು ಜನಾಂಗದವರ ಬೇಡಿಕೆಗಳೇನು?

ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಈರುಳ್ಳಿ ಬೆಳೆಗಾರರಿಗೆ ಕ್ವಿಂಟಲ್‌ಗೆ ₹ 600 ತಕ್ಷಣದ ಆರ್ಥಿಕ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ. ಅನೇಕ ರೈತರು ಬುಡಕಟ್ಟು ಸಮುದಾಯದವರಾಗಿದ್ದು, ಭೂಮಿಯ ಹಕ್ಕುಗಳಿಗೆ ಆಗ್ರಹಿಸುತ್ತಿದ್ದಾರೆ.

Kisan Long March: 5ನೇ ದಿನಕ್ಕೆ ಕಾಲಿಟ್ಟ ರೈತರ ಪಾದಯಾತ್ರೆ; ಕೃಷಿಕರ, ಬುಡಕಟ್ಟು ಜನಾಂಗದವರ ಬೇಡಿಕೆಗಳೇನು?
ಕಿಸಾನ್ ಲಾಂಗ್ ಮಾರ್ಚ್
ರಶ್ಮಿ ಕಲ್ಲಕಟ್ಟ

Updated on: Mar 16, 2023 | 4:00 PM

ಒಡೆದ ಹಿಮ್ಮಡಿ, ಪಾದಗಳು ಊದಿಕೊಂಡಿದ್ದರೂ ನಾಸಿಕ್‌ನಿಂದ ಮುಂಬೈಗೆ (Nashik to Mumbai) ಪಾದಯಾತ್ರೆ (Kisan Long March) ನಡೆಸುತ್ತಿರುವ ರೈತರು, ಈರುಳ್ಳಿ ಬೆಳೆಗಾರರಿಗೆ ಪರಿಹಾರಕ್ಕಾಗಿ ಮತ್ತು ಇತರ ಹಲವಾರು ಬೇಡಿಕೆಗಳಿಗಾಗಿ ತಮ್ಮ ಆಂದೋಲನವನ್ನು ಮುಂದುವರಿಸಿದ್ದಾರೆ.ರೈತರ (Farmers Protest) 200 ಕಿಲೋಮೀಟರ್ ಪಾದಯಾತ್ರೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಸುದೀರ್ಘ, ಪ್ರಯಾಸಕರ ಪ್ರಯಾಣದ ಸ್ವಲ್ಪ ವಿರಾಮದ ಸಮಯದಲ್ಲಿ ರೈತರೊಂದಿಗೆ ಎನ್​​ಡಿಟಿವಿ ಮಾತನಾಡಿದೆ. ಹಿಮ್ಮಡಿ ಬಿರುಕು ಬಿಟ್ಟಿತ್ತು, ಕಾಲಿನ ಬೆರಳುಗಳಲ್ಲಿ ನೋವು, ಕಾಲಿನಡಿಯ ಚರ್ಮ ಕಿತ್ತು ಬಂದಿತ್ತು. ಕೆಲವರು ತಮ್ಮ ಚಪ್ಪಲಿಗೆ ಬಟ್ಟೆಯನ್ನು ಸುತ್ತಿಕೊಂಡಿದ್ದರು.ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೀರಾ ಎಂದು ಹಿರಿಯ ಮಹಿಳೆಯೊಬ್ಬರು ಕೇಳಿದಾಗ, “ಇಲ್ಲ, ನಮ್ಮ ಬೇಡಿಕೆಗಳಿಗಾಗಿ ನಾನು ನಡೆಯುತ್ತಲೇ ಇರುತ್ತೇನೆ” ಎಂದು ಅವರು ಹೇಳಿದರು.

ಅಸ್ವಸ್ಥರಾದವರಿಗಾಗಿ ಆಂಬ್ಯುಲೆನ್ಸ್‌ಗಳನ್ನು ಕರೆಯಲಾಯಿತು. ಆಂಬ್ಯುಲೆನ್ಸ್‌ನಲ್ಲಿ ಕುಳಿತಿದ್ದ ರೈತರೊಬ್ಬರು ಕಣ್ಣೀರಾದರು. ನನಗೆ ಹುಷಾರಿಲ್ಲ, ಚಪ್ಪಲಿ ಹರಿದಿದ್ದರಿಂದ ಪಾದ ನೋಯುತ್ತಿದೆ. ನನ್ನ ಬಳಿ ಹಣವಿದೆ ಆದರೆ ಚಪ್ಪಲಿ ಖರೀದಿಸಲು ಯಾವುದೇ ಅಂಗಡಿ ಸಿಗಲಿಲ್ಲ ಎಂದು ಅವರು ಹೇಳಿದರು. ಕೆಲವರು ಸುಸ್ತಾಗಿ ಬೀಳುತ್ತಿದ್ದಾರೆ,ಕೆಲವರಿಗೆ ತಲೆ ಸುತ್ತುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಪಾದಯಾತ್ರೆಯನ್ನು ಸಿಪಿಎಂ ಆಯೋಜಿಸಿದ್ದು ರೈತರು, ಅಸಂಘಟಿತ ವಲಯದ ಅನೇಕ ಕಾರ್ಮಿಕರು ಮತ್ತು ಬುಡಕಟ್ಟು ಸಮುದಾಯಗಳ ಸದಸ್ಯರು ಇದರಲ್ಲಿದ್ದಾರೆ.

ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಈರುಳ್ಳಿ ಬೆಳೆಗಾರರಿಗೆ ಕ್ವಿಂಟಲ್‌ಗೆ ₹ 600 ತಕ್ಷಣದ ಆರ್ಥಿಕ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ. ಅನೇಕ ರೈತರು ಬುಡಕಟ್ಟು ಸಮುದಾಯದವರಾಗಿದ್ದು, ಭೂಮಿಯ ಹಕ್ಕುಗಳಿಗೆ ಆಗ್ರಹಿಸುತ್ತಿದ್ದಾರೆ. 12 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮತ್ತು ಕೃಷಿ ಸಾಲ ಮನ್ನಾ ಕೂಡ ಬೇಡಿಕೆಗಳ ಪಟ್ಟಿಯಲ್ಲಿದೆ.
ಮಹಾರಾಷ್ಟ್ರ ಸರ್ಕಾರo ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅವರ ಉಪ ದೇವೇಂದ್ರ ಫಡ್ನವಿಸ್ ಮತ್ತು ಇತರ ಹಿರಿಯ ಸಚಿವರು ಇಂದು ರೈತರನ್ನು ಭೇಟಿ ಮಾಡಲಿದ್ದಾರೆ. ಪಾದಯಾತ್ರೆ ನಿನ್ನೆ ರಾತ್ರಿ ಥಾಣೆ ಪ್ರವೇಶಿಸಿದ ನಂತರ ಇಬ್ಬರು ಸಚಿವರಾದ ದಾದಾ ಭೂಸೆ ಮತ್ತು ಅತುಲ್ ಸೇವ್ ಅವರು ಈಗಾಗಲೇ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ.

ಮಾರ್ಚ್ 13ರಂದು ಆರಂಭವಾದ ಪಾದಯಾತ್ರೆ

ಸುಮಾರು 10,000 ರೈತರು ಮಾರ್ಚ್ 13 ರಂದು ನಾಸಿಕ್‌ನಿಂದ ಮುಂಬೈವರೆಗೆ ಸಿಪಿಐ(ಎಂ)ನ ಅಖಿಲ ಭಾರತ ಕಿಸಾನ್ ಸಮಿತಿ (AIKS ) ಆರಂಭಿಸಿದ ‘ಕಿಸಾನ್ ಲಾಂಗ್ ಮಾರ್ಚ್’ ಜತೆ ಸೇರಿದ್ದಾರೆ. ಪ್ರತಿಭಟನಾಕಾರರು ಈರುಳ್ಳಿ, ಹತ್ತಿ, ಸೋಯಾಬೀನ್, ತೊಗರಿ ಮತ್ತು ಹಸಿರುಬೇಳೆ ಮುಂತಾದ ಬೆಳೆಗಳಿಗೆ ಲಾಭದಾಯಕ ಬೆಲೆಗಳಂತಹ 17 ಅಂಶಗಳ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ. ಸಂಪೂರ್ಣ ಕೃಷಿ-ಸಾಲ ಮನ್ನಾ, ಕೃಷಿ ಗ್ರಾಹಕರಿಗೆ ಎಲ್ಲಾ ವಿದ್ಯುತ್ ಬಿಲ್ ಗಳ ರೈಟ್ ಆಫ್, 12-ಗಂಟೆಗಳ ವಿದ್ಯುತ್ ಪೂರೈಕೆ, ಮತ್ತು ವೃದ್ಧಾಪ್ಯ ವೇತನದಂತಹ ಯೋಜನೆಗಳ ಅಡಿಯಲ್ಲಿ ಪಿಂಚಣಿಗಳನ್ನು ಹೆಚ್ಚಿಸುವುದು ಇವರ ಬೇಡಿಕೆಗಳಾಗಿವೆ. ಅಂದಾಜು 1.7 ಮಿಲಿಯನ್ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸಲು ಎಐಕೆಎಸ್​​ ಬಯಸಿದೆ.

ಇದನ್ನೂ ಓದಿ: Army Helicopter Crash: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಬಳಿ ಪತನ

ಸಿಪಿಐ(ಎಂ) ಪಾಲಿಟ್‌ಬ್ಯೂರೋ ಸದಸ್ಯ ಡಾ.ಅಶೋಕ್ ಧಾವಲೆ ಈ ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಮಾಜಿ ಶಾಸಕ ಜೀವ ಪಾಂಡು ಗಾವಿತ್, ಎಐಕೆಎಸ್​​ನ ಡಾ ಅಜಿತ್ ನವಲೆ, ಸಿಪಿಐ(ಎಂ)ನ ಮಹಾರಾಷ್ಟ್ರ ರಾಜ್ಯ ಸಮಿತಿಯ ಕಾರ್ಯದರ್ಶಿ ಉದಯ್ ನರ್ಕರ್ ಇದರಲ್ಲಿ ಭಾಗಿಯಾಗಿದ್ದಾರೆ.

ಈರುಳ್ಳಿ, ಹತ್ತಿಯಂತಹ ಬೆಳೆಗಳಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಸಿಗದ ಕಾರಣ ರೈತರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ಎಫ್‌ಆರ್‌ಎಯ ಅನುಷ್ಠಾನವೂ  ಮಂದಗತಿಯಲ್ಲಿ ನಡೆಯುತ್ತಿದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿಲ್ಲ’ ಎಂದು ಧಾವಲೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us