ಮುಖ್ಯಮಂತ್ರಿಗಳ ಸಭೆಯಲ್ಲಿ ಶಿಷ್ಟಾಚಾರ ಮುರಿದ ಅರವಿಂದ್ ಕೇಜ್ರಿವಾಲ್; ಏನು ನಡೆಯುತ್ತಿದೆ ಎಂದು ಗದರಿದ ನರೇಂದ್ರ ಮೋದಿ

PM Narendra Modi: ಇದು ಸರಿಯಲ್ಲ, ನಾವು ಸದಾ ಸಂಯಮ ಪಾಲಿಸಬೇಕು ಎಂದು ಮೋದಿ ಹೇಳಿದಾಗ ಕೇಜ್ರಿವಾಲ್ ಕ್ಷಮೆಯಾಚಿಸಿದ್ದಾರೆ.  ಸರಿ ಸರ್, ಇನ್ನು ಮುಂದೆ ನಾನು ಈ ಬಗ್ಗೆ ಎಚ್ಚರ ವಹಿಸುತ್ತೇನೆ ಎಂದು ಕೇಜ್ರಿವಾಲ್ ಮಾತು ಮುಂದುವರಿಸಿದ್ದಾರೆ.

ಮುಖ್ಯಮಂತ್ರಿಗಳ ಸಭೆಯಲ್ಲಿ ಶಿಷ್ಟಾಚಾರ ಮುರಿದ ಅರವಿಂದ್ ಕೇಜ್ರಿವಾಲ್; ಏನು ನಡೆಯುತ್ತಿದೆ ಎಂದು ಗದರಿದ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ

Updated on: Apr 23, 2021 | 4:35 PM

ದೆಹಲಿ: ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ 10 ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿನ ಆಕ್ಸಿಜನ್ ಕೊರತೆ ಬಗ್ಗೆ ವಿವರಿಸಿದ್ದರು. ಈ ವೇಳೆ ಅವರು ಮಾತುಕತೆ ಟಿವಿಯಲ್ಲಿ ಪ್ರಸಾರವಾಗಿದೆ. ಕೋವಿಡ್ ವಿರುದ್ಧ ರಾಷ್ಟ್ರೀಯ ನೀತಿ ಇದ್ದರೆ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬಹುದು ಎಂಬುದು ನನ್ನ ನಂಬಿಕೆ. ನಮ್ಮ ಅಗಲಿದ ಆತ್ಮಗಳು.. ಇಷ್ಟು ಹೇಳುವಾಗ ಮೋದಿ ಪ್ರವೇಶಿಸಿದ್ದಾರೆ. ಅಲ್ಲಿ ಏನು ನಡೆಯುತ್ತಿದೆ? ಇದು ನಮ್ಮ ಸಂಸ್ಕೃತಿ, ಶಿಷ್ಟಾಚಾರಕ್ಕೆ ವಿರುದ್ಧವಾದುದು.ಕೆಲವು ಮುಖ್ಯಮಂತ್ರಿಗಳು ಖಾಸಗಿ ಸಭೆಯನ್ನು ನೇರ ಪ್ರಸಾರ ಮಾಡುತ್ತಿವೆ ಎಂದು ಮೋದಿ ಗದರಿದ್ದಾರೆ.

ಇದು ಸರಿಯಲ್ಲ, ನಾವು ಸದಾ ಸಂಯಮ ಪಾಲಿಸಬೇಕು ಎಂದು ಮೋದಿ ಹೇಳಿದಾಗ ಕೇಜ್ರಿವಾಲ್ ಕ್ಷಮೆಯಾಚಿಸಿದ್ದಾರೆ.  ಸರಿ ಸರ್, ಇನ್ನು ಮುಂದೆ ನಾನು ಈ ಬಗ್ಗೆ ಎಚ್ಚರ ವಹಿಸುತ್ತೇನೆ ಎಂದು ಕೇಜ್ರಿವಾಲ್ ಮಾತು ಮುಂದುವರಿಸಿದ್ದಾರೆ.

ನಮ್ಮನ್ನು ಅಗಲಿದ ಆತ್ಮಗಳು, ಕೊರೊನಾದಿಂದ ಮರಣ ಹೊಂದಿದವರು, ಅವರ ಕುಟುಂಬಗಳಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಪಡೆಯಲಿ. ನನ್ನ ಕಡೆಯಿಂದ ಏನಾದರೂ ತಪ್ಪು ಸಂಭವಿಸಿದಲ್ಲಿ, ನಾನು ಕಠಿಣವಾಗಿ ಏನಾದರೂ ಹೇಳಿದ್ದೇನೆ ಅಥವಾ ನನ್ನ ನಡವಳಿಕೆಯಲ್ಲಿ ಏನಾದರೂ ತಪ್ಪಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ನಮಗೆ ನೀಡಿದ ಸೂಚನೆಗಳನ್ನು ನಾವು ಅನುಸರಿಸುತ್ತೇವೆ ಎಂದಿದ್ದಾರೆ ಕೇಜ್ರಿವಾಲ್.


ಈ ಸಂವಾದವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಉದ್ದೇಶಿಸಿಲ್ಲ. ಕೇಜ್ರಿವಾಲ್ ಅವರು ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಸರ್ಕಾರದ ಮೂಲಗಳು ಪ್ರತಿಕ್ರಿಯಿಸಿವೆ.

ಮೊದಲ ಬಾರಿ ಮುಖ್ಯಮಂತ್ರಿಗಳ ಜತೆ ಪ್ರಧಾನಿಯವರ ಭೇಟಿಯ ಖಾಸಗಿ ಸಂಭಾಷಣೆಗಳನ್ನು ಪ್ರಸಾರ ಮಾಡಲಾಗಿದೆ. ಕೇಜ್ರಿವಾಲ್ ಅವರ ಸಂಪೂರ್ಣ ಭಾಷಣ ಯಾವುದೇ ಪರಿಹಾರಕ್ಕಾಗಿ ಅಲ್ಲ, ಇದು ರಾಜಕೀಯ ಆಟ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಾಗಿದೆ . ಪ್ರಧಾನಿ ಮೋದಿಯವರೊಂದಿಗೆ ಕೊವಿಡ್ ಕುರಿತು ಈ ಹಿಂದೆ ನಡೆದ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಕಳಿಸಿದ್ದರು, ನಗುತ್ತಾ ಕುಳಿತಿದ್ದರು ಎಂದು ಕೇಂದ್ರದ ಮೂಲಗಳು ಆರೋಪಿಸಿವೆ.

ಸಭೆಯ ನಂತರ ಕೇಜ್ರಿವಾಲ್ ಅವರ ಕಚೇರಿ ಹೇಳಿಕೆಯೊಂದನ್ನು ನೀಡಿದ್ದು, ಇಂದು, ಮುಖ್ಯಮಂತ್ರಿಯವರ ಸಂವಾದವನ್ನು ನೇರಪ್ರಸಾರ ಮಾಡಲಾಗಿತ್ತು. ಈ ಸಂವಾದವನ್ನು ನೇರಪ್ರಸಾರ ಮಾಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ, ಲಿಖಿತ ಅಥವಾ ಮೌಖಿಕ ನಿರ್ದೇಶನಗಳು ಬಂದಿರಲಿಲ್ಲ. ಯಾವುದೇ ಗೌಪ್ಯ ಮಾಹಿತಿಯಿಲ್ಲದ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ನಾವು ನೇರ ಪ್ರಸಾರ ಮಾಡಿದ್ದೇವೆ. ಆದಾಗ್ಯೂ, ಯಾವುದೇ ಅನಾನುಕೂಲತೆ ಉಂಟಾಗಿದ್ದಕೆ ಅದಕ್ಕೆ ನಾವು ವಿಷಾದಿಸುತ್ತೇವೆ ಎಂದಿದೆ.

ಇದನ್ನೂ ಓದಿ:   ನರೇಂದ್ರ ಮೋದಿ ಜತೆಗಿನ ಮಾತುಕತೆಯನ್ನು ಪ್ರಸಾರ ಮಾಡಿದ ಅರವಿಂದ್ ಕೇಜ್ರಿವಾಲ್; ರಾಜಕೀಯ ಮಾಡ್ಬೇಡಿ ಎಂದು ಟೀಕಿಸಿದ ಕೇಂದ್ರ

(Delhi CM Arvind Kejriwal breaks Protocol At Covid Meeting PM Narendra Modi Chided )

Published On - 3:43 pm, Fri, 23 April 21

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us