ಕೇರಳ ಸರ್ಕಾರ ದೆಹಲಿ ಶಾಲೆಗಳಿಗೆ ಅಧಿಕಾರಿಗಳನ್ನು ಕಳುಹಿಸಲಿಲ್ಲ ಎಂದ ರಾಜ್ಯ ಶಿಕ್ಷಣ ಸಚಿವ; ಸರ್ಕಾರಿ ಅಧಿಕಾರಿಗಳು ಎಂದು ಹೇಳಿಲ್ಲ ಎಂದ ಎಎಪಿ ಶಾಸಕಿ ಅತಿಶಿ

ಭಾನುವಾರ ಮಧ್ಯಾಹ್ನ ಕೇರಳದ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಅತಿಶಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, "ಕೇರಳದ ಶಿಕ್ಷಣ ಇಲಾಖೆಯು 'ದೆಹಲಿ ಮಾದರಿ' ಬಗ್ಗೆ ಕಲಿಯಲು ಯಾರನ್ನೂ ಕಳುಹಿಸಿಲ್ಲ. ಇದೇ ವೇಳೆ ಕಳೆದ ತಿಂಗಳು ‘ಕೇರಳ ಮಾದರಿ’ ಅಧ್ಯಯನಕ್ಕೆ ದೆಹಲಿಯಿಂದ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಎಲ್ಲ ನೆರವು ನೀಡಲಾಯಿತು...

ಕೇರಳ ಸರ್ಕಾರ ದೆಹಲಿ ಶಾಲೆಗಳಿಗೆ ಅಧಿಕಾರಿಗಳನ್ನು ಕಳುಹಿಸಲಿಲ್ಲ ಎಂದ ರಾಜ್ಯ ಶಿಕ್ಷಣ ಸಚಿವ; ಸರ್ಕಾರಿ ಅಧಿಕಾರಿಗಳು ಎಂದು ಹೇಳಿಲ್ಲ ಎಂದ ಎಎಪಿ ಶಾಸಕಿ ಅತಿಶಿ
ಕೇರಳದ ಅಧಿಕಾರಿಗಳೊಂದಿಗೆ ಎಎಪಿ ಶಾಸಕಿ ಅತಿಶಿ
Edited By: ರಶ್ಮಿ ಕಲ್ಲಕಟ್ಟ

Updated on: Apr 24, 2022 | 7:13 PM

ದೆಹಲಿ: ಕೇರಳ ರಾಜ್ಯದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ (V Sivankutty) ಅವರು ಭಾನುವಾರ ಆಮ್ ಆದ್ಮಿ ಪಕ್ಷದ (AAP) ಶಾಸಕಿ ಅತಿಶಿ (Atishi) ವಿರುದ್ಧ ಟ್ವೀಟ್ ಟೀಕೆ ನಡೆಸಿದ್ದು, ತಮ್ಮ ರಾಜ್ಯದ ಶಿಕ್ಷಣ ಇಲಾಖೆ ಈ ಉದ್ದೇಶಕ್ಕಾಗಿ ಯಾವುದೇ ಅಧಿಕಾರಿಗಳನ್ನು ಕಳುಹಿಸಿಲ್ಲ ಎಂದು ಹೇಳಿದ್ದಾರೆ. “ಕೇರಳದ ಅಧಿಕಾರಿಗಳು” ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದಾರೆ ಎಂದು ಕಲ್ಕಾಜಿಯ ಎಎಪಿ ಶಾಸಕಿ ಟ್ವೀಟ್ ಮಾಡಿದ್ದು, ಈ ಟ್ವೀಟ್​​ಗೆ ಕೇರಳದ ಸಚಿವರು ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಕೇರಳ ಸರ್ಕಾರದ ಅಧಿಕಾರಿಗಳು ಎಂದು ತಾನು ಎಲ್ಲಿಯೂ ಉಲ್ಲೇಖಿಸಲಿಲ್ಲ ಎಂದು ಅತಿಶಿ ಪ್ರತಿಕ್ರಿಯಿಸಿದ್ದಾರೆ. ಶಿವನ್‌ಕುಟ್ಟಿ ಅವರ ಉತ್ತರದ ನಂತರ ಅತಿಶಿ ಮತ್ತೊಂದು ಟ್ವೀಟ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಸ್ಪೆಶಲೈಸ್ಡ್ ಎಕ್ಸಲೆನ್ಸ್, ಕಲ್ಕಾಜಿಗೆ ನಿನ್ನೆ ಸಿಬಿಎಸ್​​ಇ ಸ್ಕೂಲ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಪ್ರಾದೇಶಿಕ ವಿಭಾಗದ ವಿಕ್ಟರ್ ಟಿಐ ಮತ್ತು ಕೇರಳ ಸಹೋದಯ ಕಾಂಪ್ಲೆಕ್ಸ್  ಒಕ್ಕೂಟದ ಡಾ. ಎಂ. ದಿನೇಶ್ ಬಾಬು ಅವರು ಭೇಟಿ ನೀಡಿದರು ಎಂದಿದ್ದಾರೆ.  ಸಿಬಿಎಸ್‌ಇ ಸ್ಕೂಲ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಕೇರಳದ ಪ್ರಾದೇಶಿಕ ಕಾರ್ಯದರ್ಶಿ ವಿಕ್ಟರ್ ಟಿ ಐ ಮತ್ತು ಕೇರಳ ಸಹೋದಯ ಕಾಂಪ್ಲೆಕ್ಸ್‌ ಒಕ್ಕೂಟದ ಖಜಾಂಚಿ ಎಂ ದಿನೇಶ್ ಬಾಬು ಭೇಟಿಯಾದರು ಮತ್ತು ಅವರು ಕಲ್ಕಾಜಿಯ ತನ್ನ ಕ್ಷೇತ್ರದ ಶಾಲೆಗೆ ಭೇಟಿ ನೀಡಿದ್ದರು ಎಂದು ಶನಿವಾರ ಅತಿಶಿ ಟ್ವೀಟಿಸಿದ್ದರು. ಶನಿವಾರ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅತಿಶಿ ಕೇರಳದ ಅಧಿಕಾರಿಗಳಿಗೆ ಕಲ್ಕಾಜಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಆತಿಥ್ಯ ವಹಿಸುವುದು ಅದ್ಭುತವಾಗಿದೆ. ಅವರು ತಮ್ಮ ರಾಜ್ಯದಲ್ಲಿ ನಮ್ಮ ಶಿಕ್ಷಣ ಮಾದರಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಜಾರಿಗೆ ತರಲು ಉತ್ಸುಕರಾಗಿದ್ದರು. ಇದು ಅರವಿಂದ ಕೇಜ್ರಿವಾಲ್ ಸರ್ಕಾರದ ರಾಷ್ಟ್ರ ನಿರ್ಮಾಣದ ಕಲ್ಪನೆ. ಸಹಕಾರದಿಂದ ಅಭಿವೃದ್ಧಿ ಎಂದಿದ್ದಾರೆ.


ಭಾನುವಾರ ಮಧ್ಯಾಹ್ನ ಕೇರಳದ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಅತಿಶಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, “ಕೇರಳದ ಶಿಕ್ಷಣ ಇಲಾಖೆಯು ‘ದೆಹಲಿ ಮಾದರಿ’ ಬಗ್ಗೆ ಕಲಿಯಲು ಯಾರನ್ನೂ ಕಳುಹಿಸಿಲ್ಲ. ಇದೇ ವೇಳೆ ಕಳೆದ ತಿಂಗಳು ‘ಕೇರಳ ಮಾದರಿ’ ಅಧ್ಯಯನಕ್ಕೆ ದೆಹಲಿಯಿಂದ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಎಲ್ಲ ನೆರವು ನೀಡಲಾಯಿತು. ಎಎಪಿ ಶಾಸಕರು ಯಾವ ‘ಅಧಿಕಾರಿಗಳನ್ನು’ ಸ್ವಾಗತಿಸಿದ್ದಾರೆ ಎಂದು ತಿಳಿಯಲು ನಾವು ಬಯಸುತ್ತೇವೆ, ”ಎಂದಿದ್ದಾರೆ.


ಪ್ರತಿಕ್ರಿಯೆಯು “ರಾಜಕೀಯವಾಗಿ ಪ್ರೇರಿತವಾಗಿದೆ ಎಂದು ತೋರುತ್ತದೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಜತೆ ಮಾತನಾಡಿದ ಅತಿಶಿ ಹೇಳಿದ್ದಾರೆ.

“ಶನಿವಾರ ಸಂಜೆ ನಾವು ಹೊರಡಿಸಿದ ಪತ್ರಿಕಾ ಪ್ರಕಟಣೆಯು ಅತಿಥಿಗಳ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ ಮತ್ತು ಭೇಟಿಯ ಎಲ್ಲಾ ವರದಿಗಳು ಇವರು ಸಿಬಿಎಸ್ಇ ಶಾಲಾ ಸಂಘಗಳ ಜನರು ಎಂದು ಸ್ಪಷ್ಟವಾಗಿ ಹೇಳುತ್ತದೆ. ನನ್ನ ಟ್ವೀಟ್‌ನಲ್ಲಿಯೂ ಅವರು ಕೇರಳ ಸರ್ಕಾರದವರು ಎಂದು ಹೇಳಿಲ್ಲ. ಯಾವುದೇ ಸ್ಪಷ್ಟೀಕರಣವನ್ನು ನೀಡಬೇಕಾಗಿಲ್ಲ ”ಎಂದು ಅತಿಶಿ ಹೇಳಿದ್ದಾರೆ. ದೆಹಲಿ ಸರ್ಕಾರ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಅತಿಥಿಗಳನ್ನು “ಗಣ್ಯರು” ಮತ್ತು “ಶಿಕ್ಷಣ ತಜ್ಞರು” ಎಂದು ಉಲ್ಲೇಖಿಸಲಾಗಿದೆ.

ಇದನ್ನೂ  ಓದಿ: ಲಖಿಂಪುರ ಖೇರಿ ಪ್ರಕರಣ: ಸುಪ್ರೀಂಕೋರ್ಟ್ ಜಾಮೀನು ತಿರಸ್ಕರಿಸಿದ ನಂತರ ಜಿಲ್ಲಾ ಕಾರಾಗೃಹದಲ್ಲಿ ಶರಣಾದ ಆಶಿಶ್ ಮಿಶ್ರಾ

Published On - 6:43 pm, Sun, 24 April 22

Web contact

TV9 Kannada

Read More
Follow Us