ಇದು ಅವರ ಕನಸಾಗಿತ್ತು; ಶಾಲೆ ಉದ್ಘಾಟನೆ ಸಮಾರಂಭದಲ್ಲಿ ಸಿಸೋಡಿಯಾ ನೆನೆದು ಭಾವುಕರಾದ ಕೇಜ್ರಿವಾಲ್

|

Updated on: Jun 07, 2023 | 5:34 PM

ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಕೇಜ್ರಿವಾಲ್, ಬಿಜೆಪಿ ನಮ್ಮ ಸಚಿವರನ್ನು ಬಂಧಿಸುವ ಮೂಲಕ ಕ್ರಾಂತಿಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇದು ಅವರ ಕನಸಾಗಿತ್ತು; ಶಾಲೆ ಉದ್ಘಾಟನೆ ಸಮಾರಂಭದಲ್ಲಿ ಸಿಸೋಡಿಯಾ ನೆನೆದು ಭಾವುಕರಾದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಬುಧವಾರ ನಗರದ ಬವಾನಾ ಪ್ರದೇಶದಲ್ಲಿ ಹೊಸ ಶಾಲೆಯೊಂದರ ಉದ್ಘಾಟನೆಯ ಸಂದರ್ಭದಲ್ಲಿ ತಮ್ಮ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia )ಅವರನ್ನು ನೆನಪಿಸಿಕೊಂಡು ಭಾವುಕರಾದರು. ದೆಹಲಿಯ (Delhi) ಶಾಲಾ ವಿದ್ಯಾರ್ಥಿಗಳ ಶಿಕ್ಷಣವು ಸಿಸೋಡಿಯಾ ಅವರ ಕನಸಾಗಿದೆ ಎಂದು ಕೇಜ್ರಿವಾಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಸಿಸೋಡಿಯಾ ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತಿಹಾರ್ ಜೈಲಿನಲ್ಲಿದ್ದಾರೆ. ಮಾರ್ಚ್‌ನಲ್ಲಿ ಬಂಧನದ ನಂತರ ಅವರು ರಾಜೀನಾಮೆ ನೀಡುವವರೆಗೂ ದೆಹಲಿಯ ಶಿಕ್ಷಣ ಸಚಿವರಾಗಿದ್ದರು.

ಆ ಜನರು ದೆಹಲಿಯ ಶಿಕ್ಷಣ ಕ್ರಾಂತಿಯು ಕೊನೆಗೊಳ್ಳಬೇಕೆಂದು ಬಯಸುತ್ತಾರೆ. ನಾವು ಅದನ್ನು ಕೊನೆಗೊಳಿಸಲು ಬಿಡುವುದಿಲ್ಲ. ಸಿಸೋಡಿಯಾರಂಥಾ ಒಳ್ಳೆಯ ವ್ಯಕ್ತಿಯನ್ನು ಸುಳ್ಳು ಆರೋಪ ಮಾಡಿ ಸುಳ್ಳು ಕೇಸು ದಾಖಲಿಸಿ ಜೈಲಿನಲ್ಲಿಟ್ಟಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರು ಸಿಸೋಡಿಯಾ ಅವರನ್ನು ‘ದೆಹಲಿಯ ಶಿಕ್ಷಣ ಕ್ರಾಂತಿಯ ವಾಸ್ತುಶಿಲ್ಪಿ’ ಎಂದಿದ್ದು ಅವರು ಅಪ್ಪಟ ಪ್ರಾಮಾಣಿಕ ವ್ಯಕ್ತಿ ಎಂದಿದ್ದರು. ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಕೇಜ್ರಿವಾಲ್, ಬಿಜೆಪಿ ನಮ್ಮ ಸಚಿವರನ್ನು ಬಂಧಿಸುವ ಮೂಲಕ ಕ್ರಾಂತಿಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.


ದೆಹಲಿಯ ಬವಾನಾ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಶಾಲೆಯ ಹೀನಾಯ ಸ್ಥಿತಿಯ ಕುರಿತು ಮಾತನಾಡಿದ ಕೇಜ್ರಿವಾಲ್, ಆ ಗುಣಮಟ್ಟವನ್ನು ಸುಧಾರಿಸಲು ತಮ್ಮ ಸರ್ಕಾರವು ಶ್ರದ್ಧೆಯಿಂದ ಕೆಲಸ ಮಾಡಿದೆ ನಾನು ಬವಾನಾಗೆ ಹಲವಾರು ಸಂದರ್ಭಗಳಲ್ಲಿ ಬಂದಿದ್ದೇನೆ. ಇಲ್ಲಿನ ಶಾಲೆಯ ದುಃಸ್ಥಿತಿಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂದು ಎರಡು ಶಾಲೆಗಳೊಂದಿಗೆ ನನ್ನ ಭರವಸೆಯ ಈಡೇರಿಸಿ ನಾನು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ