ದೆಹಲಿ: ‘ನೂತನ ಕೃಷಿ ಕಾಯ್ದೆಗಳ ಕುರಿತು ನಿಮ್ಮ ಎಲ್ಲಾ ಸಮಸ್ಯೆಗಳಿಗೂ ತಾರ್ಕಿಕ ಅಂತ್ಯ ಹಾಡಲು ಸರ್ಕಾರ ಸಿದ್ಧವಿದೆ’ ಎಂದು ರೈತ ನಾಯಕರಿಗೆ ಬರೆದ ಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ನಿಮ್ಮ ಸೂಚನೆಗಳನ್ನು ಸೇರ್ಪಡೆಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದೆ.ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಈ ಪತ್ರ ಬರೆದಿದ್ದಾರೆ.
ಇನ್ನೊಂದು ಸುತ್ತಿನ ಮಾತುಕತೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತೆ ಬರೆದಿದ್ದ ಪತ್ರದಲ್ಲಿ ದೆಹಲಿ ಚಲೋ ಚಳವಳಿಯ ತಾರ್ಕಿಕ ಅಂತ್ಯದ ಕುರಿತು ಪ್ರಸ್ತಾಪಿಸಲಾಗಿದೆ. ಈ ಬೆನ್ನಲ್ಲೇ ಕಿಸಾನ್ ಮಜ್ದೂರ್ ಸಂಘದ 60 ರೈತ ನಾಯಕರು ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿದ್ದಾರೆ.
ಕೃಷಿ ಕಾಯ್ದೆಗಳು ಬಂಡವಾಳ ಶಾಹಿಗಳಿಗೆ ಉತ್ತೇಜನಕಾರಿಯಾಗಿವೆ ಎಂದು ದೂರಿರುವ ಭಾರತೀಯ ಕಿಸಾನ್ ಯೂನಿಯನ್ (ಲೋಕ ಶಕ್ತಿ) ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕಾಯ್ದೆಗಳು ರೈತರ ಹಿತವನ್ನು ಕಡೆಗಣಿಸಲಿವೆ ಎಂದು ಸಂಘಟನೆ ಆರೋಪಿಸಿದೆ.
ಟ್ರ್ಯಾಕ್ಟರ್ ಏರಿ ವಿಧಾನಸಭೆಗೆ ಆಗಮಿಸಲಿರುವ ಶಾಸಕರು ಡಿ.28ರಿಂದ ಆರಂಭವಾಗಲಿರುವ ಮಧ್ಯಪ್ರದೇಶದ ಚಳಿಗಾಲದ ಅಧಿವೇಶನಕ್ಕೆ ಕಾಂಗ್ರೆಸ್ ಶಾಸಕರು ಟ್ರ್ಯಾಕ್ಟರ್ನಲ್ಲಿ ಆಗಮಿಸುವುದಾಗಿ ತಿಳಿಸಿದ್ದಾರೆ. ನೂತನ ಕೃಷಿ ಕಾಯ್ದೆ ಮತ್ತು ಹೆಚ್ಚುತ್ತಿರುವ ತೈಲ ಬೆಲೆಗಳನ್ನು ವಿರೋಧಿಸಿ ಟ್ರ್ಯಾಕ್ಟರ್ ಏರಿ ಬರುವುದಾಗಿ ಕಾಂಗ್ರೆಸ್ ಶಾಸಕರು ತಿಳಿಸಿದ್ದಾರೆ.