ಬುರ್ಕಾ, ನಿಖಾಬ್​, ಹಿಜಾಬ್​​ಗಳೆಲ್ಲ ಶೋಷಣೆಯ ಸಂಕೇತಗಳು ಎಂದ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್​​

ಇದು 21ನೇ ಶತಮಾನ. ಇಲ್ಲಿ ಮಹಿಳೆಯರಿಗೆ ಎಲ್ಲ ರೀತಿಯ ಸಮಾನತೆ ಸಿಕ್ಕಿದೆ. ಈಗ ಹಿಜಾಬ್​, ನಿಖಾಬ್​, ಬುರ್ಕಾಗಳೆಲ್ಲ ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಅವಮಾನ ಮಾಡುವ ವಸ್ತುಗಳಾಗಿವೆ ಎಂದು ಹೇಳಿದ್ದಾರೆ.

ಬುರ್ಕಾ, ನಿಖಾಬ್​, ಹಿಜಾಬ್​​ಗಳೆಲ್ಲ ಶೋಷಣೆಯ ಸಂಕೇತಗಳು ಎಂದ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್​​
ತಸ್ಲೀಮಾ ನಸ್ರೀನ್​
Edited By:

Updated on: Feb 17, 2022 | 9:03 AM

ಈಗಂತೂ ಎಲ್ಲಿ ನೋಡಿದರೂ ಹಿಜಾಬ್​​ನದ್ದೇ (Hijab) ಚರ್ಚೆ. ಕರ್ನಾಟಕದ ಕರಾವಳಿ ಕಾಲೇಜುಗಳಲ್ಲಿ ಶುರುವಾದ ಹಿಜಾಬ್​ ಗಲಾಟೆಯೆಂಬುದು ಸದ್ಯ ರಾಷ್ಟ್ರಮಟ್ಟದಲ್ಲಿ ಪಸರಿಸಿದೆ. ಅಂತಾರಾಷ್ಟ್ರೀಯ ಮಟ್ಟದಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದೀಗ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬೇಕು ಎಂದು ನಡೆಯುತ್ತಿರುವ ಗಲಾಟೆ​ ಬಗ್ಗೆ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ (Taslima Nasreen)​​ ಕೂಡ ಮಾತನಾಡಿದ್ದಾರೆ. ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ತಸ್ಲೀಮಾ ನಸ್ರೀನ್​, ಹಿಜಾಬ್​, ಬುರ್ಖಾ ಮತ್ತು ನಿಖಾಬ್​​ಗಳೆಲ್ಲ ಶೋಷಣೆಯ ಸಂಕೇತಗಳು ಎಂದು ಹೇಳಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಇರಬೇಕು. ಶಿಕ್ಷಣದ ಹಕ್ಕು ಎಂಬುದೇ ಧಾರ್ಮಿಕ ಹಕ್ಕು ಎಂದು ನಾನು ನಂಬುತ್ತೇನೆ.  ಮುಸ್ಲಿಮರಲ್ಲಿ ಕೆಲವರು ಹಿಜಾಬ್​ ತುಂಬ ಅತ್ಯಗತ್ಯವಾದ ಅಂಶ ಎಂದು ಭಾವಿಸುತ್ತಾರೆ. ಆದರೆ ಹಿಜಾಬ್​ ಅಷ್ಟೆಲ್ಲ ಮುಖ್ಯ ಅಂಶವಲ್ಲ. ಹಿಜಾಬ್​​ನ್ನು ಏಳನೇ ಶತಮಾನದಲ್ಲಿ ಪರಿಚಯಿಸಲಾಯಿತು. ಆ ಸಮಯದಲ್ಲಿ ಸ್ತ್ರೀಯರೆಂದರೆ ಕೇವಲ ಭೋಗದ ವಸ್ತು ಎಂದು ಪರಿಗಣಿಸಲಾಗಿತ್ತು. ಒಬ್ಬ ಪುರುಷ, ಒಬ್ಬಳು ಸ್ತ್ರೀಯನ್ನು ನೋಡಿದ ಎಂದರೆ ಆತ ಆಕೆಯನ್ನು ಲೈಂಗಿಕ ಸಂಪರ್ಕಕ್ಕೆ ಕರೆದ ಎಂದೇ ಅರ್ಥವಾಗಿತ್ತು. ಹೀಗಾಗಿ ಮುಸ್ಲಿಂ ಸ್ತ್ರೀಯರು ತಮ್ಮನ್ನು ರಕ್ಷಿಸಿಕೊಳ್ಳಲು, ಮುಖ ಮುಚ್ಚಿ ಓಡಾಡಲು ಹಿಜಾಬ್​, ಬುರ್ಕಾಗಳನ್ನು ಬಳಸತೊಡಗಿದರು. ಯಾಕೆಂದರೆ ಒಬ್ಬ ಪುರುಷ ತನ್ನ ಸೌಂದರ್ಯವನ್ನು ನೋಡದಂತೆ ತಡೆಯುವ, ಈ ಮೂಲಕ ಆತನ ದೌರ್ಜನ್ಯದಿಂದ ತಮ್ಮನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಅಂದಿನ ಮಹಿಳೆಯರಿಗೆ ಇತ್ತು ಎಂದು ತಸ್ಲೀಮಾ ವಿವರಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಇದು 21ನೇ ಶತಮಾನ. ಇಲ್ಲಿ ಮಹಿಳೆಯರಿಗೆ ಎಲ್ಲ ರೀತಿಯ ಸಮಾನತೆ ಸಿಕ್ಕಿದೆ. ಈಗ ಹಿಜಾಬ್​, ನಿಖಾಬ್​, ಬುರ್ಕಾಗಳೆಲ್ಲ ಶೋಷಣೆಯ ಸಂಕೇತಗಳಾಗಿವೆ. ಇವು ಮಹಿಳೆಯರು ಮತ್ತು ಪುರುಷರಿಗೆ ಅವಮಾನ ಮಾಡುವ ವಸ್ತುಗಳಾಗಿವೆ ಎಂದೂ ಲೇಖಕಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಜಾತ್ಯತೀತ ರಾಷ್ಟ್ರ ಎಂದು ಹೇಳಲಾಗುತ್ತದೆ. ಅದರಲ್ಲೂ ಇಲ್ಲಿನ ಶಾಲಾ-ಕಾಲೇಜುಗಳು ಜಾತ್ಯಾತೀತತೆಯ ಬಿಂಬಕಗಳು. ಹೀಗಿದ್ದಾಗ ಇಲ್ಲಿನ ವಸ್ತ್ರಸಂಹಿತೆ ಕೂಡ ಸೆಕ್ಯೂಲರ್ ಆಗಿರಬೇಕು. ಅದರಲ್ಲೂ ವಿದ್ಯಾರ್ಥಿಗಳು ಧರ್ಮಕ್ಕಿಂತಲೂ ಶಿಕ್ಷಣ ಮುಖ್ಯವೆಂಬ ಭಾವನೆ ಬೆಳೆಸಿಕೊಳ್ಳಬೇಕು. ಧಾರ್ಮಿಕ ನಂಬಿಕೆಗಳು, ಆಚರಣೆಗಳು ಖಂಡಿತ ತಪ್ಪಲ್ಲ. ಆದರೆ ಅದನ್ನು ಶಿಕ್ಷಣ ಸಂಸ್ಥೆಗಳಿಂದ ಆಚೆಗೆ, ಮನೆಯಲ್ಲಿ ಇಟ್ಟುಕೊಂಡರೆ ಸಾಕು ಎಂದು ತಸ್ಲೀಮಾ ವಿವರಿಸಿದ್ದಾರೆ. ಅಷ್ಟೇ ಅಲ್ಲ, ವ್ಯಕ್ತಿ ತನ್ನ ಗುರುತನ್ನು ಧರ್ಮದೊಂದಿಗೆ ನಂಟು ಹಾಕಿಕೊಳ್ಳಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದ ಕಾಲೇಜುಗಳಿಗೆ ಮತ್ತೆ ಸಿಗಲಿದೆ ಜೀವಕಳೆ, ಕಾಲೇಜುಗಳ ಅಭಿವೃದ್ಧಿಗೆ ₹18.7 ಕೋಟಿ ಬಿಡುಗಡೆ

Web contact

TV9 Kannada

Read More
Follow Us