Fuel Price Hike: ಇಂಧನ ಬೆಲೆ ಏರಿಕೆ ಬಗ್ಗೆ ಅಮೂಲ್ ಡೂಡಲ್, ನೆಟ್ಟಿಗರ ಶ್ಲಾಘನೆ

Amul's Doodle: ಅಮೂಲ್ ಹುಡುಗಿ ತನ್ನ ಕಾರಿಗೆ ಇಂಧನ ತುಂಬಿಸುತ್ತಾ ಏರಿಕೆಯಾಗಿರುವ ದರವನ್ನು ದಿಟ್ಟಿಸುತ್ತಿರುವ ಡೂಡಲ್ ಇದಾಗಿದೆ. ಪೋಸ್ಟರ್ ನಲ್ಲಿ Painfuel increase ಎಂದು ಬೆಲೆ ಏರಿಕೆ ಬಗ್ಗೆ ಬರೆಯಲಾಗಿದೆ.

Fuel Price Hike: ಇಂಧನ ಬೆಲೆ ಏರಿಕೆ ಬಗ್ಗೆ ಅಮೂಲ್ ಡೂಡಲ್, ನೆಟ್ಟಿಗರ ಶ್ಲಾಘನೆ
ಅಮೂಲ್ ಡೂಡಲ್
ರಶ್ಮಿ ಕಲ್ಲಕಟ್ಟ

Updated on: Feb 19, 2021 | 6:10 PM

ನವದೆಹಲಿ: ಸತತ 11ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು, ಇಂಧನ ಬೆಲೆ ಏರಿಕೆ ಬಗ್ಗೆ ದೇಶದಾದ್ಯಂತ ಚರ್ಚೆಯಾಗಿದೆ. ಈ ನಡುವೆ ಖ್ಯಾತ ಬ್ರಾಂಡ್ ಅಮೂಲ್ ಬೆಲೆ ಏರಿಕೆಯ ಬಗ್ಗೆ ಡೂಡಲ್ ಪ್ರಕಟಿಸಿ ಜನಮೆಚ್ಚುಗೆ ಗಳಿಸಿದೆ.

ಅಮೂಲ್ ಹುಡುಗಿ ತನ್ನ ಕಾರಿಗೆ ಇಂಧನ ತುಂಬಿಸುತ್ತಾ ಏರಿಕೆಯಾಗಿರುವ ದರವನ್ನು ದಿಟ್ಟಿಸುತ್ತಿರುವ ಡೂಡಲ್ ಇದಾಗಿದೆ. ಪೋಸ್ಟರ್ ನಲ್ಲಿ Painfuel increase ಎಂದು ಬೆಲೆ ಏರಿಕೆ ಬಗ್ಗೆ ಹೇಳಿದ್ದು, ಅಮೂಲ್ ಕೈಗೆಟುಕುವ ರುಚಿ (Amul Affordable taste) ಎಂದು ಬರೆಯಲಾಗಿದೆ.

ಈ ಡೂಡಲ್ ಟ್ವೀಟ್ ಮಾಡಿರುವ ಅಮೂಲ್ ಕಾರ್ಪೊರೇಷನ್ #Amul Topical: The steeply rising fuel prices ಎಂದು ಬರೆದುಕೊಂಡಿದೆ. ಸಾಮಾನ್ಯ ಜನರ ಪರವಾಗಿ ದನಿಯೆತ್ತಿದ್ದಕ್ಕೆ ನೆಟ್ಟಿಗರು ಅಮೂಲ್ ಕಂಪನಿಯನ್ನು ಶ್ಲಾಘಿಸಿದ್ದಾರೆ.

ಏರಿಕೆಯಾಗುತ್ತಲೇ ಇದೆ ಇಂಧನ ಬೆಲೆ
ದೆಹಲಿಯಲ್ಲಿ ಮತ್ತೆ ಪೆಟ್ರೋಲ್​ ದರ ಏರಿಕೆಯತ್ತ ಜಿಗಿದಿದ್ದು 31 ಪೈಸೆ ಏರಿಕೆ ಕಂಡಿದೆ. ಇದೀಗ ಪ್ರತಿ ಲೀಟರ್ ಪೆಟ್ರೋಲ್ ದರ ₹90.19 ಆಗಿದೆ. ಹಾಗೆಯೇ ಡೀಸೆಲ್ ದರ ಕೂಡಾ ಏರಿಕೆಯತ್ತ ಮುಖ ಮಾಡಿದ್ದು, 33 ಪೈಸೆ ಏರಿಕೆಯಾಗಿದೆ. ಡೀಸೆಲ್​ ದರ ₹80.60 ಆಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಪೆಟ್ರೋಲ್​ ದರ ನೂರರ ಗಡಿ ದಾಟಿದ್ದು ಬೆಂಗಳೂರಿನಲ್ಲೂ ಶೀಘ್ರವೇ ಶತಕ ಬಾರಿಸಲಿದೆ ಎಂದು ಅಂದಾಜಿಸಲಾಗಿದೆ.

ಮುಂಬೈಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಕ್ರಮವಾಗಿ 35 ಪೈಸೆ ಮತ್ತು 30 ಪೈಸೆ ಹೆಚ್ಚಾಗಿದೆ. ಹೆಚ್ಚಳದ ನಂತರ ಡೀಸೆಲ್ ಬೆಲೆ ಲೀಟರ್‌ಗೆ 87.67 ರೂ ಮತ್ತು ಪೆಟ್ರೋಲ್ ಪ್ರತಿ ಲೀಟರ್‌ಗೆ 96.62 ರೂ ಆಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್​ ದರ ಶತಕದ ಹಾದಿಯನ್ನು ತಲುಪಿ ಗರಿಷ್ಠ ಮಟ್ಟ ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 92.37 ರೂ, ಡೀಸೆಲ್ ಲೀಟರ್‌ಗೆ 85.74 ರೂ. ಬೆಲೆಗಳ ಪಟ್ಟುಹಿಡಿದ ಏರಿಕೆಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿದ್ದು, ಸಾಮಾನ್ಯ ಜನರ ಮೇಲಿನ ಹೊರೆ ಯನ್ನು ತಪ್ಪಿಸಲು ತೆರಿಗೆಯನ್ನು ತಕ್ಷಣ ಕಡಿತಗೊಳಿಸಬೇಕೆಂದು ಒತ್ತಾಯಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂದೂ ಕೂಡಾ ದರ ಏರಿಕೆಯತ್ತ ಸಾಗಿದ್ದು, ಪೆಟ್ರೋಲ್​ ದರ ₹93.21 ಹಾಗೂ ಡೀಸೆಲ್ ₹85.44 ಆಗಿದೆ.

ದಿನೇ ಏರುತ್ತಿರುವ ಪೆಟ್ರೋಲ್​ ಮತ್ತು ಡೀಸೆಲ್ ದರ ಏರಿಕೆಯ ಬಗ್ಗೆ ಹಾಗೂ 100ರ ಗಡಿ ದಾಟಿರುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದರು. ಹಿಂದಿನ ಸರಕಾರಗಳು ಇಂಧನ ಆಮದು ಅವಲಂಬನೆಯ ಬಗ್ಗೆ ಕಡಿಮೆ ಮಾಡುವ ಬಗ್ಗೆ ಗಮನ ಹರಿಸಿರಲಿಲ್ಲ. ಇದೀಗ ಇದು ಮಧ್ಯಮ ವರ್ಗದವರಿಗೆ ಹೊರೆಯಾದಂತಾಗಿದೆ. ಇದಕ್ಕೆ ಹಿಂದಿನ ಸರಕಾರಗಳೇ ಹೊಣೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸಿನಿಮಾ ಪ್ರದರ್ಶನಕ್ಕೆ ತಡೆ: ಮಹಾರಾಷ್ಟ್ರ ಕಾಂಗ್ರೆಸ್ ಬೆದರಿಕೆ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us