ರಾಹುಲ್ ಜೊತೆ ಊಟ, ಮೋದಿ ಯೋಜನೆಗೆ ಜೈ: ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ವ್ಯಾಪಾರಿಯ ಮತ್ತೊಂದು ವಿಡಿಯೋ ವೈರಲ್

ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ ಅವರ ಆತಿಥ್ಯ ಸ್ವೀಕರಿಸಿದ ರಾಮೇಶ್ವರ್​​ ಎಂಬ ತರಕಾರಿ ವ್ಯಾಪಾರಿಯ ಮತ್ತೊಂದು ವಿಡಿಯೋ ವೈರಲ್​​ ಆಗಿದೆ. ಇದರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಮಾಳವಿಯಾ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್ ಜೊತೆ ಊಟ, ಮೋದಿ ಯೋಜನೆಗೆ ಜೈ: ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ವ್ಯಾಪಾರಿಯ ಮತ್ತೊಂದು ವಿಡಿಯೋ ವೈರಲ್
ಸಾಂದರ್ಭಿಕ ಚಿತ್ರ

Updated on: Aug 16, 2023 | 4:16 PM

ದೆಹಲಿ, ಆ.16: ಇತ್ತಿಚೇಗೆ ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ (rahul gandhi) ಅವರ ಆತಿಥ್ಯ ಸ್ವೀಕರಿಸಿದ ರಾಮೇಶ್ವರ್​​ (rameshwar) ಎಂಬ ತರಕಾರಿ ವ್ಯಾಪಾರಿಯ ಮತ್ತೊಂದು ವಿಡಿಯೋ ವೈರಲ್​​ ಆಗಿದೆ. ಇದರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಮಾಳವಿಯಾ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದು, ರಾಹುಲ್​​ ಗಾಂಧಿ ಅವರು ಬಡವರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್​​ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ರಾಮೇಶ್ವರ್​​ ಎಂಬ ತರಕಾರಿ ವ್ಯಾಪರಿ ಟೊಮೆಟೊ ಬೆಲೆ ಹೆಚ್ಚಾಗಿದೆ. ಅದನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾರುಕಟ್ಟೆಯಲ್ಲಿ ಕಣ್ಣೀರು ಹಾಕುತ್ತಿದ್ದ ವಿಡಿಯೋ ಎಲ್ಲ ಕಡೆ ವೈರಲ್​ ಆಗಿತ್ತು. ಇದನ್ನು ರಾಹುಲ್​​ ಗಾಂಧಿ ಅವರು ಕೂಡ ಟ್ವಿಟರ್​​​ನಲ್ಲಿ ಹಂಚಿಕೊಂಡಿದ್ದರು. ಬಳಿಕ ರಾಮೇಶ್ವರ್​​​ ಸಂದರ್ಶನ ಒಂದರಲ್ಲಿ ನಾನು ರಾಹುಲ್​​ ಗಾಂಧಿ ಅವರನ್ನು ಭೇಟಿ ಮಾಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ನಂತರ ರಾಹುಲ್ ಈ ಸಂದರ್ಶನವನ್ನು ನೋಡಿ, ರಾಮೇಶ್ವರ್​​ ಅವರನ್ನು ದೆಹಲಿರುವ ತಮ್ಮ ಮನೆಗೆ ಕರೆದು ಆತಿಥ್ಯ ನೀಡಿದ್ದಾರೆ. ಈ ಬಗ್ಗೆಯೂ ರಾಹುಲ್​​ ಗಾಂಧಿ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದರು. ರಾಮೇಶ್ವರ್​ ಒಬ್ಬ ಮುಗ್ಧ ವ್ಯಕ್ತಿ, ಅನೇಕ ವ್ಯಾಪಾರಿಗಳಿಗೆ ಅವರು ಸ್ಪೂರ್ತಿ, ಅವರು ನಿಜಕ್ಕೂ ‘ಭಾರತ ಭಾಗ್ಯ ವಿಧಾತ’, ದೇಶವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತಿದೆ. ಒಂದೆಡೆ ಅಧಿಕಾರವನ್ನು ರಕ್ಷಿಸಿದ ಪ್ರಬಲ ವ್ಯಕ್ತಿಗಳಿದ್ದಾರೆ, ಅವರ ಸೂಚನೆಗಳ ಮೇರೆಗೆ ದೇಶದ ನೀತಿಗಳನ್ನು ಮಾಡಲಾಗುತ್ತಿದೆ. ಮತ್ತೊಂದೆಡೆ ಸಾಮಾನ್ಯ ಭಾರತೀಯರು, ಅವರ ವ್ಯಾಪ್ತಿಯಿಂದ ತರಕಾರಿಗಳಂತಹ ಮೂಲಭೂತ ವಸ್ತುಗಳು ಸಹ ದೂರ ಹೋಗುತ್ತಿವೆ. ನಾವು ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ತುಂಬಬೇಕು ಮತ್ತು ಈ ಕಣ್ಣೀರನ್ನು ಒರೆಸಬೇಕು ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದರು.

ಬಿಜೆಪಿ ನಾಯಕ ಅಮಿತ್ ಮಾಳವಿಯಾ ಟ್ವೀಟ್​​ ಇಲ್ಲಿದೆ

ಆದರೆ ರಾಮೇಶ್ವರ್​​ ಅವರನ್ನು ರಾಹುಲ್​​ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇನ್ನು ರಾಹುಲ್​​ ಗಾಂಧಿ ಅವರನ್ನು ಭೇಟಿಯಾದ ನಂತರ ಬಿಬಿಸಿ, ರಾಮೇಶ್ವರ್​​ ಅವರ ಸಂದರ್ಶನವನ್ನು ನಡೆಸಿದೆ. ರಾಹುಲ್ ಗಾಂಧಿ ಅವರು ನಿಮ್ಮನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡಿದ್ದಾರೆ ಎಂದು ನೀವು ನಂಬುತ್ತೀರಾ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ರಾಮೇಶ್ವರ್​​ ಅಚ್ಚರಿಯ ಸಂಗತಿಯೆಂದರೆ, ರಾಹುಲ್ ಗಾಂಧಿ ಯಾರನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ವ್ಯಾಪಾರಿಗೆ ರಾಹುಲ್​​ ಗಾಂಧಿ ಆತಿಥ್ಯ

ಇನ್ನು ಸಂದರ್ಶನದಲ್ಲಿ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಕೇಳಿದಾಗ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯುತ್ತಿದ್ದೇನೆ, ನನ್ನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಓದುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಬಾಡಿಗೆ, ಇನ್ನೂ ವಿದ್ಯುತ್ ಮತ್ತು ನೀರಿನ ಬಿಲ್​​​ಗಳನ್ನು ನಾನು ದುಡಿದೆ ಕಟ್ಟಬೇಕು ಎಂದು ಹೇಳಿದ್ದಾರೆ.

ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಬಯಸುತ್ತೀರಾ ಎಂದು ಕೇಳಿದಾಗ, ರಾಮೇಶ್ವರ್ ಯಾರನ್ನೂ ಭೇಟಿ ಮಾಡಲು ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಈ ಸಂದರ್ಶನದ ಈ ಒಂದು ಭಾಗವನ್ನು ಮಾತ್ರ ಬಿಜೆಪಿ ನಾಯಕ ಅಮಿತ್ ಮಾಳವಿಯಾ ತಮ್ಮ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​​ ಮಾಡಿದ್ದಾರೆ. ಇದೀಗ ಈ ವಿಡಿಯೋ ಮೂಲಕ ಬಿಜೆಪಿ ಕಾಂಗ್ರೆಸ್​​ಗೆ ಟಾಂಗ್​​ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us