Hathras stampede: ಹಾಥರಸ್ ಕಾಲ್ತುಳಿತ: 6 ಮಂದಿ ಬಂಧನ; ಪ್ರಮುಖ ಆರೋಪಿ ಪತ್ತೆಗೆ ₹1 ಲಕ್ಷ ಬಹುಮಾನ ಘೋಷಿಸಿದ ಯುಪಿ ಪೊಲೀಸ್

ಉತ್ತರ ಪ್ರದೇಶದ ಹಾಥರಸ್​​ನಲ್ಲಿ ಮಂಗಳವಾರ ಸತ್ಸಂಗ ವೇಳೆ ಕಾಲ್ತುಳಿತ ಸಂಭಿವಿಸಿ 121 ಜನರ ಸಾವಿಗೀಡಾಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ನಾಲ್ಕು ಪುರುಷರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ

Hathras stampede: ಹಾಥರಸ್ ಕಾಲ್ತುಳಿತ: 6 ಮಂದಿ ಬಂಧನ; ಪ್ರಮುಖ ಆರೋಪಿ ಪತ್ತೆಗೆ ₹1 ಲಕ್ಷ ಬಹುಮಾನ ಘೋಷಿಸಿದ ಯುಪಿ ಪೊಲೀಸ್
ಯುಪಿ ಪೊಲೀಸ್
ರಶ್ಮಿ ಕಲ್ಲಕಟ್ಟ

Updated on: Jul 04, 2024 | 4:45 PM

ಲಕ್ನೋ ಜುಲೈ 04: 121 ಜನರ ಸಾವಿಗೆ ಕಾರಣವಾದ ಹಾಥರಸ್ ಕಾಲ್ತುಳಿತ(Hathras stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ನಾಲ್ಕು ಪುರುಷರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ (Uttar Pradesh) ಪೊಲೀಸರು ಗುರುವಾರ ತಿಳಿಸಿದ್ದಾರೆ. ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ (Prakash Madhukar)ಬಂಧನಕ್ಕೆ ಸಹಾಯ ಮಾಡುವವರಿಗೆ ₹1 ಲಕ್ಷ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದಾರೆ. ಬಂಧಿತರು ‘ಸೇವಾದಾರರು’ (ಸತ್ಸಂಗ ಸ್ವಯಂಸೇವಕರು) ಎಂದು ಪೊಲೀಸರು ತಿಳಿಸಿದ್ದಾರೆ.

“ಕಾಲ್ತುಳಿತ ಸಂಭವಿಸಿದಾಗ ಈಗ ಬಂಧಿಸಲಾಗಿರುವ ಆರು ಸೇವಕರು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದರು. ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಂಧನಕ್ಕೆ ₹1 ಲಕ್ಷ ಬಹುಮಾನ ಘೋಷಿಸಲಾಗಿದೆ. ಶೀಘ್ರದಲ್ಲೇ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಲಿದೆ. ಪಿತೂರಿಯಿಂದ ಈ ಘಟನೆ ಸಂಭವಿಸಿದ್ದರೆ ನಾವು ತನಿಖೆ ನಡೆಸುತ್ತೇವೆ ಎಂದು ಐಜಿ (ಅಲಿಗಢ ರೇಂಜ್) ಶಲಭ್ ಮಾಥುರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಧಾರ್ಮಿಕ ಕಾರ್ಯಕ್ರಮದ ಆಯೋಜಕರು ಪೊಲೀಸರನ್ನು ಅನುಮತಿಸಲಿಲ್ಲ ಏಕೆಂದರೆ ಅವರೇ ವ್ಯವಸ್ಥೆ ಮಾಡಿದ್ದರು ಎಂದು ಮಾಥುರ್ ಹೇಳಿದ್ದಾರೆ.

“ನಾವು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದೇವೆ. ಸತ್ಸಂಗದ ಸ್ವಯಂಸೇವಕರು ಸತ್ಸಂಗ ಮುಗಿದ ನಂತರ ಜನಸಂದಣಿಯನ್ನು ನಿಭಾಯಿಸುವಾಗ ನಿರ್ಲಕ್ಷ್ಯ ತೋರಿದ್ದಾರೆ. ವಿಷಯಗಳು ಕೈ ಮೀರುತ್ತಿದ್ದಂತೆ, ಅವರು ಪರಾರಿಯಾಗಿದ್ದಾರೆ. ಘಟನೆಯ ಹಿಂದೆ ಪಿತೂರಿಯ ಯಾವುದೇ ಕೋನವಿದೆಯೇ ಎಂದು ಸಹ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಮಾಥುರ್ ಹೇಳಿದರು.

ಧಾರ್ಮಿಕ ಬೋಧಕ ಭೋಲೆ ಬಾಬಾ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವಾದ ‘ಸತ್ಸಂಗ’ಕ್ಕಾಗಿ ಹಾಥರಸ್ ಜಿಲ್ಲೆಯ ಸಿಕಂದರಾ ರಾವು ಪ್ರದೇಶದ ರಾತಿ ಭಾನ್‌ಪುರ್ ಗ್ರಾಮದಲ್ಲಿ ವಿಶೇಷವಾಗಿ ಹಾಕಲಾದ ಟೆಂಟ್‌ನಲ್ಲಿ ಸಾವಿರಾರು ಜನರು ಜಮಾಯಿಸಿದ ಭೀಕರ ಘಟನೆ ಮಂಗಳವಾರ ನಡೆದಿದೆ. ಪೊಲೀಸರ ಪ್ರಕಾರ, ಭಾರೀ ಜನಸಂದಣಿ, ಹೊರಗೆ ಹೋಗಲು ವ್ಯವಸ್ಥೆ ಇಲ್ಲದೇ ಇರುವುದು , ಕೆಟ್ಟ ಹವಾಮಾನ ಮತ್ತು ಇತರ ಅಂಶಗಳು ಹೆಚ್ಚಿನ ಸಾವಿನ ಸಂಖ್ಯೆಗೆ ಕಾರಣವಾಗಿರಬಹುದು.

ಬುಧವಾರ, ಉತ್ತರ ಪ್ರದೇಶ ಪೊಲೀಸರು ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಕೇವಲ 80,000 ಮಂದಿಗೆ ಮಾತ್ರ ಅನುಮತಿ ನೀಡಿದ ಕಾರ್ಯಕ್ರಮಕ್ಕೆ 2.5 ಲಕ್ಷ ಜನರು ಸೇರುವ ಮೂಲಕ ಸಾಕ್ಷ್ಯಗಳನ್ನು ಮರೆಮಾಡಿದ್ದಾರೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಕಾಲ್ತುಳಿತಕ್ಕೆ ಕಾರಣವಾದ ‘ಸತ್ಸಂಗ’ದ ಹಿಂದಿನ ವ್ಯಕ್ತಿ ಭೋಲೆ ಬಾಬಾನನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿಲ್ಲ.

ಇದನ್ನೂ ಓದಿ: Hemant Soren: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಇಂದು ಸಂಜೆ ಹೇಮಂತ್ ಸೋರೆನ್ ಪ್ರಮಾಣ ವಚನ ಸ್ವೀಕಾರ

ಐಜಿ ಮಾಥುರ್ ಪ್ರಕಾರ, ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ ಏಕೆಂದರೆ ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಕೇಳಿಲ್ಲ.

“ಆದಾಗ್ಯೂ, ಅಗತ್ಯವಿದ್ದಲ್ಲಿ ಭೋಲೆ ಬಾಬಾನನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ, ಆದರೆ ಇದು ಎಲ್ಲಾ ತನಿಖೆಯ ಹಾದಿಯನ್ನು ಅವಲಂಬಿಸಿರುತ್ತದೆ. ನಾವು ಅವರ ಅಪರಾಧದ ಹಿಂದಿನ ವರದಿಗಳನ್ನು ಸಹ ತನಿಖೆ ಮಾಡುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Thu, 4 July 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us