
ಹೈದರಾಬಾದ್, ಮೇ 05: ಭಾರತಕ್ಕೆ ಹಾನಿ ಮಾಡುವ ಮುನ್ನ ಪಾಕಿಸ್ತಾನ(Pakistan) 100 ಬಾರಿ ಆಲೋಚಿಸಬೇಕು ಅಂತಾ ಕ್ರಮ ಕೈಗೊಳ್ಳಿ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಓವೈಸಿ ಭಯೋತ್ಪಾದನೆಯನ್ನು ಉತ್ತೇಜಿಸುವ ವಿಫಲ ರಾಷ್ಟ್ರ ಎಂದು ಕರೆದಿದ್ದಾರೆ.
ಭಾರತದ ಮೇಲೆ ಮತ್ತೊಮ್ಮೆ ದಾಳಿ ಮಾಡುವ ಮೊದಲು ಪಾಕಿಸ್ತಾನ ‘ನೂರು ಬಾರಿ ಯೋಚಿಸುವಂತೆ’ ಪ್ರಧಾನಿ ನರೇಂದ್ರ ಮೋದಿ ಅವರು ಬಲವಾದ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಭಯೋತ್ಪಾದಕ ದಾಳಿ ನಡೆಸಿದ್ದು ನಾವೇ ಎಂಬುದಕ್ಕೆ ಭಾರತ ಪುರಾವೆ ಕೊಡಲಿ, ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕತೆ ಹರಡುತ್ತಿದೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಪಾಕಿಸ್ತಾನ ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುವ ಓವೈಸಿ ಪಾಕಿಸ್ತಾನ ನಾಚಿಕೆಯಿಲ್ಲದೆ ಪುರಾವೆ ಕೇಳುತ್ತಿದೆ ಎಂದರು.
ನಾವು ನಿಮ್ಮನ್ನು ಪಠಾಣ್ಕೋಟ್ಗೆ ಆಹ್ವಾನಿಸಿ ನಿಮ್ಮ ಭಯೋತ್ಪಾದಕರು ನಮ್ಮ ವಾಯುಪಡೆ ನೆಲೆಯ ಮೇಲೆ ಎಲ್ಲಿ ದಾಳಿ ಮಾಡಿದರು ಎಂಬುದನ್ನು ತೋರಿಸಲಿಲ್ಲವೇ? ನೀವು ನಿಮ್ಮ ತಂಡವನ್ನು ಕಳುಹಿಸಿದ್ದೀರಿ ಅವರು ಅದನ್ನು ತಮ್ಮ ಕಣ್ಣಿನಿಂದಲೇ ನೋಡಿದ್ದಾರೆ, ಆದರೂ ನೀವು ಆ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಮತ್ತಷ್ಟು ಓದಿ: ಜಮ್ಮುವಿನ ಜೈಲುಗಳ ಮೇಲೆ ಭಯೋತ್ಪಾದಕ ದಾಳಿ ಸಾಧ್ಯತೆ, ಭದ್ರತೆ ಹೆಚ್ಚಳ
ತನ್ನ ನೆಲದಿಂದ ಭಯೋತ್ಪಾದಕರು ಬಂದು ಭಾರತದಲ್ಲಿ ಜನರನ್ನು ಕೊಲ್ಲುತ್ತಾರೆ ಎಂದು ಪಾಕಿಸ್ತಾನ ಎಂದಿಗೂ ಒಪ್ಪಿಕೊಳ್ಳುವುದಿಲ್ಲ.ಪಾಕಿಸ್ತಾನವನ್ನು ಮನವೊಲಿಸಲು ಪ್ರಯತ್ನಿಸುವ ಸಮಯ ಮುಗಿದಿದೆ ಎಂದು ದೂರಿದರು.
ಪಾಕಿಸ್ತಾನವು ಭಾರತವನ್ನು ಎಂದಿಗೂ ಶಾಂತಿಯಿಂದ ಬದುಕಲು ಬಿಡುವುದಿಲ್ಲ, ಇಂದು ಅವರಿಗೆ ಸೂಕ್ತ ಉತ್ತರ ನೀಡುವ ಸಮಯ. ಆದ್ದರಿಂದ ಈ ಭಯೋತ್ಪಾದನೆಯ ವಿಷ ಶಾಶ್ವತವಾಗಿ ಕೊನೆಗೊಳಿಸಬೇಕಿದೆ ಎಂದರು.
ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಲಷ್ಕರ್ ಎ ತೊಯ್ಬಾದ ಟಿಆರ್ಎಫ್ ಈ ದಾಳಿ ಹೊಣೆ ಹೊತ್ತುಕೊಂಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Mon, 5 May 25