Karpoori Thakur: ಕರ್ಪೂರಿ ಠಾಕೂರ್​​ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ

|

Updated on: Jan 23, 2024 | 8:49 PM

ಕರ್ಪೂರಿ ಠಾಕೂರ್ ಅವರಿಗೆ (ಮರಣೋತ್ತರ) ಭಾರತ ರತ್ನ ಪ್ರಶಸ್ತಿ ನೀಡಲು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ" ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯು ಠಾಕೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದ ಒಂದು ದಿನ ಮೊದಲು ಹೇಳಿದೆ. ಕರ್ಪೂರಿ ಠಾಕೂರ್ ಡಿಸೆಂಬರ್ 1970 ಮತ್ತು ಜೂನ್ 1971 ರ ನಡುವೆ ಹಾಗೂ ಡಿಸೆಂಬರ್ 1977 -ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು

Karpoori Thakur: ಕರ್ಪೂರಿ ಠಾಕೂರ್​​ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ
Follow us on

ದೆಹಲಿ ಜನವರಿ 23: ಬಿಹಾರದ (Bihar) ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್​​ಗೆ(Karpoori Thakur) ಮರಣೋತ್ತರ ಭಾರತ ರತ್ನ ಪ್ರಶಸ್ತಿ (Bharat Ratna) ಘೋಷಣೆ ಮಾಡಲಾಗಿದೆ. ಠಾಕೂರ್ ಅವರು ಹಿಂದುಳಿದ ವರ್ಗಗಳ ಹೋರಾಟಕ್ಕಾಗಿ ಹೆಸರುವಾಸಿಯಾಗಿದ್ದರು. ಕರ್ಪೂರಿ ಎರಡು ಬಾರಿ ಬಿಹಾರದ ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿ ಮತ್ತು ದಶಕಗಳ ಕಾಲ ವಿರೋಧ ಪಕ್ಷದ ಶಾಸಕ ಮತ್ತು ನಾಯಕರಾಗಿದ್ದರು. 1952 ರಲ್ಲಿ ಮೊದಲ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಗೆದ್ದ ನಂತರ ಅವರು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋತಿಲ್ಲ.

ಕರ್ಪೂರಿ ಠಾಕೂರ್ ಅವರಿಗೆ (ಮರಣೋತ್ತರ) ಭಾರತ ರತ್ನ ಪ್ರಶಸ್ತಿ ನೀಡಲು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ” ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯು ಠಾಕೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದ ಒಂದು ದಿನ ಮೊದಲು ಹೇಳಿದೆ.

ಕರ್ಪೂರಿ ಠಾಕೂರ್ ಡಿಸೆಂಬರ್ 1970 ಮತ್ತು ಜೂನ್ 1971 ರ ನಡುವೆ ಹಾಗೂ ಡಿಸೆಂಬರ್ 1977 -ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು.  ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ರಾಜ್ಯಸಭಾ ಸಂಸದರಾಗಿದ್ದಾರೆ. ಮುಖ್ಯಮಂತ್ರಿಯಾಗಿ, ಠಾಕೂರ್ ಅವರು ಮುಂಗೇರಿ ಲಾಲ್ ಆಯೋಗದ ವರದಿಯನ್ನು ಜಾರಿಗೆ ತರಲು ನಿರ್ಧರಿಸಿದರು, ಅದು ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಸ್ಥಾಪಿಸಲು ಶಿಫಾರಸು ಮಾಡಿತು.

ಮೋದಿ ಟ್ವೀಟ್

ಸಾಮಾಜಿಕ ನ್ಯಾಯದ ದಾರಿದೀಪ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಜಿ ಮತ್ತು ಅದೂ ಅವರ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ. ಈ ಪ್ರತಿಷ್ಠಿತ ಮನ್ನಣೆಯು ಅಂಚಿನಲ್ಲಿರುವವರ ಪರವಾಗಿ ಮತ್ತು ಸಮಾನತೆ ಮತ್ತು ಸಬಲೀಕರಣದ ಧೀಮಂತರಾಗಿ ಅವರ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.

ದೀನದಲಿತರನ್ನು ಮೇಲಕ್ಕೆತ್ತಲು ಅವರ ಅಚಲ ಬದ್ಧತೆ ಮತ್ತು ಅವರ ದೂರದೃಷ್ಟಿಯ ನಾಯಕತ್ವವು ಭಾರತದ ಸಾಮಾಜಿಕ-ರಾಜಕೀಯದಲ್ಲಿ ಅಳಿಸಲಾಗದ ಗುರುತು ಹಾಕಿದೆ. ಈ ಪ್ರಶಸ್ತಿಯು ಅವರ ಗಮನಾರ್ಹ ಕೊಡುಗೆಗಳನ್ನು ಗೌರವಿಸುವುದು ಮಾತ್ರವಲ್ಲದೆ ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜವನ್ನು ರಚಿಸುವ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ಪೂರಿ ಠಾಕೂರ್ ಯಾರು?

ಕರ್ಪೂರಿ ಠಾಕೂರ್, ಸಾಮಾಜಿಕ ನ್ಯಾಯಕ್ಕೆ ಸಮಾನಾರ್ಥಕವಾದ ಹೆಸರು. ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳ ಪರವಾಗಿ ದನಿಯೆತ್ತಿದ ಠಾಕೂರ್, ಬಿಹಾರದ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಉಳಿದಿದ್ದಾರೆ. ನಾಯ್ (ಕ್ಷೌರಿಕ) ಸಮುದಾಯದಲ್ಲಿ ಗೋಕುಲ್ ಠಾಕೂರ್ ಮತ್ತು ರಾಮ್ದುಲಾರಿ ದೇವಿ ದಂಪತಿಗೆ ಜನಿಸಿದ ಕರ್ಪೂರಿ ಠಾಕೂರ್ ಅವರಿಂದಾಗಿ ಈಗ ಕರ್ಪೂರಿ ಗ್ರಾಮ ಎಂದು ಕರೆಯಲ್ಪಡುವ ಪಿತೌಂಜಿಯಾ ಗ್ರಾಮ ಅವರನ್ನು ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ಕರೆದೊಯ್ದಿತ್ತು.

1970 ರ ದಶಕದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿಯು ವಿಶೇಷವಾಗಿ ಸಮಾಜದ ವಂಚಿತ ವರ್ಗಗಳಿಗೆ ನಾಂದಿ ಹಾಡಿತು. ಹೃದಯವಂತ ಸಮಾಜವಾದಿ, ಠಾಕೂರ್ ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ರಾಷ್ಟ್ರೀಯವಾದಿ ವಿಚಾರಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು. ನಂತರ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟವನ್ನು ಸೇರಿದರು. ಅವರ ರಾಜಕೀಯ ಸಿದ್ಧಾಂತವು ‘ಲೋಹಿಯಾ’ ಚಿಂತನೆಯ ಶಾಲೆಯಿಂದ ಮತ್ತಷ್ಟು ರೂಪುಗೊಂಡಿತು, ಇದು ಕೆಳಜಾತಿಗಳ ಸಬಲೀಕರಣಕ್ಕೆ ಒತ್ತು ನೀಡಿತು.

ಸರ್ಕಾರಿ ಸೇವೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದ್ದ ಮೀಸಲಾತಿಗಾಗಿ “ಕರ್ಪೂರಿ ಠಾಕೂರ್ ಫಾರ್ಮುಲಾ” ವನ್ನು ಪರಿಚಯಿಸಿದ್ದು ಠಾಕೂರ್ ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ. ನವೆಂಬರ್ 1978 ರಲ್ಲಿ, ಅವರು ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ 26% ಮೀಸಲಾತಿಯನ್ನು ಜಾರಿಗೆ ತಂದರು, ಇದು 1990 ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸುಗಳಿಗೆ ವೇದಿಕೆಯನ್ನು ಸಿದ್ಧಪಡಿಸಿತು. ಈ ನೀತಿಯು ಹಿಂದುಳಿದ ವರ್ಗಗಳಿಗೆ ಅಧಿಕಾರ ನೀಡುವುದಲ್ಲದೆ, ಹಿಂದಿ ಹೃದಯಭೂಮಿಯಲ್ಲಿ ರಾಜಕೀಯದ ಮುಖವನ್ನು ಬದಲಿಸಿದ ಪ್ರಾದೇಶಿಕ ಪಕ್ಷಗಳ ಉದಯಕ್ಕೂ ಕಾರಣವಾಯಿತು.

ಶಿಕ್ಷಣ ಮಂತ್ರಿಯಾಗಿ, ಠಾಕೂರ್ ಅವರು ಮೆಟ್ರಿಕ್ಯುಲೇಷನ್ ಹಂತದಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯ ವಿಷಯವಾಗಿ ರದ್ದುಗೊಳಿಸಿದರು.ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೇಕ ವಿದ್ಯಾರ್ಥಿಗಳಿಗೆ ತಡೆಗೋಡೆ ಎಂದು ಗುರುತಿಸಿದರು. ಅವರು ಹಲವಾರು ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದರು, ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ, ಮತ್ತು 8 ನೇ ತರಗತಿಯವರೆಗಿನ ಶಿಕ್ಷಣವನ್ನು ಉಚಿತವಾಗಿ ಮಾಡಿದರು, ಡ್ರಾಪ್ಔಟ್ ದರವನ್ನುಗಣನೀಯವಾಗಿ ಕಡಿಮೆ ಮಾಡಿದರು.

ಇದನ್ನೂ ಓದಿ: ತಾಯಿ ಕಳೆದುಕೊಂಡ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ

ಠಾಕೂರ್ ಅವರ ಪರಂಪರೆಯು ಶೈಕ್ಷಣಿಕ ಸುಧಾರಣೆಗಳನ್ನು ಮೀರಿ ವಿಸ್ತರಿಸಿದೆ. ಅವರು ಪ್ರಮುಖ ಭೂ ಸುಧಾರಣೆಗಳನ್ನು ಪ್ರಾರಂಭಿಸಿದರು, ಜಮೀನ್ದಾರರಿಂದ ಭೂರಹಿತ ದಲಿತರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಕಾರಣವಾಯಿತು. ಅವರಿಗೆ “ಜನನಾಯಕ್ ” ಅಥವಾ ಪೀಪಲ್ಸ್ ಹೀರೋ ಎಂದು ಗುರುತಿಸಿಕೊಂಡರು. ಸವಲತ್ತು ಪಡೆದ ವರ್ಗದಿಂದ ಗಮನಾರ್ಹ ಪ್ರತಿರೋಧ ಮತ್ತು ನಿಂದನೆಯನ್ನು ಎದುರಿಸುತ್ತಿದ್ದರೂ, ಠಾಕೂರ್ ಅವರ ನೀತಿಗಳು ಭವಿಷ್ಯದ ನಾಯಕರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸುವುದನ್ನು ಮುಂದುವರಿಸಲು ಅಡಿಪಾಯವನ್ನು ಹಾಕಿದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 pm, Tue, 23 January 24