ಒಮ್ಮೆ ಬಂದು ಅಮ್ಮನನ್ನು ನೋಡಿಕೊಂಡು ಹೋಗಿ; ಯೋಗಿ ಆದಿತ್ಯನಾಥ್​ಗೆ ಅಕ್ಕ ಶಶಿ ಸಿಂಗ್​​ರಿಂದ ಮನವಿ

| Updated By: Lakshmi Hegde

Updated on: Mar 24, 2022 | 5:39 PM

ಯೋಗಿ ಆದಿತ್ಯನಾಥ್​ ಅವರು ಮೂಲತಃ ಉತ್ತರಾಖಂಡ್​ನ ಪೌರಿ ಗರ್ವಾಲ್​ ಜಿಲ್ಲೆಯ ಪಂಚುರ್​ ಗ್ರಾಮದವರು. ತಮ್ಮ 18ನೇ ವಯಸ್ಸಿಗೇ ಮನೆ ಬಿಡುತ್ತಾರೆ. ಬಳಿಕ ಸನ್ಯಾಸತ್ಯ ಸ್ವೀಕರಿಸಿ ಗೋರಖ್​ಪುರ ಮಠಕ್ಕೆ ಬಂದು ಯೋಗಿ ಆದಿತ್ಯನಾಥ್​ ಎಂಬ ಹೆಸರು ಪಡೆಯುತ್ತಾರೆ.

ಒಮ್ಮೆ ಬಂದು ಅಮ್ಮನನ್ನು ನೋಡಿಕೊಂಡು ಹೋಗಿ; ಯೋಗಿ ಆದಿತ್ಯನಾಥ್​ಗೆ ಅಕ್ಕ ಶಶಿ ಸಿಂಗ್​​ರಿಂದ ಮನವಿ
ಸಿಎಂ ಯೋಗಿ ಆದಿತ್ಯನಾಥ್​
Follow us on

ಯೋಗಿ ಆದಿತ್ಯನಾಥ್ (Yogi Adityanath)​ ಅವರು ಮಾರ್ಚ್​ 25ಕ್ಕೆ ಉತ್ತರ ಪ್ರದೇಶದ ಎರಡನೇ ಅವಧಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇದೇ ಹೊತ್ತಲ್ಲಿ ಯೋಗಿ ಆದಿತ್ಯನಾಥ್​ ಅವರ ಅಕ್ಕ ಶಶಿ ಸಿಂಗ್​ ತನ್ನ ಸೋದರನಿಗೆ ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದಾರೆ. ‘ಅಮ್ಮ ಅಜಯ್​ನನ್ನು (ಯೋಗಿ ಆದಿತ್ಯನಾಥ್​ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್ ಬಿಷ್ಟ್​) ನೋಡದೆ ತುಂಬ ಕೊರಗುತ್ತಿದ್ದಾರೆ. ಹೀಗಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ಅವರು ಬಂದು ಹೋಗಿದ್ದರೆ ತುಂಬ ಚೆನ್ನಾಗಿತ್ತು’ ಎಂದು ಹೇಳಿದ್ದಾರೆ. ನೀನೊಮ್ಮೆ ಬಂದು ಅಮ್ಮನನ್ನು ನೋಡಿಕೊಂಡು ಹೋಗು ಎಂದು ನೇರವಾಗಿಯೇ ಮನವಿ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್​ ಅವರು ಮೂಲತಃ ಉತ್ತರಾಖಂಡ್​ನ ಪೌರಿ ಗರ್ವಾಲ್​ ಜಿಲ್ಲೆಯ ಪಂಚುರ್​ ಗ್ರಾಮದವರು. ತಮ್ಮ 18ನೇ ವಯಸ್ಸಿಗೇ ಮನೆ ಬಿಡುತ್ತಾರೆ. ಬಳಿಕ ಸನ್ಯಾಸತ್ಯ ಸ್ವೀಕರಿಸಿ ಗೋರಖ್​ಪುರ ಮಠಕ್ಕೆ ಬಂದು ಯೋಗಿ ಆದಿತ್ಯನಾಥ್​ ಎಂಬ ಹೆಸರು ಪಡೆಯುತ್ತಾರೆ. ಸದ್ಯ ಅವರ ಅಕ್ಕ, ಅಮ್ಮ ಎಲ್ಲ ಉತ್ತರಾಖಂಡ್​​ನಲ್ಲೇ ಇದ್ದಾರೆ.  ಯೋಗಿ ಮನೆ ಬಿಟ್ಟಾಗ ತಾನು ಸನ್ಯಾಸಿಯಾಗಲು ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿರಲಿಲ್ಲ ಎಂಬುದನ್ನು ಶಶಿ ಸಿಂಗ್​ ಹಿಂದೊಮ್ಮೆ ತಿಳಿಸಿದ್ದರು.  ಇದೀಗ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಮೂಲಕ ದಾಖಲೆ ನಿರ್ಮಾಣ ಮಾಡುತ್ತಿರುವ ಹೊತ್ತಲ್ಲಾದರೂ ಒಮ್ಮೆ ಬಂದು ಅಮ್ಮನನ್ನು ನೋಡಿ ಹೋಗು ಎಂದು ಶಶಿ ಸಿಂಗ್​ ಕೋರಿದ್ದಾರೆ.  ಶಶಿ ಸಿಂಗ್​, ಮುಖ್ಯಮಂತ್ರಿಯೊಬ್ಬರ ಸೋದರಿಯಾದರೂ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ. ಮನೆಯ ಸಮೀಪವೇ ಒಂದು ಚಹಾ ಅಂಗಡಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ನಮಗೆ ಕುಟುಂಬ ರಾಜಕಾರಣ ಮಾಡುವುದು ಸ್ವಲ್ಪವೂ ಇಷ್ಟವಾಗುವುದಿಲ್ಲ ಎಂದೂ ಹೇಳಿದ್ದಾರೆ.

ಗೋರಖ್​ಪುರ ಎಂಪಿಯಾಗಿದ್ದ ಯೋಗಿ ಆದಿತ್ಯನಾಥ್​ರನ್ನು ಬಿಜೆಪಿ 2017ರಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಅವರ ಆಡಳಿತ ವೈಖರಿ, ಅಭಿವೃದ್ಧಿ ಕೆಲಸಗಳನ್ನು ನೋಡಿ ಅಲ್ಲಿನ ಜನ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಹಾಗೇ, 1985ರಿಂದ ಈಚೆಗೆ ಉತ್ತರ ಪ್ರದೇಶದಲ್ಲಿ ಸತತವಾಗಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೂ ಯೋಗಿ ಆದಿತ್ಯನಾಥ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಪಂಜಾಬ್​​ಗೆ ವರ್ಷಕ್ಕೆ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ; ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಬೇಡಿಕೆ ಮುಂದಿಟ್ಟ ಭಗವಂತ್ ಮಾನ್​