ಒಂದು ಕಡೆ ಅರಣ್ಯ, ಇನ್ನೊಂದು ಕಡೆ ಕಂದಕ: ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕುವುದು ಎಷ್ಟು ಕಷ್ಟ?

ಬುಧವಾರ ಮುಂಜಾನೆ, ಪಡೆಗಳು ಭಯೋತ್ಪಾದಕರ ಮೇಲೆ ದಾಳಿ ಮಾಡಲು ನಿರ್ಧರಿಸಿದವು. ಬೆಟ್ಟದ ತುದಿಗೆ ಹೋಗಲು ಪಡೆಗಳು ತೆಗೆದುಕೊಳ್ಳಬೇಕಾದ ಮಾರ್ಗವು ಸಾಕಷ್ಟು ಸವಾಲಿನದಾಗಿದೆ. ಇದು ತುಂಬಾ ಕಿರಿದಾಗಿದೆ. ಒಂದು ಬದಿಯಲ್ಲಿ ಪರ್ವತಗಳು ಮತ್ತು ದಟ್ಟವಾದ ಕಾಡು ಮತ್ತು ಇನ್ನೊಂದೆಡೆ ಆಳವಾದ ಕಂದಕವಿದೆ. ಸಿಬ್ಬಂದಿಗಳು ಮೇಲೆ ಹತ್ತಲಲು ಪ್ರಾರಂಭಿಸಿದರು. ರಾತ್ರಿಯ ಕತ್ತಲೆ ಅದನ್ನು ಇನ್ನಷ್ಟು ಹದಗೆಡಿಸಿತು ಎಂದು ಮೂಲವೊಂದು ತಿಳಿಸಿದೆ.

ಒಂದು ಕಡೆ ಅರಣ್ಯ, ಇನ್ನೊಂದು ಕಡೆ ಕಂದಕ: ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕುವುದು ಎಷ್ಟು ಕಷ್ಟ?
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆ
ರಶ್ಮಿ ಕಲ್ಲಕಟ್ಟ

Updated on: Sep 16, 2023 | 3:38 PM

ದೆಹಲಿ ಸೆಪ್ಟೆಂಬರ್  16: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತ್‌ನಾಗ್ (Anantnag) ಜಿಲ್ಲೆಯಲ್ಲಿ ಒಂದೆಡೆ ದಟ್ಟ ಅರಣ್ಯ ಮತ್ತು ಇನ್ನೊಂದು ಕಡೆ ಆಳವಾದ ಕಂದಕ. ಅಲ್ಲಿ ಅವಿತರಿರುವ ಉಗ್ರರಿಗೆ ಶಸ್ತ್ರಾಸ್ತ್ರ, ಮದ್ದುಗುಂಡು ಅಥವಾ ಆಹಾರದ ಕೊರತೆ ಇಲ್ಲ. ಇವರನ್ನು ನಿರ್ನಾಮ ಮಾಡಲು ಭದ್ರತಾ ಪಡೆ ಇಲ್ಲಿ ಹೋರಾಡುತ್ತಿದೆ. ಭಯೋತ್ಪಾದಕರು ಬೆಟ್ಟದ ಮೇಲಿರುವ ಗುಹೆಯೊಂದರಲ್ಲಿ ಅಡಗಿಕೊಂಡಿರುವುದರಿಂದ ಸಿಬ್ಬಂದಿಗಳು ಗುಡ್ಡದ ಮೇಲೆ ಹೋರಾಟ ಮಾಡಬೇಕಿದೆ. ಅಲ್ಲಿಗೆ ಹೋಗಲು ಕಿರಿದಾದ, ಕೆಳಗೆ ಆಳ ಕಂದಕವಿರುವ ಒಂದೇ ಒಂದು ಮಾರ್ಗವಿದೆ. ಅಲ್ಲಿ ಹೆಚ್ಚಿನ ಭದ್ರತೆ ಇದೆ ಎಂದು ಭದ್ರತಾ ಪಡೆ ಎನ್​​ಡಿಟಿವಿಗೆ ತಿಳಿಸಿದೆ. ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹುಮಾಯೂನ್ ಭಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಅನಂತ್​​ನಾ​ ಗ್​​ನಲ್ಲಿ ಉಗ್ರರ ವಿರುದ್ಧ ಹೋರಾಟ ಹೇಗೆ ನಡೆಯುತ್ತಿದೆ? ಇಲ್ಲಿದೆ ವಿವರವಾದ ಮಾಹಿತಿ

ಇಲ್ಲಿಂದ ಆರಂಭ

ಮಂಗಳವಾರ ರಾತ್ರಿ ಕೋಕರ್‌ನಾಗ್‌ನ ಗದುಲ್ ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಪಡೆಗಳಿಗೆ ಮೊದಲು ಗುಪ್ತಚರ ಮಾಹಿತಿ ಸಿಕ್ಕಿತು ಎಂದು ಮೂಲಗಳು ತಿಳಿಸಿವೆ. ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಆದರೆ ಭಯೋತ್ಪಾದಕರು ಪತ್ತೆಯಾಗಲಿಲ್ಲ. ನಂತರ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯ ಜಂಟಿ ತಂಡಕ್ಕೆ ಭಯೋತ್ಪಾದಕರು ಬೆಟ್ಟದ ಮೇಲಿರುವ ಮಾಹಿತಿ ಸಿಕ್ಕಿತು.

ದಾಳಿ ಪ್ರಾರಂಭ

ಬುಧವಾರ ಮುಂಜಾನೆ, ಪಡೆಗಳು ಭಯೋತ್ಪಾದಕರ ಮೇಲೆ ದಾಳಿ ಮಾಡಲು ನಿರ್ಧರಿಸಿದವು. ಬೆಟ್ಟದ ತುದಿಗೆ ಹೋಗಲು ಪಡೆಗಳು ತೆಗೆದುಕೊಳ್ಳಬೇಕಾದ ಮಾರ್ಗವು ಸಾಕಷ್ಟು ಸವಾಲಿನದಾಗಿದೆ. ಇದು ತುಂಬಾ ಕಿರಿದಾಗಿದೆ. ಒಂದು ಬದಿಯಲ್ಲಿ ಪರ್ವತಗಳು ಮತ್ತು ದಟ್ಟವಾದ ಕಾಡು ಮತ್ತು ಇನ್ನೊಂದೆಡೆ ಆಳವಾದ ಕಂದಕವಿದೆ. ಸಿಬ್ಬಂದಿಗಳು ಮೇಲೆ ಹತ್ತಲಲು ಪ್ರಾರಂಭಿಸಿದರು. ರಾತ್ರಿಯ ಕತ್ತಲೆ ಅದನ್ನು ಇನ್ನಷ್ಟು ಹದಗೆಡಿಸಿತು ಎಂದು ಮೂಲವೊಂದು ತಿಳಿಸಿದೆ.

ಪಡೆಗಳು ಗುಹೆಯನ್ನು ಸಮೀಪಿಸುತ್ತಿದ್ದಂತೆ, ಭಯೋತ್ಪಾದಕರು ಏಕಾಏಕಿ ಗುಂಡು ಹಾರಿಸಲು ಪ್ರಾರಂಭಿಸಿದರು. ಕಿರಿದಾದ ಹಾದಿ, ಯಾವುದೇ ರಕ್ಷಣಾ ಕವಚ ಇಲ್ಲದೆ, ತಿರುಗಿದರೆ ಕೆಳಕ್ಕೆ ಬೀಳುವ ಅಪಾಯ ಒಂದಡೆ. ಅತ್ತ ಹೋಗಲಾರದೆ ಇತ್ತ ಬರಲಾರದೇ ವಿರುದ್ಧ ದಾಳಿ ನಡೆಸಲೂ ಆಗದ ಸ್ಥಿತಿಯಲ್ಲಿ ಸಿಬ್ಬಂದಿ ಸಿಲುಕಿಕೊಂಡಿದ್ದರು.

19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿಯಾಗಿದ್ದ ಕರ್ನಲ್ ಸಿಂಗ್, ಕಂಪನಿಯ ಕಮಾಂಡರ್ ಮೇಜರ್ ಧೋಂಚಕ್ – ಇಬ್ಬರೂ ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತರು, ಅದರೊಂದಿಗೆ ಡೆಪ್ಯುಟಿ ಎಸ್‌ಪಿ ಭಟ್ ಅವರು ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದರು. ಗುಂಡುಗಳ ಸುರಿಮಳೆ ಮತ್ತು ಸವಾಲುಗಳಿಂದ ಕೂಡಿದ ಮಾರ್ಗದಲ್ಲಿ ಸಿಲುಕಿದ ಅವರನ್ನು ಅಲ್ಲಿಂದ ಹೊರ ತರುವುದೂ ಕಷ್ಟವಾಗಿತ್ತು.

ಮುಖಾಮುಖಿ

ಎನ್‌ಕೌಂಟರ್ ಪ್ರಾರಂಭವಾಗಿ ಸುಮಾರು 72 ಗಂಟೆಗಳು ಕಳೆದಿವೆ. ಭದ್ರತಾ ಪಡೆಗಳು ಬೆಟ್ಟವನ್ನು ಸುತ್ತುವರೆದಿವೆ. ಡ್ರೋನ್‌ಗಳ ಮೂಲಕ ಸ್ಫೋಟಕಗಳನ್ನು ಬೀಳಿಸಲಾಗುತ್ತಿದೆ,ರಾಕೆಟ್ ಲಾಂಚರ್‌ಗಳನ್ನು ಬಳಸಲಾಗುತ್ತಿದೆ. ಸಿಬ್ಬಂದಿ ಗುಂಡು ಹಾರಿಸುತ್ತಿದ್ದಾರೆ. ಆದರೆ ಈ ಪ್ರದೇಶದ ಹಾದಿಯು ದುರ್ಗಮ ಆಗಿರುವುದರಿಂದ ಸೇನೆಯು ಈ ಪ್ರದೇಶದ ಪ್ರಾಬಲ್ಯವನ್ನು ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅನಂತನಾಗ್ ಎನ್‌ಕೌಂಟರ್: ಹುತಾತ್ಮ ಕರ್ನಲ್ ಮನ್‌ಪ್ರೀತ್ ಸಿಂಗ್​​ಗೆ ಮಗನ ಸೆಲ್ಯೂಟ್, ಕಂಬನಿಯ ವಿದಾಯ

ಅವರು ಸಾಮಾನ್ಯ ಭಯೋತ್ಪಾದಕರಲ್ಲ

ಮೂಲಗಳ ಪ್ರಕಾರ ಭಯೋತ್ಪಾದಕರ ಸಂಖ್ಯೆ ಎರಡು-ಮೂರಿಗಿಂತ ಹೆಚ್ಚಿರುವ ಸಾಧ್ಯತೆ ಇದೆ. ಇವರಲ್ಲಿ ಕಳೆದ ವರ್ಷ ಲಷ್ಕರ್-ಎ-ತೊಯ್ಬಾಗೆ ಸೇರಿದ್ದ ಉಝೈರ್ ಖಾನ್ ಕೂಡ ಸೇರಿದ್ದಾನೆ. ಭಯೋತ್ಪಾದಕರು ಯಾವ ಪ್ರದೇಶದ ಲಾಭ ಪಡೆಯುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಅವರ ಬಳಿ ಇದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯ ಭಯೋತ್ಪಾದಕರು ಇಷ್ಟು ದಿನ ಎನ್‌ಕೌಂಟರ್ ಅನ್ನು ವಿಸ್ತರಿಸಲು ಸಾಧ್ಯವಿಲ್ಲ. ಅವರು ಚೆನ್ನಾಗಿ ತರಬೇತಿ ಪಡೆದಿದ್ದಾರೆ. ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಮಾಹಿತಿದಾರರು ಪಡೆಗಳ ಚಲನವಲನಗಳನ್ನು ಸೋರಿಕೆ ಮಾಡಿರಬಹುದು. ಅದು ಏನೇ ಇರಲಿ, ಇದು ಕೊನೆಗೊಳ್ಳುತ್ತದೆ. ಕಾರ್ಯಾಚರಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಮೂಲವೊಂದು ತಿಳಿಸಿದೆ.

‘ಹೊಂಚುದಾಳಿ ಕಲ್ಪನೆ’

ಓರ್ವ ಯೋಧ ಇನ್ನೂ ನಾಪತ್ತೆಯಾಗಿದ್ದು, ಕನಿಷ್ಠ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾಶ್ಮೀರ) ವಿಜಯ್ ಕುಮಾರ್ ಅವರು ನಿವೃತ್ತ ಪೊಲೀಸ್ ಮತ್ತು ಸೇನಾ ಅಧಿಕಾರಿಗಳಿಗೆ “ಹೊಂಚುದಾಳಿ ಊಹೆ” ಯೊಂದಿಗೆ ಹೋಗುವುದನ್ನು ತಪ್ಪಿಸಲು ಸಲಹೆ ನೀಡಿದರು.

ನಿವೃತ್ತ ಪೊಲೀಸ್/ಸೇನೆ ಅಧಿಕಾರಿಗಳು ‘ಹೊಂಚುದಾಳಿ ಊಹೆ’ಯನ್ನು ತಪ್ಪಿಸಬೇಕು. ಇದು ನಿರ್ದಿಷ್ಟ ಇನ್‌ಪುಟ್-ಆಧಾರಿತ ಕಾರ್ಯಾಚರಣೆ ಆಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸಿಕ್ಕಿಬಿದ್ದಿರುವ ಎಲ್ಲಾ 2-3 ಭಯೋತ್ಪಾದಕರನ್ನು ಹತ್ಯೆ ಮಾಡಲಾಗುವುದು ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us