AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರ ರಾಜಕಾರಣವನ್ನು ದೇಶದಿಂದ ಹೊರಗೆ ಕೊಂಡೊಯ್ದವರು ಯಾರು ಅಂತ ನಿಮಗೆ ಗೊತ್ತಿದೆ: ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು

ದೇಶದಲ್ಲಿ ಭಾರತವನ್ನು ಟೀಕಿಸಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಗುಡುಗಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಷ್ಟ್ರೀಯ ರಾಜಕೀಯವನ್ನು ದೇಶದಿಂದ ಹೊರಗೆ ತೆಗೆದುಕೊಳ್ಳುವುದು ರಾಷ್ಟ್ರದ ಹಿತಾಸಕ್ತಿಯಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಕಾರಣವನ್ನು ದೇಶದಿಂದ ಹೊರಗೆ ಕೊಂಡೊಯ್ದವರು ಯಾರು ಅಂತ ನಿಮಗೆ ಗೊತ್ತಿದೆ: ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು
ಎಸ್.ಜೈಶಂಕರ್- ಜೈರಾಮ್ ರಮೇಶ್
ರಶ್ಮಿ ಕಲ್ಲಕಟ್ಟ
|

Updated on:Jun 09, 2023 | 3:38 PM

Share

ದೆಹಲಿ: ಅಮೆರಿಕದಲ್ಲಿ ರಾಹುಲ್ ಗಾಂಧಿ (Rahul Gandhi) ಮಾಡಿದ ಹೇಳಿಕೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಟೀಕೆ ಮಾಡಿದ್ದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ (Congress), ರಾಷ್ಟ್ರ ರಾಜಕಾರಣವನ್ನು ದೇಶದಿಂದ ಹೊರಗೆ ಕೊಂಡೊಯ್ಯುವ ಅಭ್ಯಾಸವನ್ನು ಆರಂಭಿಸಿದವರು ಬೇರೆ ಯಾರೂ ಅಲ್ಲ, ನಿಮಗೆ ಸಚಿವ ಸ್ಥಾನ ನೀಡಿದವರು ಎಂದು ಹೇಳಿದೆ. ವಿದೇಶದಲ್ಲಿ ಭಾರತವನ್ನು ಟೀಕಿಸಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಗುಡುಗಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಷ್ಟ್ರ  ರಾಜಕೀಯವನ್ನು ದೇಶದಿಂದ ಹೊರಗೆ ತೆಗೆದುಕೊಳ್ಳುವುದು ರಾಷ್ಟ್ರದ ಹಿತಾಸಕ್ತಿಯಲ್ಲ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅಮೆರಿಕದಲ್ಲಿ ರಾಹುಲ್ ಮಾಡಿದ ತೀವ್ರ ಟೀಕೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್ ಅವರು ಭಾರತದಲ್ಲಿ ಏನೇ ಮಾಡಿದರೂ ನನಗೆ ಸಮಸ್ಯೆ ಇಲ್ಲ, ಆದರೆ ಆಂತರಿಕ ಸಮಸ್ಯೆಗಳನ್ನು ಹೊರಗೆ ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದಿದ್ದರು.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ದೇಶದ ರಾಜಕೀಯವನ್ನು ದೇಶದಿಂದ ಹೊರಗೆ ಕೊಂಡೊಯ್ಯುವ ಅಭ್ಯಾಸವನ್ನು ಪ್ರಾರಂಭಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲ, ನಿಮಗೆ (ಜೈಶಂಕರ್) ನಿಮ್ಮ ಸಚಿವ ಸ್ಥಾನವನ್ನು ನೀಡಿದ ವ್ಯಕ್ತಿ. ಅದು ನಿಮಗೆ ತಿಳಿದಿದೆ, ಆದರೆ ನೀವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಡಾಕ್ಟರ್ ಸಚಿವರೇ.

ರಾಹುಲ್ ಗಾಂಧಿಯವರನ್ನು ಜೈಶಂಕರ್ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಬಿಜೆಪಿ, ವಿದೇಶಾಂಗ ವ್ಯವಹಾರಗಳ ಸಚಿವರಿಗೆ “ಹಳೆಯ ಸ್ಕ್ರಿಪ್ಟ್” ಅನ್ನು ನೀಡಿದೆ. ಅವರು ಹೊಸತನ್ನು ಓದಬೇಕು ಎಂದಿದ್ದಾರೆ.

ಪ್ರಧಾನಿ ಅವರು ಹಿಂದಿನ ಸರ್ಕಾರಗಳನ್ನು ಗೇಲಿ ಮಾಡಿದ್ದಾರೆ. ದೇಶದ 70 ವರ್ಷಗಳ ಹಿಂದಿನ ಇತಿಹಾಸವನ್ನು ಬೆಳಕಿಗೆ ತಂದಿದ್ದಾರೆ. ರಾಹುಲ್ ಗಾಂಧಿಯವರು ಹೇಳಿರುವುದು ನಮ್ಮ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಯೋಜಿತ ವ್ಯವಸ್ಥಿತ ದಾಳಿ ನಡೆಯುತ್ತಿದೆ ಎಂಬುದು ಮಾತ್ರ ಸತ್ಯ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲಾ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಜೈಶಂಕರ್, ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದಾಗಲೆಲ್ಲಾ ದೇಶವನ್ನು ಟೀಕಿಸುವ ಮತ್ತು ನಮ್ಮ ರಾಜಕೀಯದ ಬಗ್ಗೆ ಕಾಮೆಂಟ್ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಜಗತ್ತು ನಮ್ಮತ್ತ ನೋಡುತ್ತಿದೆ. ಅದು ಏನು ನೋಡುತ್ತಿದೆ? ದೇಶದಲ್ಲಿ ಚುನಾವಣೆಗಳು ನಡೆಯುತ್ತಿವೆ. ಕೆಲವೊಮ್ಮೆ ಒಂದು ಪಕ್ಷವು ಗೆಲ್ಲುತ್ತದೆ ಮತ್ತು ಕೆಲವೊಮ್ಮೆ ಇನ್ನೊಂದು ಪಕ್ಷವು ಗೆಲ್ಲುತ್ತದೆ. ಮುಂದಿನ ವರ್ಷದ ಸಂಸತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಧಿಕಾರವನ್ನು ಉಳಿಸಿಕೊಳ್ಳಲಿದೆ.2024 ಕಾ ರಿಸಲ್ಟ್ ತೋ ವಹೀ ಹೋಗಾ, ಹುಮೇಂ ಪತಾ ಹೈ (2024 ರಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿದೆ) ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತದ ಪ್ರಜಾಪ್ರಭುತ್ವದ ಕುರಿತು ಶ್ವೇತಭವನದ ಹೇಳಿಕೆ ರಾಹುಲ್​ ಗಾಂಧಿಗೆ ಕಪಾಳಮೋಕ್ಷ ಮಾಡಿದಂತಿದೆ: ಬಿಜೆಪಿ

ನೀವು ಎಲ್ಲಾ ನಿರೂಪಣೆಗಳನ್ನು (ಸರ್ಕಾರದ ವಿರುದ್ಧ) ನೋಡಿದರೆ, ಅವು ದೇಶದೊಳಗೆ ಮಾಡಲ್ಪಟ್ಟಿದೆ. ಒಂದು ನಿರೂಪಣೆಯು ಕಾರ್ಯನಿರ್ವಹಿಸದಿದ್ದರೆ ಅಥವಾ ಕಡಿಮೆ ಪರಿಣಾಮಕಾರಿಯಾಗಿದ್ದರೆ, ಅದನ್ನು ವಿದೇಶದಲ್ಲಿ ಆಡಿಕೊಳ್ಳಲಾಗುತ್ತದೆ. ಹೊರಗಿನ ಬೆಂಬಲವು ಭಾರತದಲ್ಲಿ ಕೆಲಸ ಮಾಡುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ. ರಾಷ್ಟ್ರ ರಾಜಕಾರಣವನ್ನು ವಿದೇಶಕ್ಕೆ ಕೊಂಡೊಯ್ಯುವುದರಿಂದ ರಾಹುಲ್ ಗಾಂಧಿಯವರ ವಿಶ್ವಾಸಾರ್ಹತೆ ಹೆಚ್ಚಾಗುವಂತೆ ಮಾಡುವುದಿಲ್ಲ ಎಂದಿದ್ದಾರೆ ಜೈಶಂಕರ್ .

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Fri, 9 June 23