ಪ್ರೀತಿಯಿಂದ ಸಾಕಿದ್ದ ನಾಯಿಗೆ ಅನಾರೋಗ್ಯ, ಖಿನ್ನತೆಯಿಂದ ಸಹೋದರಿಯರು ಆತ್ಮಹತ್ಯೆ

ಲಕ್ನೋದಲ್ಲಿ ಸಾಕು ನಾಯಿ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಧಾ ಮತ್ತು ಜಿಯಾ ಸಿಂಗ್ ತಮ್ಮ ಜರ್ಮನ್ ಶೆಫರ್ಡ್ ಟೋನಿ ಮೇಲೆ ಅತಿಯಾದ ಪ್ರೀತಿ ಹೊಂದಿದ್ದರು. ಅದರ ಆರೋಗ್ಯ ಹದಗೆಟ್ಟಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದ ಅವರು, ಕುಟುಂಬದ ಆರ್ಥಿಕ ಸಂಕಷ್ಟಗಳ ಮಧ್ಯೆ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಇಡೀ ಪ್ರದೇಶಕ್ಕೆ ಆಘಾತ ತಂದಿದೆ.

ಪ್ರೀತಿಯಿಂದ ಸಾಕಿದ್ದ ನಾಯಿಗೆ ಅನಾರೋಗ್ಯ,  ಖಿನ್ನತೆಯಿಂದ ಸಹೋದರಿಯರು ಆತ್ಮಹತ್ಯೆ
ನಾಯಿ(ಸಾಂದರ್ಭಿಕ ಚಿತ್ರ)
Image Credit source: Wiggles

Updated on: Dec 26, 2025 | 3:05 PM

ಲಕ್ನೋ, ಡಿಸೆಂಬರ್ 26: ಈ ಸಹೋದರಿಯರಿಗೆ ತಾವು ಸಾಕಿದ್ದ ನಾಯಿ ಎಂದರೆ ಪ್ರಾಣ. ಅದು ಅನಾರೋಗ್ಯಕ್ಕೆ ಒಳಗಾಗಿದ್ದ ಕಾರಣ ಈ ಅಕ್ಕ ತಂಗಿಯರು ನಾಯಿಯ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರು. ಆದರೆ ಎಷ್ಟೇ ಖರ್ಚು ಮಾಡಿದರೂ, ಯಾವ ಆಸ್ಪತ್ರೆಗೆ ದಾಖಲಿಸಿದರೂ ಚೇತರಿಸಿಕೊಳ್ಳದ ಕಾರಣ ಇಬ್ಬರೂ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ರಾಧಾ ಸಿಂಗ್ (24) ಮತ್ತು ಆಕೆಯ ತಂಗಿ ಜಿಯಾ ಸಿಂಗ್ (22) ಮೃತರು.

ಸಾಕುಪ್ರಾಣಿ ಜರ್ಮನ್ ಶೆಫರ್ಡ್ ಟೋನಿಯನ್ನು ಕಳೆದುಕೊಳ್ಳುವ ಭಯದಿಂದ ತಾವೇ ಮೊದಲು ಸಾಯಬೇಕೆಂದು ಫಿನಾಯಿಲ್ ಸೇವಿಸಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಾಧಾ ಸಾವನ್ನಪ್ಪಿದರೆ, ಜಿಯಾ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ಕುಟುಂಬವು ದೋಡಾ ಖೇಡಾ ಜಲಾಲ್ಪುರ್ ಗ್ರಾಮದ ಪ್ಯಾರಾ ಪ್ರದೇಶದಲ್ಲಿ ವಾಸಿಸುತ್ತಿತ್ತು.

ಇಬ್ಬರೂ ಸಹೋದರಿಯರು ಪದವೀಧರರಾಗಿದ್ದರು ಮತ್ತು ಅವರ ನಾಯಿಯೊಂದಿಗೆ ಆಳವಾದ ಭಾವನಾತ್ಮಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರ ಪ್ರಕಾರ, ಟೋನಿ ಸುಮಾರು ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಇದು ಸಹೋದರಿಯರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ನಾಯಿ ತಿನ್ನುವುದನ್ನು ನಿಲ್ಲಿಸಿತ್ತು, ಮತ್ತು ಸಹೋದರಿಯರು ಸಹ ಊಟ ಮಾಡುವುದನ್ನು ನಿಲ್ಲಿಸಿದ್ದರು.

ಮತ್ತಷ್ಟು ಓದಿ: ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟ ಯುವತಿ; ಸಿಕ್ಕಿದ್ದು ಎರಡೆರಡು ಡೆತ್​​ನೋಟ್​​!

ಹತ್ತಿರದ ಅಂಗಡಿಯಿಂದ ಮನೆಗೆ ಹಿಂದಿರುಗಿದ ನಂತರ ತುಂಬಾ ಬೇಸರದಲ್ಲಿದ್ದರು. ಅವರ ತಾಯಿ ಗುಲಾಬಾ ದೇವಿ ಏನಾಯಿತು ಎಂದು ಕೇಳಿದಾಗ, ಅವರು ಫಿನಾಯಿಲ್ ಸೇವಿಸಿದ್ದಾರೆಂದು ಹೇಳಿದ್ದಾರೆ. ವಯಸ್ಸಾದ ತಾಯಿ ಮನೆ ಬಾಗಿಲಲ್ಲಿ ಅಳುತ್ತಾ ಕುಳಿತಿದ್ದರು.

ಪ್ರಜ್ಞೆ ಕಳೆದುಕೊಳ್ಳುವ ಮೊದಲು, ಸಹೋದರಿಯರು ನಾವು ಸತ್ತ ನಂತರ, ನಾಯಿಯನ್ನು ಓಡಿಸಬೇಡಿ ಅದನ್ನು ಮನೆಯಲ್ಲಿಯೇ ಇರಿಸಿ ಮತ್ತು ಅದಕ್ಕೆ ಔಷಧಿ ನೀಡುವುದನ್ನು ಮುಂದುವರಿಸಿ ಎಂದು ಒಂದೇ ಒಂದು ವಿನಂತಿಯನ್ನು ಮಾಡಿದ್ದಾಗಿ ಹೇಳಿದ್ದಾರೆ.

ಕುಟುಂಬವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಹತ್ತಿ ಸಂಸ್ಕರಣೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ಕೈಲಾಶ್ ಸಿಂಗ್ ಕಳೆದ ಆರು ತಿಂಗಳಿನಿಂದ ಗಂಭೀರ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಕುಟುಂಬವು ಸುಮಾರು ಏಳು ವರ್ಷಗಳ ಹಿಂದೆ ಮೆದುಳಿನ ರಕ್ತಸ್ರಾವದಿಂದ ಕಿರಿಯ ಮಗನನ್ನು ಕಳೆದುಕೊಂಡಿತ್ತು.

ಹಿರಿಯ ಸಹೋದರ ವೀರ್ ಸಿಂಗ್ ಒಬ್ಬರಿದ್ದಾರೆ. ನಿವಾಸಿಗಳು ಕುಟುಂಬವು ಈಗಾಗಲೇ ಹಲವಾರು ಬಿಕ್ಕಟ್ಟುಗಳಿಂದ ಬಳಲುತ್ತಿದೆ ಮತ್ತು ಸಾಕು ನಾಯಿಯ ಸ್ಥಿತಿ ಹದಗೆಟ್ಟಿರುವುದು ಸಹೋದರಿಯರನ್ನು ತೀವ್ರ ಖಿನ್ನತೆಗೆ ತಳ್ಳಿದೆ ಎಂದು ಹೇಳಿದರು. ಈ ಘಟನೆಯು ಇಡೀ ಪ್ರದೇಶವನ್ನು ಆಘಾತಕ್ಕೆ ದೂಡಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:03 pm, Fri, 26 December 25