ಪತಿ ಮೂರು ಮದುವೆಯಾಗಿ ಮೂವರು ಹೆಂಡತಿಯನ್ನು ಕರೆದುಕೊಂಡು ಬರಲಿ ಎಂದು ಯಾವ ಮುಸ್ಲಿಂ ಮಹಿಳೆಯೂ ಬಯಸುವುದಿಲ್ಲ: ಅಸ್ಸಾಂ ಸಿಎಂ

ಎಲ್ಲರೂ ಯುಸಿಸಿಯನ್ನು ಬೆಂಬಲಿಸುತ್ತಾರೆ. ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿ ಮೂರು ಮದುವೆ ಮಾಡಿಕೊಂಡು ಮೂವರು ಹೆಂಡತಿಯರನ್ನು ಮನೆಗೆ ಕರೆತರಬೇಕೆಂದು ಬಯಸುವುದಿಲ್ಲ. ಯಾರಿಗೆ ಅದು ಬೇಕು? ಇದು ನನ್ನ ವಿಷಯವಲ್ಲ....

ಪತಿ ಮೂರು ಮದುವೆಯಾಗಿ ಮೂವರು ಹೆಂಡತಿಯನ್ನು ಕರೆದುಕೊಂಡು ಬರಲಿ ಎಂದು ಯಾವ ಮುಸ್ಲಿಂ ಮಹಿಳೆಯೂ ಬಯಸುವುದಿಲ್ಲ: ಅಸ್ಸಾಂ ಸಿಎಂ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Edited By: ರಶ್ಮಿ ಕಲ್ಲಕಟ್ಟ

Updated on: May 01, 2022 | 8:39 PM

ದೆಹಲಿ: ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code -UCC) ಜಾರಿಗೆ ತರಲು ಇಚ್ಛೆ ವ್ಯಕ್ತಪಡಿಸಿದ್ದು, ಇದನ್ನು ವಿರೋಧಿಸಿರುವ ಎಐಎಂಐಎಂ (AIMIM)  ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಭಾರತದಲ್ಲಿ ಇದು ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಯುಸಿಸಿ ಕುರಿತ ಚರ್ಚೆ ಮತ್ತೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅದರ ಪರವಾಗಿ ಮಾತನಾಡಿದ್ದು, ಇದು ಎಲ್ಲಾ ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಶನಿವಾರ ಮಾಧ್ಯಮದವರಲ್ಲಿ ಮಾತನಾಡಿದ ಶರ್ಮಾ “ಎಲ್ಲರೂ ಯುಸಿಸಿಯನ್ನು ಬೆಂಬಲಿಸುತ್ತಾರೆ. ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿ ಮೂರು ಮದುವೆ ಮಾಡಿಕೊಂಡು ಮೂವರು ಹೆಂಡತಿಯರನ್ನು ಮನೆಗೆ ಕರೆತರಬೇಕೆಂದು ಬಯಸುವುದಿಲ್ಲ. ಯಾರಿಗೆ ಅದು ಬೇಕು? ಇದು ನನ್ನ ವಿಷಯವಲ್ಲ, ಇದು ಮುಸ್ಲಿಂ ತಾಯಂದಿರು ಮತ್ತು ಮಹಿಳೆಯರಿಗೆ ಸಂಬಂಧಪಟ್ಟ ವಿಷಯವಾಗಿದೆ ಎಂದಿದ್ದಾರೆ. ಏತನ್ಮಧ್ಯೆ, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್‌ನ ಓವೈಸಿ, “ನಿರುದ್ಯೋಗ ಮತ್ತು ಹಣದುಬ್ಬರವು ಹೆಚ್ಚುತ್ತಿದೆ. ನೀವು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚಿಂತಿಸುತ್ತಿದ್ದೀರಿ. ನಾವು ಅದರ ವಿರುದ್ಧವಾಗಿದ್ದೇವೆ. ಭಾರತದಲ್ಲಿ ಯುಸಿಸಿ ಅಗತ್ಯವಿಲ್ಲ ಎಂದು ಕಾನೂನು ಆಯೋಗ ಹೇಳಿದೆ ಎಂದಿದ್ದಾರೆ.


ಗೋವಾ ಸಿವಿಲ್ ಕೋಡ್‌ನ ನಿಬಂಧನೆಯನ್ನು ಉಲ್ಲೇಖಿಸಿದ ಓವೈಸಿ, ಹಿಂದೂ ಪುರುಷನಿಗೆ 30 ವರ್ಷ ವಯಸ್ಸು ಆಗಿದ್ದರೆ ಅವನು ಎರಡನೇ ಹೆಂಡತಿಯನ್ನು ಹೊಂದಬಹುದು ಎಂದು ಹೇಳುತ್ತದೆ. ಈ ಬಗ್ಗೆ ಬಿಜೆಪಿ ಏನು ಹೇಳುತ್ತದೆ? ನೀವು ಅಲ್ಲಿ ಅಧಿಕಾರದಲ್ಲಿದ್ದೀರಿ. ಅದೇ ವೇಳೆ ಪೌಷ್ಠಿಕಾಂಶ ಮತ್ತು ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಸಂಪನ್ಮೂಲಗಳ ಸಮಾನ ಹಂಚಿಕೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನಿರ್ದೇಶನ ತತ್ವಗಳನ್ನು ಖಾತ್ರಿಪಡಿಸದ ಬಿಜೆಪಿ ಸರ್ಕಾರದ ವಿರುದ್ಧ ಓವೈಸಿ ವಾಗ್ದಾಳಿ ನಡೆಸಿದ್ದಾರೆ.


“ನೀವು ಮದ್ಯಪಾನವನ್ನು ಏಕೆ ನಿಷೇಧಿಸಬಾರದು? ಬಿಜೆಪಿ ಎಲ್ಲಿ ಅಧಿಕಾರದಲ್ಲಿದೆ… ಗುಜರಾತ್‌ನಲ್ಲಿ ನೀವು ನಿರ್ಬಂಧಗಳನ್ನು ವಿಧಿಸಿದಂತೆ, ಬೇರೆಡೆಯೂ ಅಂತಹ ನಿರ್ಬಂಧಗಳನ್ನು ಏಕೆ ವಿಧಿಸಬಾರದು? “ಹಿಂದೂ ಅವಿಭಜಿತ ಕುಟುಂಬದ ತೆರಿಗೆ ರಿಯಾಯಿತಿ ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರಿಗೆ ಏಕೆ ಇಲ್ಲ? ಅಲ್ಲದೆ, ಸಂವಿಧಾನವು ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನ ಸಂಸ್ಕೃತಿಯನ್ನು ರಕ್ಷಿಸುವ ಭರವಸೆ ನೀಡುತ್ತದೆ.ಅದನ್ನು ತೆಗೆದುಹಾಕಲಾಗುತ್ತದೆಯೇ? ಎಂದು ಓವೈಸಿ ಕೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us