ಬೆಳಗಿನ ಜಾವ ಪಕ್ಕದ ಮನೆಯ ಕೋಳಿ ಕೂಗಿ ನಿದ್ರೆಗೆ ತೊಂದರೆ ಮಾಡುತ್ತಿದೆ ಎಂದು ಕೇಸ್ ದಾಖಲು!

ಎಲ್ಲರ ಜೀವನದಲ್ಲೂ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ, ಕೇರಳದ ವ್ಯಕ್ತಿಯೊಬ್ಬನ ಈ ಸಮಸ್ಯೆ ನಮ್ಮನ್ನು ಸ್ವಲ್ಪ ದಿಗ್ಭ್ರಮೆಗೊಳಿಸುವಂತಿದೆ. ಕೇರಳದ ವ್ಯಕ್ತಿಯೊಬ್ಬರು ಬೆಳಗಿನ ಜಾವ 3 ಗಂಟೆಗೆ ನೆರೆಮನೆಯ ಕೋಳಿ ಕೂಗುತ್ತಿರುವ ಬಗ್ಗೆ ದೂರು ದಾಖಲಿಸಿದ್ದು, ಇದು ನನ್ನ ಶಾಂತಿಯುತ ಜೀವನವನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದಾರೆ. ಆ ವ್ಯಕ್ತಿ ತನ್ನ ನೆರೆ ಮನೆಯವರ ಕೋಳಿ ಬೆಳಗಿನ ಜಾವ ತನ್ನ ನಿದ್ರೆಗೆ ಭಂಗ ತಂದಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ.

ಬೆಳಗಿನ ಜಾವ ಪಕ್ಕದ ಮನೆಯ ಕೋಳಿ ಕೂಗಿ ನಿದ್ರೆಗೆ ತೊಂದರೆ ಮಾಡುತ್ತಿದೆ ಎಂದು ಕೇಸ್ ದಾಖಲು!
Rooster

Updated on: Feb 19, 2025 | 5:38 PM

ಪಥನಾಂತಿಟ್ಟ: ಕೇರಳದ ಪಥನಾಂತಿಟ್ಟ ಪ್ರದೇಶದ ಪಲ್ಲಿಕಲ್ ಎಂಬ ಶಾಂತ ಗ್ರಾಮದಲ್ಲಿ ಸಂಘರ್ಷ ನಡೆಯುತ್ತಿದೆ. ಇದು ಹಣಕ್ಕಾಗಿಯೂ ಅಲ್ಲ, ಜಾಗಕ್ಕಾಗಿಯೂ ಅಲ್ಲ. ಪಕ್ಕದ ಮನೆಯ ಕೋಳಿ ದಿನವೂ ಮುಂಜಾನೆ ಕೂಗಿ ತಮ್ಮ ನಿದ್ರೆಗೆ ಭಂಗ ತರುತ್ತಿದೆ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ನಂತರ ಆ ಊರಿನಲ್ಲಿ ಗಲಾಟೆ ಭುಗಿಲೆದ್ದಿದೆ. ರಾಧಾಕೃಷ್ಣ ಕುರುಪ್ ಎಂಬ ವೃದ್ಧನಿಗೆ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವದಲ್ಲಿ ಇನ್ನೇನು ನಿದ್ರೆ ಹತ್ತುತ್ತಿದೆ ಎನ್ನುವಾಗ ದಿನವೂ ಬೆಳಗಿನ ಜಾವವೇ ಕೂಗಿ ತನ್ನ ಶಾಂತಿಯುತ ನಿದ್ರೆಗೆ ಭಂಗ ತರುತ್ತಿರುವ ಕೋಳಿಯ ಬಗ್ಗೆ ದೂರು ದಾಖಲಿಸಿದ್ದಾರೆ!

ಪ್ರತಿದಿನ ಬೆಳಿಗ್ಗೆ 3 ಗಂಟೆಗೆ ಕುರುಪ್ ಅವರ ನೆರೆಯವರ ಕೋಳಿ ನಿರಂತರವಾಗಿ ಕೂಗಲು ಪ್ರಾರಂಭಿಸುತ್ತದೆ. ಅದು ಅವರ ನಿದ್ರೆಗೆ ತೊಂದರೆ ಮಾಡುತ್ತಿದೆ ಮತ್ತು ಶಾಂತಿಯುತ ಜೀವನವನ್ನು ಅಡ್ಡಿಪಡಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರಾಧಾಕೃಷ್ಣ ಕುರುಪ್ ಅವರಿಗೆ ಸಾಕಾಗಿತ್ತು. ತನ್ನ ನೆರೆಮನೆಯ ಅನಿಲ್ ಕುಮಾರ್ ಎಂಬುವವರ ಕೋಳಿ ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ

ಅಧಿಕಾರಿಗಳು ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದರು. ಕೋಳಿಯೇ ಎರಡೂ ಮನೆಯ ಸಮಸ್ಯೆಗೆ ಕಾರಣ ಎಂದು ನಿರ್ಧರಿಸಿದರು. ಇಬ್ಬರನ್ನೂ ಕರೆಸಿ ಈ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಬಳಿಕ ಅಧಿಕಾರಿಗಳು ಆ ಸ್ಥಳವನ್ನು ಪರಿಶೀಲಿಸಿದರು.

ನೆರೆಹೊರೆಯವರು ತಮ್ಮ ಕೋಳಿಗಳನ್ನು ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದೆ. ರಾಧಾಕೃಷ್ಣ ಕುರುಪ್ ಅವರಿಗೆ ಕೋಳಿಯ ಕೂಗುವಿಕೆಯಿಂದ ನಿಜಕ್ಕೂ ತೊಂದರೆಯಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ. ವಿವಾದವನ್ನು ಬಗೆಹರಿಸಲು ಕೋಳಿ ಶೆಡ್ ಅನ್ನು ಮೇಲಿನ ಮಹಡಿಯಿಂದ ಮನೆಯ ಅಂಗಳದ ಪಕ್ಕಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳು ರಾಧಾಕೃಷ್ಣ ಅವರ ನೆರೆಹೊರೆಯವರಿಗೆ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us