Gujarat Riots: ವಡೋದರದಲ್ಲಿ ಗುಂಪು ಘರ್ಷಣೆ, ಅಂಗಡಿಗಳಿಗೆ ಬೆಂಕಿ

ಹಿಂಸಾಚಾರ ಆರಂಭಗೊಳ್ಳುವುದಕ್ಕೂ ಮೊದಲು ಆ ಪ್ರದೇಶದಲ್ಲಿ ಬೀದಿ ದೀಪಗಳನ್ನು ಆರಿಸಲಾಗಿತ್ತು. ನಂತರ ಎರಡೂ ಗುಂಪುಗಳು ಕಲ್ಲೆಸೆತ ಆರಂಭಿಸಿದರು ಎಂದು ಪೊಲೀಸರು ಹೇಳಿದ್ದಾರೆ.

Gujarat Riots: ವಡೋದರದಲ್ಲಿ ಗುಂಪು ಘರ್ಷಣೆ, ಅಂಗಡಿಗಳಿಗೆ ಬೆಂಕಿ
ಗುಜರಾತ್​ನ ವಡೋದರಾದಲ್ಲಿ ಹಿಂಸಾಚಾರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 25, 2022 | 11:22 AM

ವಡೋದರ: ಗುಜರಾತ್​​ನ ವಡೋದರದಲ್ಲಿ ದೀಪಾವಳಿ ಹಬ್ಬದಂದೇ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು ಕೆಲ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ನಂತರ ಕಲ್ಲು ತೂರಾಟವೂ ನಡೆದಿದೆ. ಘಟನೆ ಸಂಬಂಧ 19 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಬಿಗಿ ಬಂದೋಬಸ್ತ್​ ಒದಗಿಸಲಾಗಿದೆ. ಗಲಭೆಯಲ್ಲಿ ಭಾಗಬಹಿಸಿದ್ದ ಇತರ 12 ಮಂದಿಯನ್ನು ಪೊಲೀಸರು ಗುರುತಿಸಿದ್ದು, ಬಂಧನಕ್ಕೆ ಪ್ರಯತ್ನ ನಡೆದಿದೆ. ನಗರದ ಪಾಣಿಗೇಟ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಮೊದಲ ಬಾರಿಗೆ ಘರ್ಷಣೆಗಳು ವರದಿಯಾಗಿದ್ದವು.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಡೋದರಾದ ಡಿಸಿಪಿ ಯಶ್​ಪಾಲ್ ಜಗಾನಿಯಾ, ‘ಹಿಂಸಾಚಾರಕ್ಕೆ ನಿಖರ ಕಾರಣ ಇನ್ನೂ ತಿಳಿಯಬೇಕಿದೆ. ಹಿಂಸಾಚಾರದ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಗರದ ವಿವಿಧೆಡೆ ಇದ್ದ ಎಲ್ಲ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಲಾಯಿತು. ಮನೆಯೊಂದರ ತಾರಸಿಯಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಹಿಂಸಾಚಾರ ಆರಂಭಗೊಳ್ಳುವುದಕ್ಕೂ ಮೊದಲು ಆ ಪ್ರದೇಶದಲ್ಲಿ ಬೀದಿ ದೀಪಗಳನ್ನು ಆರಿಸಲಾಗಿತ್ತು. ನಂತರ ಎರಡೂ ಗುಂಪುಗಳು ಕಲ್ಲೆಸೆತ ಆರಂಭಿಸಿದರು. ಸಮೀಪದ ಕಾಲೇಜು ಮೈದಾನದಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಆರಂಭವಾದ ಜಗಳವೇ ಎರಡೂ ಗುಂಪುಗಳ ನಡುವೆ ಹಿಂಸಾಚಾರಕ್ಕೆ ಮುಖ್ಯ ಕಾರಣವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.


ಇದನ್ನೂ ಓದಿ: ಗುಜರಾತ್​ನ ಮೆಟ್ರೋ ಸ್ಟೇಷನ್​ನಲ್ಲಿ ಗುಟ್ಕಾ ಕಲೆ, ನಾಗರಿಕ ಪ್ರಜ್ಞೆಯನ್ನು ಪ್ರಶ್ನಿಸುತ್ತಿರುವ ನೆಟ್ಟಿಗರು