ಶಿಕ್ಷಣದಲ್ಲಿ ಹಿಜಾಬ್​ ಅಷ್ಟೊಂದು ಮುಖ್ಯವಾಗಿದ್ದರೆ, ರಾಹುಲ್​ ಗಾಂಧಿಯೇ ಅದನ್ನು ಕಡ್ಡಾಯಗೊಳಿಸಬಹುದಿತ್ತಲ್ಲ?!-ಬಿಜೆಪಿ ತಿರುಗೇಟು

| Updated By: Lakshmi Hegde

Updated on: Feb 05, 2022 | 6:04 PM

ಕಾಂಗ್ರೆಸ್​ನ ಸಹ ಮಾಲೀಕರಾದ ರಾಹುಲ್​ ಗಾಂಧಿಯವರು ಶಿಕ್ಷಣದಲ್ಲೂ ಕೋಮುವಾದ ಸೃಷ್ಟಿಸುವ ಮೂಲಕ, ಈ ದೇಶದ ಭವಿಷ್ಯಕ್ಕೆ ತಾವು ಮಾರಕ ಎಂಬುದನ್ನು ತೋರಿಸುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಹೇಳಿದೆ.

ಶಿಕ್ಷಣದಲ್ಲಿ ಹಿಜಾಬ್​ ಅಷ್ಟೊಂದು ಮುಖ್ಯವಾಗಿದ್ದರೆ, ರಾಹುಲ್​ ಗಾಂಧಿಯೇ ಅದನ್ನು ಕಡ್ಡಾಯಗೊಳಿಸಬಹುದಿತ್ತಲ್ಲ?!-ಬಿಜೆಪಿ ತಿರುಗೇಟು
ಹಿಜಾಬ್​ ಧರಿಸಿ ಕುಳಿತಿರುವ ವಿದ್ಯಾರ್ಥಿನಿಯರು
Follow us on

ರಾಜ್ಯದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಎದ್ದಿರುವ ಜಿಜಾಬ್ (Hijab)​ ವಿವಾದ ರಾಷ್ಟ್ರಮಟ್ಟದಲ್ಲಿ ಭರ್ಜರಿ ಸುದ್ದಿ ಮಾಡುತ್ತಿದೆ. ಈ ಬಗ್ಗೆ ಇಂದು ಟ್ವೀಟ್ ಮಾಡಿದ್ದ ರಾಹುಲ್​ ಗಾಂಧಿ(Rahul Gandhi), ವಿದ್ಯಾರ್ಥಿಗಳ ಶಿಕ್ಷಣದ ದಾರಿಯಲ್ಲಿ ಅವರು ಧರಿಸುವ ಹಿಜಾಬ್​ನ್ನು ಅಡ್ಡ ತರುತ್ತಿರುವುದು ಖೇದಕರ. ಈ ಮೂಲಕ ನಮ್ಮ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನೇ ಲೂಟಿ ಮಾಡಲಾಗುತ್ತಿದೆ. ತಾಯಿ ಸರಸ್ವತಿ ಪ್ರತಿಯೊಬ್ಬರಿಗೂ ಜ್ಞಾನ ನೀಡುತ್ತಾಳೆ. ಯಾರಿಗೂ ಬೇಧಭಾವ ಮಾಡಲಾರಳು ಎಂದು ಹೇಳಿದ್ದರು. ರಾಹುಲ್ ಗಾಂಧಿಯವರ ಈ ಟ್ವೀಟ್​ಗೆ ಕರ್ನಾಟಕ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಶಿಕ್ಷಣ ಪಡೆಯಲು ಹಿಜಾಬ್​ ಅಷ್ಟೊಂದು ಅತ್ಯಗತ್ಯವಾಗಿದ್ದರೆ, ನಿಮ್ಮ ಸರ್ಕಾರವಿದ್ದಾಗ ಯಾಕೆ ಅದನ್ನು ಕಡ್ಡಾಯಗೊಳಿಸಲಿಲ್ಲ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲ, ರಾಹುಲ್​ ಗಾಂಧಿಯವರು ಈಗ ಶಿಕ್ಷಣದಲ್ಲಿ ಕೋಮುವಾದ ಸೃಷ್ಟಿಸುತ್ತಿದ್ದಾರೆ ಎಂದೂ ಆರೋಪಿಸಿದೆ. 

ರಾಹುಲ್​ ಗಾಂಧಿಯವರ ಟ್ವೀಟ್​ನ್ನು ರೀಶೇರ್​ ಮಾಡಿಕೊಂಡಿರುವ ಕರ್ನಾಟಕ ಬಿಜೆಪಿ, ಕಾಂಗ್ರೆಸ್​ನ ಸಹ ಮಾಲೀಕರಾದ ರಾಹುಲ್​ ಗಾಂಧಿಯವರು ಶಿಕ್ಷಣದಲ್ಲೂ ಕೋಮುವಾದ ಸೃಷ್ಟಿಸುವ ಮೂಲಕ, ತಾವು ಈ ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಷ್ಟಕ್ಕೂ ಶಿಕ್ಷಣದಲ್ಲಿ ಹಿಜಾಬ್​ ಅಷ್ಟೊಂದು ಮಹತ್ವ ಎಂದಾಗಿದ್ದರೆ, ಕಾಂಗ್ರೆಸ್​ ಆಡಳಿತವಿದ್ದಾಗ ರಾಹುಲ್ ಗಾಂಧಿಯವರೇ ಅದನ್ನು ಕಡ್ಡಾಯಗೊಳಿಸಬಹುದಿತ್ತಲ್ಲ? ಎಂದು ಬಿಜೆಪಿ ಟ್ವೀಟ್​​ನಲ್ಲಿ ಪ್ರಶ್ನಿಸಿದೆ.

ಕರ್ನಾಟಕದಲ್ಲಿ ಈ ಹಿಜಾಬ್​ ವಿವಾದ ದಿನೇದಿನೆ ಹೆಚ್ಚುತ್ತಿದೆ. ರಾಜ್ಯದ ರಾಜಕೀಯ ನಾಯಕರು ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮಧ್ಯೆ ಶುಕ್ರವಾರ ಬಸವರಾಜ ಬೊಮ್ಮಾಯಿ ಸಭೆ ಕೂಡ ನಡೆಸಿದ್ದಾರೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶಿಕ್ಷಣ ಪಡೆಯಲು ಸಮವಸ್ತ್ರ ಧರಿಸಿ ಬರಬೇಕು.  ನೀವು ಮನಸೋ ಇಚ್ಛೆ ವರ್ತಿಸುತ್ತೀರಿ ಎಂದಾದರೆ ಅದಕ್ಕಾಗಿ ಮದರಸಾ ಇದೆ. ಎಲ್ಲರೂ ಜಾಬ್​ಗಾಗಿ ಕಾಲೇಜಿಗೆ ಹೋಗುತ್ತೀವಿ ಎಂದರೆ, ಇವರು ಹಿಜಾಬ್​ಗಾಗಿ ಹೋಗ್ತೇವೆ ಎನ್ನುತ್ತಾರೆ ಎಂದು ಕಟು ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ನಿಮ್ಮಿಷ್ಟದಂತೆ ನಡೆಯುತ್ತೀರಿ ಎಂದಾದರೆ, ನಾವು 1947ರಲ್ಲಿಯೇ ಒಂದು ಪ್ರತ್ಯೇಕ ರಾಷ್ಟ್ರವನ್ನೇ ನೀಡಿದ್ದೇವೆ ಅಲ್ಲಿಗೆ ಹೋಗಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: 6 ಜನರಿಂದ 700 ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ; ಹಿಜಾಬ್ ವಿವಾದದ ಕುರಿತು ಉಡುಪಿ ಜಿಲ್ಲಾಡಳಿತದ ಮೊರೆಹೋದ ವಿದ್ಯಾರ್ಥಿನಿಯರು