ಕಳೆದ 10 ವರ್ಷಗಳಲ್ಲಿ ಕೇರಳವನ್ನು ನಡುಗಿಸಿದ ಗುಡ್ಡ ಕುಸಿತ ದುರಂತಗಳಿವು

|

Updated on: Jul 30, 2024 | 8:05 PM

ವಯನಾಡ್ ಮುಂಡಕೈ ಮತ್ತು ಚೂರಲ್​​ಮಲದಲ್ಲಿ ಸಂಭವಿಸಿದ ಗುಡ್ಡ ಕುಸಿತ ಕೇರಳದ ಇತಿಹಾಸದಲ್ಲಿ ಅತ್ಯಂತ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಆದರೆ, ಕೇರಳದಲ್ಲಿ ಸಂಭವಿಸಿದ ಮೊದಲ ಗುಡ್ಡ ಕುಸಿತ ದುರಂತ ಇದೊಂದೇ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು 255 ಮಂದಿ ಗುಡ್ಡ ಕುಸಿತ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಕಳೆದ 10 ವರ್ಷಗಳಲ್ಲಿ ಕೇರಳವನ್ನು ನಡುಗಿಸಿದ ಗುಡ್ಡ ಕುಸಿತ ದುರಂತಗಳಿವು
ಭೂಕುಸಿತ ಸಂಭವಿಸಿದ ವಯನಾಡ್
Follow us on

ಪ್ರಕೃತಿ ರಾತ್ರೋರಾತ್ರಿ ಕೇರಳ (Kerala) ರಾಜ್ಯದ ಮುಖವನ್ನೇ ಬದಲಿಸಿಬಿಟ್ಟಿದೆ. ವಯನಾಡು (Wayanad) ಚೂರಲ್​​ಮಲ ಮತ್ತು ಮುಂಡಕೈಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ನೂರು ದಾಟಿದೆ. ಸುಮಾರು 250 ಮಂದಿ ಸಿಕ್ಕಿಬಿದ್ದಿದ್ದಾರೆ. ವಯನಾಡ್ ಮುಂಡಕೈ ಮತ್ತು ಚೂರಲ್​​ಮಲದಲ್ಲಿ ಸಂಭವಿಸಿದ ಗುಡ್ಡ ಕುಸಿತ (Kerala Landslides) ಕೇರಳದ ಇತಿಹಾಸದಲ್ಲಿ ಅತ್ಯಂತ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಆದರೆ, ಕೇರಳದಲ್ಲಿ ಸಂಭವಿಸಿದ ಮೊದಲ ಗುಡ್ಡ ಕುಸಿತ ದುರಂತ ಇದೊಂದೇ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು 255 ಮಂದಿ ಗುಡ್ಡ ಕುಸಿತ ದುರಂತದಲ್ಲಿ ಸಾವಿಗೀಡಾಗಿದ್ದಾರೆ. 2018, 2019, 2020 ಮತ್ತು 2021ರಲ್ಲಿ ನಡೆದ ದುರಂತಗಳಲ್ಲಿ 182 ಜನರು ಪ್ರಾಣ ಕಳೆದುಕೊಂಡಿದ್ದಾರೆ.

2001: ಅಂಬೂರಿ

ನವೆಂಬರ್ 2001 ರಲ್ಲಿ ತಿರುವನಂತಪುರಂನ ಅಂಬೂರಿ ಪಂಚಾಯತ್‌ನಲ್ಲಿ ಭೂಕುಸಿತವು 39 ಜನರನ್ನು ಬಲಿ ತೆಗೆದುಕೊಂಡಿತು. ನವೆಂಬರ್ 9, 2001 ರಂದ ಎರಡು ಹಳ್ಳಿಗಳು ನಾಶವಾಗಿದೆ. ಅಂದು ಸಂಜೆ ಆರು ಗಂಟೆಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಸ್ಥಳೀಯರು ಇದು ಕೇವಲ ಮಳೆ ಎಂದು ಭಾವಿಸಿದ್ದರು, ಆದರೆ ಮಳೆ ಜೋರಾಗುತ್ತಾ ಹೋಯಿತು. ಘಟನೆ ನಡೆದ ದಿನ ರಾತ್ರಿ 8.15ಕ್ಕೆ ಕುರಿಶುಮಲದ ತಪ್ಪಲಿನಿಂದ ನಿವಾಸಿಗಳಿಗೆ ಭಯಂಕರ ಶಬ್ದ ಕೇಳಿಸಿದೆ. ಕುರಿಶುಮಲದ ತಪ್ಪಲಿನಲ್ಲಿನ ಸುಮಾರು ನಾಲ್ಕು ಮನೆಗಳು ನೆಲದಡಿಯಲ್ಲಿ ಹೂತುಹೋಗಿವೆ. ಕಲ್ಲು ಮಣ್ಣು ಸುರಿಯುತ್ತಲೇ ಇತ್ತು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದರು. ಸತ್ತವರಲ್ಲಿ ಹೆಚ್ಚಿನವರು ಅತಿವಾರತ್ ಜಂಕ್ಷನ್‌ನಲ್ಲಿರುವ ಪುಟ್ಟಮುಕ್‌ನಲ್ಲಿ ಸಿಡಿ ಥಾಮಸ್ ಅವರ ನಿಶ್ಚಿತಾರ್ಥಕ್ಕೆ ಬಂದವರು. ಮನೆಯ ಮುಖ್ಯಸ್ಥ ಸಿಡಿ ಥಾಮಸ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಥಾಮಸ್ ಅವರ ಮನೆಯೊಂದರಿಂದಲೇ 24 ಜನರು ಸಾವಿಗೀಡಾಗಿದ್ದರು. ಸರ್ಕಾರವು ಕುರಿಶುಮಲ ಪೂಚ್ಚಮುಕ್ಕ್ ಮತ್ತು ಕುಂಪಿಚೆಲ್ ಅನ್ನು ಭೂಕುಸಿತ ಪೀಡಿತ ಪ್ರದೇಶಗಳೆಂದು ಘೋಷಿಸಿದೆ.

2001: ವೆನ್ನಿಯಾನಿ

ಜುಲೈ 9, 2001 ರಂದು ಇಡುಕ್ಕಿಯ ತೊಡುಪುಳ ತಾಲೂಕಿನ ವೆನ್ನಿಯಾನಿಯಲ್ಲಿ ಭೂಕುಸಿತ ಸಂಭವಿಸಿತು. ಬೆಳಗಿನ ಜಾವ ಜೋರು ಮಳೆ ಸುರಿಯಿತು. ವೆಲ್ಲಪಾಚಿಲ್‌ನಲ್ಲಿ ಮೊದಲಿಗೆ ಇಡಯಪಾರಮ್‌ನಲ್ಲಿ ಭಾಸ್ಕರನ್ ಮತ್ತು ಕುಮಾರಿ ಅವರ ಮನೆ ಕುಸಿದು ಇಬ್ಬರೂ ಸಾವಿಗೀಡಾಗಿದ್ದರು. ಈ ದುರಂತದಲ್ಲಿ ಸುಮಾರು 20 ಗುಡ್ಡಗಳು ಕುಸಿದು ಬಿದ್ದಿತ್ತು. ಅಂದು ರಾತ್ರಿ 11.30ರ ಸುಮಾರಿಗೆ ಮಲಯಾಳಂ ಮನೋರಮಾದ ಛಾಯಾಗ್ರಾಹಕ ವಿಕ್ಟರ್ ಜಾರ್ಜ್ ಸೇರಿದಂತೆ ಪತ್ರಕರ್ತರು ಸ್ಥಳಕ್ಕೆ ಆಗಮಿಸಿದ್ದರು. ಫೋಟೊ ತೆಗೆಯುತ್ತಿದ್ದ ವಿಕ್ಟರ್ ಕೂಡ ಈ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಸುಮಾರು 100 ಜನ ನೋಡು ನೋಡುತ್ತಿದ್ದಂತೆ ಗುಡ್ಡದಿಂದ ಕಲ್ಲುಗಳು ಉರುಳಿ ಬಿದ್ದಿದೆ. ಅವರು ಅಲ್ಲಿಂದ ಓಡಿ ಪ್ರಾಣ ಕಾಪಾಡಿಕೊಂಡಿದ್ದರು

2012 : ಪುಲ್ಲೂರಂಪಾರ

ಆಗಸ್ಟ್ 7, 2012 ರಂದು, ಕೋಝಿಕ್ಕೋಡ್ ಜಿಲ್ಲೆಯ ಪುಲ್ಲರಂಪಾರದ ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಮನೆ, ಜಮೀನುಗಳಿಗೆ ಸಾಕಷ್ಟು ಹಾನಿಯಾಗಿದೆ. ಹಲವು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದ ಭೂಕುಸಿತ ಉಂಟಾಗಿತ್ತು.

2018 : ಕಟ್ಟಿಪಾರ

ಜೂನ್ 14, 2018 ರಂದು, ಕೋಯಿಕ್ಕೋಡ್‌ನ ಕಟ್ಟಿಪಾರ ಭೂಕುಸಿತ ಸಂಭವಿಸಿದೆ. 14ರಂದು ಬೆಳಗ್ಗೆ ಸಂಭವಿಸಿದ ದುರಂತದಲ್ಲಿ 14 ಮಂದಿ ಸಾವಿಗೀಡೈ. 5 ಮನೆಗಳು ಸಂಪೂರ್ಣ ಮತ್ತು 33 ಮನೆಗಳು ಭಾಗಶಃ ನಾಶವಾಗಿವೆ. ಭೂಕುಸಿತದ ನಂತರ, ಸಮೀಪದ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ ಮತ್ತು ಸುಮಾರು ಐದು ಪಂಚಾಯಿತಿಗಳು ಮುಳುಗಿವೆ. ರಕ್ಷಣಾ ಕಾರ್ಯಾಚರಣೆ ಏಳು ದಿನಗಳ ಕಾಲ ನಡೆಯಿತು. ಕಟ್ಟಿಪಾರ ಭೂಕುಸಿತವನ್ನು ಕೋಝಿಕ್ಕೋಡ್ ಜಿಲ್ಲೆಯ ಅತಿದೊಡ್ಡ ವಿಪತ್ತು ಎಂದು ಪರಿಗಣಿಸಲಾಗಿದೆ. ಈ ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಕಲ್ಲುಗಣಿಗಾರಿಕೆ ಹಾಗೂ ಅವೈಜ್ಞಾನಿಕ ನೀರು ಸಂಗ್ರಹದಿಂದ ಭೂಕುಸಿತ ಉಂಟಾಗಿರುವುದು ತನಿಖೆಯಿಂದ ಪತ್ತೆಯಾಗಿತ್ತು.

2019: ಕವಲಪಾರ

ಆಗಸ್ಟ್ 8, 2019 ರಂದು ಮಲಪ್ಪುರಂನ ಕವಲಪಾರಾದಲ್ಲಿ ಸಂಭವಿಸಿದ ದುರಂತವು 59 ಜನರನ್ನು ಬಲಿ ತೆಗೆದುಕೊಂಡಿತು. 11 ಮಂದಿ ನಾಪತ್ತೆಯಾಗಿದ್ದರು. ಕವಲಪಾರ ಮುತ್ತಪ್ಪನಕುಂನಲ್ಲಿ ಗುಡ್ಡ ಕುಸಿದ ಪರಿಣಾಮ ಕಣಿವೆಯಲ್ಲಿ 45 ಮನೆಗಳು ನೆಲದಡಿಯಲ್ಲಿ ಹೂತು ಹೋಗಿವೆ. ಇಪ್ಪತ್ತು ದಿನಗಳ ಸುದೀರ್ಘ ಶೋಧದ ನಂತರ 48 ಮೃತದೇಹಗಳು ಪತ್ತೆಯಾಗಿವೆ. 12 ಮಂದಿಯ ಶವಗಳು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಭೂಕುಸಿತದಲ್ಲಿ ಕವಲಪಾರ ಜನಾಗ್ರಹ ಕೇಂದ್ರ ಸೇರಿದಂತೆ 45 ಮನೆಗಳು ನೆಲಸಮವಾಗಿವೆ. ಅದೇ ದುರಂತದ ದಿನ ಸಮೀಪದ ಪಾಥಾರಿನಲ್ಲಿಯೂ ದುರಂತ ಸಂಭವಿಸಿತ್ತು. ಈ ಭೂಮಿಯೇ ಭೀಕರ ಭೂಕುಸಿತದಲ್ಲಿ ಕಣ್ಮರೆಯಾಯಿತು. ಆದರೆ, ಅದೃಷ್ಟವಶಾತ್ ಇಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮುತ್ತಪ್ಪನ ಬೆಟ್ಟದ ಕವಲಪಾರ ಕಾಲೋನಿಯಲ್ಲಿ 32 ಮನೆಗಳು ಸೇರಿ ಸುಮಾರು 160 ಕುಟುಂಬಗಳಿಗೆ ಸರಕಾರ ಪರಿಹಾರ ನೀಡಿದೆ. ಭೂಕುಸಿತದ ಭೀತಿಯಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಿದೆ.

2019: ಪುತ್ತುಮಲ

ಆಗಸ್ಟ್ 8, 2019 ರಂದು ಸಂಭವಿಸಿದ ಭೂಕುಸಿತದಲ್ಲಿ ಪುತ್ತುಮಲ ಮತ್ತು ಸಮೀಪದ ಪಚ್ಚಕ್ಕಾಡ್‌ನಲ್ಲಿ 17 ಜನರು ಸಾವಿಗೀಡಾಗಿದ್ದರು. ಅವರಲ್ಲಿ ಐವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಭೂಕುಸಿತದಿಂದ ಸುಮಾರು 65 ಮನೆಗಳು ಸಂಪೂರ್ಣ ನಾಶವಾಗಿವೆ. ಮಾನವ ವಾಸಕ್ಕೆ ಯೋಗ್ಯವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಇಲ್ಲಿ ವಿದ್ಯುತ್ ಇನ್ನೂ ಪುನಶ್ಚೇತನಗೊಂಡಿಲ್ಲ. ಪುತ್ತುಮಲದ ಎಸ್ಟೇಟ್ ಪಾಡಿಗಳಲ್ಲಿ ಕಡಿಮೆ ನಿವಾಸಿಗಳು ಇದ್ದಾರೆ, 16 ಪಾಡಿಗಳಲ್ಲಿ ಒಂದು ಭೂಕುಸಿತದಿಂದ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಐದು ನಿರುಪಯುಕ್ತವಾಗಿವೆ. ಅತಿಥಿ ಕಾರ್ಮಿಕರು ಸೇರಿದಂತೆ ಹತ್ತು ಪಾಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

2020: ಪೆಟ್ಟಿಮುಡಿ

ಪೆಟ್ಟಿಮುಡಿಯಲ್ಲಿ ಆಗಸ್ಟ್ 6, 2020 ರಂದು ರಾತ್ರಿ 10:30 ಕ್ಕೆ ದುರಂತ ಸಂಭವಿಸಿದೆ. ಸ್ವಲ್ಪ ಸಮಯದಲ್ಲೇ ಎಲ್ಲವೂ ನೆಲದಡಿಯಲ್ಲಿ ಹೂತುಹೋದವು. ಇಲ್ಲಿ ಬೃಹತ್ ಬಂಡೆಗಳೂ ಉರುಳಿ ಬಿದ್ದಿದ್ದವು,. ಬಹುತೇಕರು ಕೆಲಸ ಮುಗಿಸಿ ನಿದ್ದೆಗೆ ಜಾರಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ 10 ಗಂಟೆಗಳ ನಂತರ ಅನಾಹುತ ಸಂಭವಿಸಿರುವುದು ಹೊರಜಗತ್ತಿಗೆ ತಿಳಿದಿತ್ತು.

ವಿಪತ್ತು ನಿರ್ವಹಣಾ ಪಡೆಗಳು ಮತ್ತು ವಿವಿಧ ಇಲಾಖೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ, 500 ಕ್ಕೂ ಹೆಚ್ಚು ಜನರು ಕೋವಿಡ್ ಅನ್ನು ನಿರ್ಲಕ್ಷಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಹುಡುಕಾಟ 19 ದಿನಗಳ ಕಾಲ ನಡೆಯಿತು. ಶೋಧದ ವೇಳೆ 14 ಕಿ.ಮೀ ದೂರದಿಂದ ಮೃತದೇಹಗಳು ಪತ್ತೆಯಾಗಿವೆ. ಭಾರೀ ಮಳೆ, ಕೆಸರು, ವಿಪರೀತ ಚಳಿ ಮತ್ತು ಹಿಮವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಅಂತಿಮವಾಗಿ ನಾಲ್ವರನ್ನು ಹೊರತುಪಡಿಸಿ 66 ಮಂದಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ವಯನಾಡಿನಲ್ಲಿ ಗುಡ್ಡ ಕುಸಿತ; ಮಾಧವ್ ಗಾಡ್ಗೀಳ್ ಸಮಿತಿಯ ವರದಿ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ?

2021: ಕೂಟ್ಟಿಕ್ಕಲ್

ಅಕ್ಟೋಬರ್ 16, 2021 ರಂದು, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಗಡಿ ಪ್ರದೇಶಗಳಾದ ಕೂಟ್ಟಿಕ್ಕಲ್ ಮತ್ತು ಕೊಕ್ಕಯಾರ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 13 ಜನರು ಸಾವಿಗೀಡಾಗಿದ್ದರು. ಅಕ್ರಮ ಕ್ವಾರಿಗಳೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ