ರಾಜಸ್ಥಾನದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ; ಸರ್ಕಾರ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಬೃಹತ್ ಪ್ರತಿಭಟನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ, ಗೆಹ್ಲೋಟ್ ಅವರು ರೋಗವನ್ನು ಎದುರಿಸಲು ಹೆಚ್ಚುವರಿ ಸಹಾಯದ ಅಗತ್ಯವನ್ನು ಒತ್ತಿಹೇಳಿದ್ದಾರೆ ಮತ್ತು ಲಸಿಕೆ ಸಿದ್ಧವಾದ ನಂತರ ರಾಜಸ್ಥಾನಕ್ಕೆ ಆದ್ಯತೆ ನೀಡುವಂತೆ ಕೇಳಿದ್ದಾರೆ

ರಾಜಸ್ಥಾನದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ; ಸರ್ಕಾರ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಬೃಹತ್ ಪ್ರತಿಭಟನೆ
ಬಿಜೆಪಿ ಪ್ರತಿಭಟನೆ
Updated By: ರಶ್ಮಿ ಕಲ್ಲಕಟ್ಟ

Updated on: Sep 20, 2022 | 4:36 PM

ದೆಹಲಿ: ಲಂಪಿ ಸ್ಕಿನ್ ಡಿಸೀಸ್ (LSD) ಅಥವಾ ಚರ್ಮ ಗಂಟು ರೋಗದಿಂದಾಗಿ(Lumpy Skin Disease) ರಾಜಸ್ಥಾನದಲ್ಲಿ 57,000 ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿದ್ದು 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿಗೆ ರೋ ಗ ತಗುಲಿದೆ. ಜಾನುವಾರುಗಳಿಗೆ (Rajasthan) ಮಾರಕವಾಗಿರುವ ಲಂಪಿ ಸ್ಕಿನ್ ಡಿಸೀಸ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಜೈಪುರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಯುಂಟಾಗಿದ್ದು, ರಾಜ್ಯ ವಿಧಾನಸಭೆಗೆ ಮೆರವಣಿಗೆಯನ್ನು ತಡೆದಾಗ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ. ರಾಜ್ಯ ವಿಧಾನಸಭೆಯಲ್ಲೂ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಸೋಮವಾರ ಬಿಜೆಪಿ ಶಾಸಕರೊಬ್ಬರು ರಾಜ್ಯ ವಿಧಾನಸಭೆ ಆವರಣದ ಹೊರಗೆ ಹಸುವನ್ನು ಕರೆತಂದು ಚರ್ಮ ಗಂಟು ರೋಗ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದರು. ಚರ್ಮ ಗಂಟು ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.

ಚರ್ಮ ಗಂಟು ರೋಗದಿಂದ ಹಸುಗಳ ಜೀವ ಉಳಿಸುವುದು ಹೇಗೆ ಎಂಬುದು ನಮ್ಮ ಆದ್ಯತೆಯಾಗಿದ್ದು, ಕೇಂದ್ರವೇ ಲಸಿಕೆ, ಔಷಧ ನೀಡಬೇಕಿದ್ದು, ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ..
ಜೈಪುರದಲ್ಲಿ ಹಾಲಿನ ಸಂಗ್ರಹಕ್ಕೂ ಈ ರೋಗ ಹೊಡೆತ ನೀಡಿದ್ದು ರಾಜ್ಯದಲ್ಲಿ ತಯಾರಿಸುವ ಸಿಹಿತಿಂಡಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ರಾಜ್ಯದ ಅತಿದೊಡ್ಡ ಹಾಲು ಸಹಕಾರಿ ಸಂಘ ಜೈಪುರ ಡೈರಿ ಫೆಡರೇಶನ್ ಪ್ರಕಾರ, ಹಾಲು ಸಂಗ್ರಹಣೆಯು ಶೇಕಡಾ 15-18 ರಷ್ಟು ಕಡಿಮೆಯಾಗಿದೆ, ಆದರೂ ಇದುವರೆಗೆ ಪೂರೈಕೆಯಲ್ಲಿ ಯಾವುದೇ ಅಡ್ಡಿ ಉಂಟಾಗಿಲ್ಲ.


ಪಶುಸಂಗೋಪನೆಯು ರಾಜಸ್ಥಾನದ ಆರ್ಥಿಕತೆಯ ಬೆನ್ನೆಲುಬಾಗಿರುವುದರಿಂದ ಮುಖ್ಯಮಂತ್ರಿ ಗೆಹ್ಲೋಟ್ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮರುಭೂಮಿ ರಾಜ್ಯದ ರೈತರಿಗೆ ಹಾಲು ಪ್ರಾಥಮಿಕ ಆದಾಯದ ಮೂಲವಾಗಿದೆ. 13 ರಾಜ್ಯಗಳಿಗೆ ಹರಡಿರುವ ಎಲ್‌ಎಸ್‌ಡಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಜೈಪುರ ಡೈರಿ ಫೆಡರೇಶನ್‌ನ ಅಧ್ಯಕ್ಷ ಓಂ ಪೂನಿಯಾ ದೈನಂದಿನ ಹಾಲು ಸಂಗ್ರಹವು ಸಾಮಾನ್ಯ 14 ಲಕ್ಷ ಲೀಟರ್‌ನಿಂದ 12 ಲಕ್ಷ ಲೀಟರ್‌ಗೆ ಇಳಿದಿದೆ ಎಂದಿದ್ದಾರೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ, ಗೆಹ್ಲೋಟ್ ಅವರು ರೋಗವನ್ನು ಎದುರಿಸಲು ಹೆಚ್ಚುವರಿ ಸಹಾಯದ ಅಗತ್ಯವನ್ನು ಒತ್ತಿಹೇಳಿದ್ದಾರೆ ಮತ್ತು ಲಸಿಕೆ ಸಿದ್ಧವಾದ ನಂತರ ರಾಜಸ್ಥಾನಕ್ಕೆ ಆದ್ಯತೆ ನೀಡುವಂತೆ ಕೇಳಿದ್ದಾರೆ.

ರೋಗವನ್ನು ಎದುರಿಸಲು ಇನ್ನೂ ಯಾವುದೇ ಲಸಿಕೆ ಇಲ್ಲದಿದ್ದರೂ, ಮೇಕೆ ಪೋಕ್ಸ್ ಲಸಿಕೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ರಾಜಸ್ಥಾನದಲ್ಲಿ 16.22 ಲಕ್ಷ ಮೇಕೆ ಪಾಕ್ಸ್ ಲಸಿಕೆ ಡೋಸ್‌ಗಳನ್ನು ಹೊಂದಿದ್ದು, ಇದುವರೆಗೆ 12.32 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಆದಾಗ್ಯೂ, ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ವೈರಸ್‌ಗೆ ತುತ್ತಾಗಿದ್ದು, 51,000 ಜಾನುವಾರುಗಳು ಸಾವಿಗೀಡಾಗಿವೆ.