Himachal Pradesh Political Crisis: ಯಾರೂ ನನಗೆ ರಾಜೀನಾಮೆ ನೀಡುವಂತೆ ಕೇಳಿಲ್ಲ, ನಾನೂ ಕೊಟ್ಟಿಲ್ಲ: ಹಿಮಾಚಲ ಸಿಎಂ ಸುಖು

ಯಾರೂ ರಾಜೀನಾಮೆ ನೀಡುವಂತೆ ನನ್ನನ್ನು ಕೇಳಿಲ್ಲ, ನಾನು ರಾಜೀನಾಮೆ ನೀಡಲು ಮುಂದಾಗಿಲ್ಲ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಈ ಸುದ್ದಿ ಎಲ್ಲಿಂದ ಬಂತು ಎಂದು ತಿಳಿದಿಲ್ಲ, ಸದನದಲ್ಲಿ ನಮಗೆ ಬಹುಮತವಿದೆ ಎಂದು ಹೇಳಿದರು.

Himachal Pradesh Political Crisis: ಯಾರೂ ನನಗೆ ರಾಜೀನಾಮೆ ನೀಡುವಂತೆ ಕೇಳಿಲ್ಲ, ನಾನೂ ಕೊಟ್ಟಿಲ್ಲ: ಹಿಮಾಚಲ ಸಿಎಂ ಸುಖು
ಸುಖ್ವಿಂದರ್ ಸಿಂಗ್ ಸುಖು
Image Credit source: Jagran Josh

Updated on: Feb 28, 2024 | 2:20 PM

‘‘ನಾನು ರಾಜೀನಾಮೆ ನೀಡಿಲ್ಲ, ನನ್ನ ಬಳಿ ರಾಜೀನಾಮೆ ನೀಡಿ ಎಂದು ಯಾರೂ ಕೇಳಿಲ್ಲ, ವದಂತಿಯನ್ನು ನಂಬಬೇಡಿ’’ ಎಂದು ಹಿಮಾಚಲ ಪ್ರದೇಶ(Himachal Pradesh)ದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು(Sukhvinder Singh Sukhu) ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್​ ಪಕ್ಷದ ಆರು ಮಂದಿ ಶಾಸಕರು ಬಿಜೆಪಿಗೆ ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಉರುಳಲಿದೆ ಎನ್ನುವ ಮಾತುಗಳು ಕೇಳಿಬಂದಿತ್ತು.

ಅಭ್ಯರ್ಥಿ ಹರ್ಷ್ ಮಹಾಜನ್ ಅವರು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವರನ್ನು ಆಡಳಿತಾರೂಢ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ ಕಾರಣ ಸುಲಭವಾಗಿ ಸೋಲಿಸಿದರು. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಮತ್ತು ಬಿಜೆಪಿ 25 ಶಾಸಕರನ್ನು ಹೊಂದಿದೆ. ಉಳಿದ ಮೂರು ಸ್ಥಾನಗಳನ್ನು ಸ್ವತಂತ್ರರು ಹೊಂದಿದ್ದಾರೆ.

ಒಂದು ಕಡೆ ಬಿಜೆಪಿಯು ಅವಿಶ್ವಾಸ ನಿರ್ಣಯಕ್ಕೆ ಪಟ್ಟು ಹಿಡಿದಿದೆ. ಈ ನಡುವೆ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ 15 ಬಿಜೆಪಿ ಶಾಸಕರನ್ನು ಸ್ಪೀಕರ್​ ವಿಧಾನಸಭೆಯಿಂದ ಅಮಾನತುಗೊಳಿಸಿದ್ದಾರೆ. ಮಾಜಿ ಸಿಎಂ ಜೈ ರಾಮ್ ಠಾಕೂರ್, ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ, ಲೋಕೇಂದರ್ ಕುಮಾರ್, ವಿನೋದ್ ಕುಮಾರ್, ಹನ್ಸ್ ರಾಜ್, ಜನಕ್ ರಾಜ್, ಬಲ್ಬೀರ್ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದರ್ ಶೋರಿ, ದೀಪ್ ರಾಜ್, ಪುರಣ್ ಠಾಕೂರ್, ಇಂದರ್ ಸಿಂಗ್ ಗಾಂಧಿ, ದಿಲೀಪ್ ಠಾಕೂರ್ ಮತ್ತು ಇಂದರ್ ಸಿಂಗ್ ಗಾಂಧಿ ಸೇರಿದ್ದಾರೆ.

ಮತ್ತಷ್ಟು ಓದಿ: Himachal Pradesh Political Crisis: ಜೈರಾಮ್ ಠಾಕೂರ್ ಸೇರಿ 15 ಮಂದಿ ಶಾಸಕರು ವಿಧಾನಸಭೆಯಿಂದ ಅಮಾನತು

ಶಾಸಕರ ಅಮಾನತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ: ಜೈ ರಾಮ್ ಠಾಕೂರ್
ಬಿಜೆಪಿ ಶಾಸಕರನ್ನು ಸದನದಿಂದ (ಹಿಮಾಚಲ ಪ್ರದೇಶ ಅಸೆಂಬ್ಲಿ) ಅಮಾನತುಗೊಳಿಸಿದ ರೀತಿ, ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದ್ದರೆ ಈ ನಡೆಯನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಸ್ಪೀಕರ್ ಸುಳ್ಳುಗಳನ್ನು ಮಂಡಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಬಿಜೆಪಿ ನಾಯಕ ಜೈ ರಾಮ್ ಠಾಕೂರ್ ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ಆರು ಕಾಂಗ್ರೆಸ್ ಶಾಸಕರು ಬುಧವಾರ ಹರಿಯಾಣದಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ರಾಜಿಂದರ್ ರಾಣಾ ಮತ್ತು ರವಿ ಠಾಕೂರ್ ಸೇರಿದಂತೆ ಶಾಸಕರು ಕಳೆದ ರಾತ್ರಿ ಇಲ್ಲಿನ ಹೋಟೆಲ್‌ನಲ್ಲಿ ಕಳೆದರು ಮತ್ತು ಬುಧವಾರ ಬೆಳಿಗ್ಗೆ ಬಿಜೆಪಿ ಆಡಳಿತವಿರುವ ಹರಿಯಾಣದ ಪಂಚಕುಲದ ತೌ ದೇವಿ ಲಾಲ್ ಕ್ರೀಡಾಂಗಣದಿಂದ ಚಾಪರ್‌ನಲ್ಲಿ ಹೊರಟರು ಎಂದು ಮೂಲಗಳು ತಿಳಿಸಿವೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆವರಿಸಿರುವ ಬಿಕ್ಕಟ್ಟಿನ ನಡುವೆ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us