ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಎಫ್‌ಐಆರ್‌ಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸುವಂತೆ ಖೇರಾ ಮನವಿಗೆ ಅಸ್ಸಾಂ,ಯುಪಿ ವಿರೋಧ

ಉತ್ತರ ಪ್ರದೇಶ ಸರ್ಕಾರ ಕೂಡಾ ಪವನ್ ಖೇರಾ ಅವರ ಮನವಿಯನ್ನು ವಜಾಗೊಳಿಸುವಂತೆ ಕೋರಿದೆ. ಇದು ತನಿಖೆಯನ್ನು ಸ್ಥಗಿತಗೊಳಿಸುವ ಕುತಂತ್ರ ಮತ್ತು ಕ್ರಿಮಿನಲ್ ಕಾನೂನಿನ ಪ್ರಕ್ರಿಯೆಗಳನ್ನು ಹಾಳುಮಾಡುವ ಪ್ರಯತ್ನ ಎಂದು ಯುಪಿ ಹೇಳಿದೆ.

ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಎಫ್‌ಐಆರ್‌ಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸುವಂತೆ ಖೇರಾ ಮನವಿಗೆ ಅಸ್ಸಾಂ,ಯುಪಿ ವಿರೋಧ
ಪವನ್ ಖೇರಾ

Updated on: Mar 03, 2023 | 6:28 PM

ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರ ವಿರುದ್ಧದ ಮೂರು ಎಫ್‌ಐಆರ್‌ಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸ್ಥಳಕ್ಕೆ ವರ್ಗಾಯಿಸುವಂತೆ ಮಾಡಿದ ಮನವಿಯನ್ನು ಅಸ್ಸಾಂ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿರೋಧಿಸಿದೆ. ತನ್ನ ಅಫಿಡವಿಟ್‌ನಲ್ಲಿ, ಅಸ್ಸಾಂ ಸರ್ಕಾರವು ಪ್ರಧಾನಿ ಮೋದಿ ವಿರುದ್ಧ ಖೇರಾ ಅವರ ಹೇಳಿಕೆಯು ಭಾರತವನ್ನು ಅಸ್ಥಿರಗೊಳಿಸುವ ಮತ್ತು ಮಾನನಷ್ಟಗೊಳಿಸುವ ವ್ಯಾಪಕ ಪಿತೂರಿಯ ಒಂದು ಭಾಗವಾಗಿದೆ ಎಂದು ಹೇಳಿಕೊಂಡಿದೆ.ಅವರು ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಶಾಂತಿಯನ್ನು ಕದಡಲು ಪ್ರಯತ್ನಿಸಿದರು ಎಂದು ಅಸ್ಸಾಂ ಸರ್ಕಾರ ಹೇಳಿದ್ದು, ಖೇರಾ ಇನ್ನೂ ಕ್ಷಮೆಯಾಚಿಸಿಲ್ಲ ಎಂದಿದೆ.

ಉತ್ತರ ಪ್ರದೇಶ ಸರ್ಕಾರ ಕೂಡಾ ಪವನ್ ಖೇರಾ ಅವರ ಮನವಿಯನ್ನು ವಜಾಗೊಳಿಸುವಂತೆ ಕೋರಿದೆ. ಇದು ತನಿಖೆಯನ್ನು ಸ್ಥಗಿತಗೊಳಿಸುವ ಕುತಂತ್ರ ಮತ್ತು ಕ್ರಿಮಿನಲ್ ಕಾನೂನಿನ ಪ್ರಕ್ರಿಯೆಗಳನ್ನು ಹಾಳುಮಾಡುವ ಪ್ರಯತ್ನ ಎಂದು ಯುಪಿ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ, ಅದಾನಿ ಗ್ರೂಪ್ ವಿರುದ್ಧ ವಂಚನೆಯ ಆರೋಪಗಳನ್ನು ಮಾಡುತ್ತಿರುವಾಗ ಖೇರಾ ಅವರು ಪ್ರಧಾನಿ ಮೋದಿಯನ್ನು ನರೇಂದ್ರ ‘ಗೌತಮ್ ದಾಸ್’ ಮೋದಿ ಎಂದು ಉಲ್ಲೇಖಿಸಿದ್ದರು. “ನೀವು ಸಂಸತ್ತಿನಲ್ಲಿ ಚರ್ಚೆಯಿಂದ ಏಕೆ ಓಡಿಹೋಗುತ್ತಿದ್ದೀರಿ? ನೀವು ಜೆಪಿಸಿಗೆ ಏಕೆ ಹೆದರುತ್ತೀರಿ? ಪಿ.ವಿ.ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ಜೆಪಿಸಿ ಸ್ಥಾಪಿಸಿದರು. ನರೇಂದ್ರ ‘ಗೌತಮ್ ದಾಸ್’ , ‘ದಾಮೋದರದಾಸ್’ ಗೆ ಜೆಪಿಸಿ ಬಗ್ಗೆ ಏನಾದರೂ ಸಮಸ್ಯೆ ಇದೆಯೇ ?ಅವರು ದಾಮೋದರದಾಸ್ ಅಲ್ಲವೇ? ಅವರ ಹೆಸರು ದಾಮೋದರದಾಸ್ ಆದರೆ ಕಾರ್ಯಗಳು ‘ಗೌತಮ್ ದಾಸ್’ ಎಂದಿದ್ದರು. ಅಂದಹಾಗೆ ನಾನು ಕನ್ಫ್ಯೂಸ್ ಮಾಡಿಕೊಂಡೆ ಎಂದು ಖೇರಾ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:Manish Sisodia: ದೆಹಲಿ ಅಬಕಾರಿ ನೀತಿ ಪ್ರಕರಣ: ಜಾಮೀನು ಮನವಿಯನ್ನು ಸುಪ್ರೀಂ ತಿರಸ್ಕರಿಸಿದ ನಂತರ ದೆಹಲಿ ಕೋರ್ಟ್​​ ಮೊರೆ ಹೋದ ಸಿಸೋಡಿಯಾ

ಆದಾಗ್ಯೂ, ಪ್ರಧಾನಿ ಮೋದಿಯಂತಹ ವ್ಯಕ್ತಿಯ ಬಗ್ಗೆ ಕಾಂಗ್ರೆಸ್‌ಗೆ ಅರ್ಹತೆ ಮತ್ತು ತಿರಸ್ಕಾರದ ಭಾವನೆ ಇದೆ ಎಂದು ಬಿಜೆಪಿ ಆರೋಪಿಸುವುದರೊಂದಿಗೆ ಈ ಹೇಳಿಕೆಗಳು ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ಫೆಬ್ರವರಿ 23 ರಂದು, ಖೇರಾ ಅವರನ್ನು ದೆಹಲಿಯಲ್ಲಿ ರಾಯ್‌ಪುರಕ್ಕೆ ಹೋಗುವ ಇಂಡಿಗೋ ವಿಮಾನವನ್ನು ಕೆಳಗಿಳಿಸಿದ ಘಟನೆಯೂ ನಡೆದಿತ್ತು. ಈಶಾನ್ಯ ರಾಜ್ಯದಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಅಸ್ಸಾಂ ಪೊಲೀಸರು ಅವರನ್ನು ಬಂಧಿಸುವ ಮೊದಲು ದೆಹಲಿ ಪೊಲೀಸ್ ತಂಡವು ಅವರನ್ನು ಬಂಧಿಸಿತು. ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಅದು ಇಂದಿನವರೆಗೆ ಬಂಧನದಿಂದ ಮಧ್ಯಂತರ ಪರಿಹಾರವನ್ನು ನೀಡಿತ್ತು. ಇದೀಗ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನನ್ನು ಮಾರ್ಚ್ 17ರವರೆಗೆ ವಿಸ್ತರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ